`ಜಗತ್ತಿನಲ್ಲಿ ದಯೆ-ಧರ್ಮ, ಪ್ರೀತಿ ಸ್ಪೂರ್ತಿ ಹೊಂದಿದ ಏಕೈಕ ಧರ್ಮ ಹಿಂದೂ ಧರ್ಮ. ಮಣ್ಣಿನ ಕಣಗಳಲ್ಲಿಯೂ ಶ್ರೇಷ್ಠತೆ ಮತ್ತು ದೈವತ್ವವನ್ನು ಕಂಡಿದ್ದು ಸನಾತನ ಧರ್ಮ’ ಎಂದು ವಿಜಯನಗರದ ಹೂವಿನಹಡಗಲಿಯ ಸದ್ಗುರು ಶಿವಯೋಗಿ ಅಭಿನವ ಹಾಲವೀರಪ್ಪಜ್ಜ ಪಂಡಿತಾರಾಧ್ಯ ಮಹಾಸ್ವಾಮೀಜಿ ಹೇಳಿದ್ದಾರೆ.
ಅಂಕೋಲಾದ ಹಾರವಾಡದ ಈಶ್ವರ ದೇವಾಲಯದ ಆವರಣದಲ್ಲಿ ಹಿಂದೂ ಮಂಡಲ ಸಮಿತಿಯಿಂದ ನಡೆದ ಹಿಂದೂ ಸಮಾಜೋತ್ಸವದ ದಿವ್ಯ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದ್ದು, `ಪ್ರಶ್ನೆಯನ್ನು ಮಾಡಿ ಉತ್ತರವನ್ನು ಪಡೆಯಬಹುದಾದ ಧರ್ಮವೆಂದರೆ ಹಿಂದು ಧರ್ಮ. ಅನ್ನ ದಾಸೋಹ, ಅಕ್ಷರ ದಾಸೋಹದಂತೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜಗತ್ತಿನ ಸಕಲರ ಒಳಿತನ್ನು ಬಯಸುವ ಏಕೈಕ ಧರ್ಮ ಇದಾಗಿದೆ. ಮಹಿಳೆಯರನ್ನು ಗೌರವಿಸುವ, ಪೂಜಿಸುವ ಹಾಗೂ ಸಮಾಜದ ಎಲ್ಲರನ್ನೂ ಒಗ್ಗೂಡಿಸಿ ಶಾಂತಿ ಮಂತ್ರವ ಪಠಿಸುವ ಹಿಂದೂ ಧರ್ಮದ ನೈತಿಕ ಮೌಲ್ಯಗಳು ಮತ್ತೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಬದುಕಿದರೆ ಕೊನೆವರೆಗೆ ಸನಾತನಿಗಳಾಗಿಯೇ ಬದುಕೋಣ’ ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಆಗಮಿಸಿದ ಲೆಕ್ಕಪರಿಶೋಧಕ ಮತ್ತು ಆರ್ ಎಸ್ ಎಸ್ ಪ್ರಮುಖ ಅಶ್ವಿನ್ ಭಟ್ ಮಾತನಾಡಿ `ಹಿಂದೂ ಧರ್ಮವೂ ಪರಂಪರೆ, ಹಿರಿಮೆ, ಆಚಾರ ವಿಚಾರಗಳ ಮೂಲಕ ಹಿಂದಿನಿAದಲೂ ಶ್ರೇಷ್ಠತೆಯನ್ನು ಹೊಂದಿದೆ. ಶ್ರೀರಾಮನನ್ನು ದೇವರೆಂದು ಪೂಜಿಸುವುದಕ್ಕಿಂತ ಮಿಗಿಲಾಗಿ ಸಮಾಜಕ್ಕೆ ನೀಡಿದ ಆದರ್ಶದ ಹೆಗ್ಗುರುತು ಎಂದು ಗೌರವಿಸುತ್ತೇವೆ. ಹಿಂದೂ ಧರ್ಮದ ಶ್ರೇಷ್ಠತೆ ಜಗತ್ತಿಗೆ ತಿಳಿದಿದೆ. ಜಗತ್ತು ಆಧುನಿಕತೆಗೆ, ತಂತ್ರಜ್ಞಾನದ ಕಡೆಗೆ ತೆರೆದುಕೊಳ್ಳುವ ಮೊದಲೇ ಆವಿಷ್ಕಾರ, ಜ್ಞಾನ ಮತ್ತು ಸಂಪ್ರದಾಯಿಕ ಕಾರಣಗಳಿಂದ ಭಾರತವು ವಿಶ್ವಗುರುವಾಗಿತ್ತು. ಹಿಂದೂ ಧರ್ಮವೂ ಸಮಸ್ಯೆಗಳ ನಡುವೆ ಸಹಬಾಳ್ವೆಯ ಜೀವನವನ್ನು ಸಾರುತ್ತದೆ’ ಎಂದು ಹೇಳಿದರು.
ಶ್ರೀನಿಧಿ ಶ್ರೀಕಾಂತ ನಾಯ್ಕ ಅವರು ಸ್ವಾಗತಿಸಿದರು. ರಾಜು ಜನಾರ್ದನ ತಾಂಡೇಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ನಾಯ್ಕ ಅವರು ವೈಯಕ್ತಿಕ ಗೀತೆ ಹಾಡಿದರು. ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷ ಮಾರುತಿ ಹರಿಕಂತ್ರ ನಿರೂಪಿಸಿದರು. ಕೃಷ್ಣ ಪಾಂಡು ದುರ್ಗೇಕರ್ ವಂದಿಸಿದರು. ಹರ್ಷದ ಗಣರಾಜ್ ಸಾದಿಯೇ ಭರತನಾಟ್ಯ ಪ್ರದರ್ಶಿಸಿದರು. ಸಭಾ ಕಾರ್ಯಕ್ರಮದ ಮೊದಲು ಹಿಂದೂ ಸಮಾಜೋತ್ಸವ ಸಮಿತಿಯವರು ಪೂರ್ಣ ಕುಂಭದೊoದಿಗೆ ಸ್ವಾಮೀಜಿಗಳ ನೇತೃತ್ವದಲ್ಲಿ ಶೋಭಾ ಯಾತ್ರೆ ನಡೆಸಿದರು. ಕಾರ್ಯಕ್ರಮದ ಸಂಘಟಕರಾದ ದೀಪಕ ತಾಂಡೇಲ್, ರಾಜಾ ಪೆಡ್ನೆಕರ, ದಿಲೀಪ್ ಅರ್ಗೇಕರ, ನೀಲೇಶ ದುರ್ಗೇಕರ, ವಿನಾಯಕ ಚಂದ್ರಕಾAತ ಹರಿಕಂತ್ರ, ಸಂತೋಷ ಹನುಮಟ್ಟೇಕರ, ಸುಭಾಸ ನಾಯ್ಕ, ಗಣರಾಜ ಸಾದಿಯೇ, ಪ್ರವೀಣ್ ತಂಡೇಲ್, ಗಣರಾಜ ಟಾಕೇಕರ ರಾಜಾ ಗಾಂವಕರ, ಗಣರಾಜ ತಾಂಡೇಲ, ಯಮರಾಜ ಗೌಡ, ಶೈಲಾ ವಿ ದುರ್ಗೆಕರ್. ಆರ್ ಎಸ್ ಎಸ ಮುಖಂಡರು ಹಾಜರಿದ್ದರು.