ಯಲ್ಲಾಪುರ-ಅಂಕೋಲಾ ರಾಷ್ಟ್ರೀಯ ಹೆದ್ದಾರಿಯ ಸುಂಕಸಾಳದಲ್ಲಿ ಗುರುವಾರ ನಸುಕಿನಲ್ಲಿ ಸರಣಿ ಅಪಘಾತ ನಡೆದಿದ್ದು, ಈ ಅಪಘಾತದಲ್ಲಿ 24 ಜನ ಗಾಯಗೊಂಡಿದ್ದಾರೆ. ಆ ಪೈಕಿ 8 ಜನರ ಸ್ಥಿತಿ ಗಂಭೀರವಾಗಿದೆ.
ಅಪಘಾತ ನಡೆದ ನಂತರ ಬಸ್ಸಿನ ಒಳಗಿನಿಂದ ದೊಡ್ಡ ಆಕ್ರಂದನ ಕೇಳಿಸಿದ್ದು, ಸುತ್ತಲಿನ ಜನ ಸಹಾಯಕ್ಕೆ ದೌಡಾಯಿಸಿದ್ದಾರೆ. ಸ್ಥಳೀಯರು ಬಸ್ಸಿನ ಕಿಟಕಿ ಗಾಜುಗಳನ್ನು ಒಡೆದು ಅದರ ಒಳಗಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. 12 ಮಂದಿ ವಿದೇಶಿಗರು ಬಸ್ಸಿನಲ್ಲಿದ್ದು, ಗಾಯಗೊಂಡ ಅವರಿಗೆ ಸುಂಕಸಾಳದ ಜನ ಉಪಚಾರ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಕಾರವಾರದ ಕಿಮ್ಸ್’ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರನ್ನು ಬೇರೆ ಬೇರೆ ಕಡೆ ದಾಖಲಿಸಲಾಗಿದೆ.
ಇಲ್ಲಿ ಹುಬ್ಬಳ್ಳಿಯಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಬಸ್ಸಿಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಅದಾದ ನಂತರ ಆ ಲಾರಿ ಬಳ್ಳಾರಿಯಿಂದ ಪಣಜಿಗೆ ಸಂಚರಿಸುತ್ತಿದ್ದ ಬಸ್ಸಿಗೂ ಗುದ್ದಿದೆ. ಅಪಘಾತದ ಪರಿಣಾಮ ಅರಬೈಲ್ ಘಟ್ಟದವರೆಗೂ ವಾಹನಗಳು ಸಾಲಿನಲ್ಲಿ ನಿಂತಿದ್ದು, ಸಂಚಾರ ದಟ್ಟಣೆ ಸರಿಪಡಿಸಲು ಪೊಲೀಸರು ಹರಸಾಹಸ ಮಾಡಿದ್ದಾರೆ. ಯಲ್ಲಾಪುರ ಜಾತ್ರೆ ಮುಗಿಸಿ ಕರಾವಳಿ ಭಾಗಕ್ಕೆ ತೆರಳುವ ಅನೇಕರು ಇಲ್ಲಿ ಸಮಸ್ಯೆ ಅನುಭವಿಸಿದ್ದಾರೆ.
`ಅಪಘಾತ ತಪ್ಪಿಸಲು ನಿಧಾನವಾಗಿ ವಾಹನ ಓಡಿಸಿ’