ಶಿರಸಿಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿರುವ ಕಾರ್ತೀಕ ನಾರ್ವೇಕರ್ ಅವರಿಗೆ ಸಹದ್ಯೋಗಿಯೊಬ್ಬರು ಪ್ರೇಮ ಸಂದೇಶ ಕಳುಹಿಸಿದ್ದಾರೆ. ಆ ಪ್ರೀತಿ ಒಪ್ಪದ ಕಾರ್ತೀಕ್ ನಾರ್ವೇಕರ್ ಅವರು ಆ ಸಹದ್ಯೋಗಿ ವಿರುದ್ಧವೇ ಸಿಡಿದೆದ್ದಿದ್ದಾರೆ!
ಶಿರಸಿಯ ಚಿಪಗಿ ಫಾರೆಸ್ಟ್ ಕಾಲೋನಿಯಲ್ಲಿ ಕಾರ್ತೀಕ ನಾಗರಾಜ ನಾರ್ವೇಕರ್ (29) ಅವರು ವಾಸವಾಗಿದ್ದಾರೆ. 2020ರ ಅಕ್ಟೊಬರ್ ತಿಂಗಳಿನಿoದ ಶಿರಸಿ ಅರಣ್ಯಾಧಿಕಾರಿ ಕಚೇರಿಯಲ್ಲಿ ಅವರು ಉಪವಲಯ ಅರಣ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಅದಕ್ಕೂ ಮುನ್ನ ಅವರು ದಾಸನಕೊಪ್ಪ ಶಾಖೆಯಲ್ಲಿ ಸರ್ಕಾರಿ ಕೆಲಸ ನಿರ್ವಹಿಸಿದ್ದು, ಅಲ್ಲಿಯೇ ಕೆಲಸ ಮಾಡುತ್ತಿದ್ದ ಬೀಟ್ ಫಾರೆಸ್ಟರ್ ವಿದ್ಯಾಶ್ರೀ ಪರಶುರಾಮ ಜಾದವ್ ಅವರು ಪರಿಚಯವಾಗಿದ್ದಾರೆ.
ವಿದ್ಯಾಶ್ರೀ ಜಾದವ್ ಅವರು ಕಾರ್ತಿಕ್ ನಾರ್ವೇಕರ್ ಅವರನ್ನು ಪ್ರೀತಿಸುತ್ತಿದ್ದು, ಪ್ರೀತಿಯ ಸಂಕೇತವಾಗಿ ವಾಟ್ಸಪ್ ಸ್ಟೇಟಸ್ಸಿನಲ್ಲಿ ಕಾರ್ತೀಕ ನಾರ್ವೇಕರ್ ಅವರ ಫೋಟೋ ಹಾಕಿಕೊಳ್ಳುತ್ತಿದ್ದರು. ಅದರೊಂದಿಗೆ ಮೊಬೈಲ್ ಮೂಲಕ ಪದೇ ಪದೇ ಮೆಸೆಜ್ ಮಾಡಿ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದರು. ಆದರೆ, ಕಾರ್ತೀಕ ನಾರ್ವೇಕರ್ ಅವರು ಆ ಪ್ರೀತಿಯನ್ನು ಒಪ್ಪಿರಲಿಲ್ಲ. `ಜೀವನದಲ್ಲಿ ಏನಾದರೂ ಸಾಧಿಸಬೇಕು’ ಎಂಬ ನಿಟ್ಟಿನಲ್ಲಿ ಕಾರ್ತೀಕ ನಾರ್ವೇಕರ್ ಅವರು ಸರ್ಕಾರಿ ಸೇವೆ ಮಾಡಿಕೊಂಡಿದ್ದು, ಸಹದ್ಯೋಗಿ ವಿದ್ಯಾಶ್ರೀ ಜಾದವ್ ಅವರ ಪ್ರೀತಿಯ ಸಂದೇಶ ಅವರ ಗುರಿಗೆ ಅಡ್ಡಿಪಡಿಸುತ್ತಿತ್ತು. `ಪ್ರೀತಿ-ಪ್ರೇಮದಿಂದ ದೂರವಿರೋಣ’ ಎಂದು ಕಾರ್ತೀಕ ನಾರ್ವೇಕರ್ ಅವರು ವಿದ್ಯಾಶ್ರೀ ಜಾದವ್ ಅವರಿಗೆ ತಿಳುವಳಿಕೆ ಹೇಳಿದ್ದರು. ಆದರೆ, ವಿದ್ಯಾಶ್ರೀ ಜಾದವ್ ಅವರು ದಿನವೂ ಕಳುಹಿಸುತ್ತಿದ್ದ ಪ್ರೀತಿಯ ಸಂದೇಶಗಳಿಗೆ ಕೊನೆಯಿರಲಿಲ್ಲ.
ಮೊಬೈಲ್ ಮೆಸೆಜ್, ಫೇಸ್ಬುಕ್ ಮೆಸೆಂಜರ್ ಜೊತೆ ಇಮೇಲ್ ಮೂಲಕವೂ ವಿದ್ಯಾಶ್ರೀ ಜಾದವ್ ಅವರು ನಿರಂತರ ಸಂದೇಶ ರವಾನಿಸುತ್ತಿದ್ದರು. ಬೇರೆ ಬೇರೆ ಮೊಬೈಲ್ ಸಂಖ್ಯೆಯಿoದ ಮೆಸೆಜ್ ಮಾಡಿ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದರು. `ವನ ದೇವತೆ’ ಎಂಬ ಫೇಸ್ಬುಕ್ ಪ್ರೊಪೈಲ್ ಮೂಲಕವೂ ಮತ್ತೆ ಮತ್ತೆ ಮೆಸೆಜ್ ಮಾಡುತ್ತಿದ್ದರು. `ನೀವು ಒಳ್ಳೆಯವರಾ? ಕೆಟ್ಟವರಾ? ಎಂದು ಗೊತ್ತಿಲ್ಲ. ಆದರೆ, ನಿಮ್ಮ ಬಿಟ್ಟು ಬದುಕಲು ಆಗಲ್ಲ’ ಎಂದೆಲ್ಲ ಮೇಲ್ ಕಳುಹಿಸಿದ್ದರು. `ನೀವಿಲ್ಲದಿದ್ದರೆ ನಾ ಸತ್ತು ಹೋಗುವೆ’ ಎಂದು ಹೆದರಿಸಿದ್ದರು. ಜೊತೆಗೆ ಕಾರ್ತೀಕ ನಾರ್ವೇಕರ್ ಅವರ ಫೋಟೋವನ್ನು ತಮ್ಮ ಫೋಟೋದ ಜೊತೆ ಸೇರಿಸಿ ಶೇರ್ ಮಾಡಿದ್ದರು.
ಇದರಿಂದ ಬೇಸತ್ತ ಕಾರ್ತೀಕ ನಾರ್ವೇಕರ್ ಅವರು ಬನವಾಸಿ ಪೊಲೀಸ್ ಠಾಣೆಗೆ ಹೋಗಿ ತಮ್ಮ ಸಮಸ್ಯೆ ಬಗ್ಗೆ ಹೇಳಿದ್ದರು. ಪೊಲೀಸರ ಮೂಲಕವೂ ವಿದ್ಯಾಶ್ರೀ ಜಾದವ್ ಅವರಿಗೆ ಬುದ್ದಿ ಹೇಳಿಸಿದ್ದರು. ಅದಾಗಿಯ, ವಿದ್ಯಾಶ್ರೀ ಜಾದವ್ ಅವರು ಪ್ರೀತಿಸುವಂತೆ ಬೇಡಿಕೊಳ್ಳುವುದನ್ನು ಮಾತ್ರ ಬಿಟ್ಟಿರಲಿಲ್ಲ. ಕಾರ್ತೀಕ ನಾರ್ವೇಕರ್ ಅವರು ದಾಸನಕೊಪ್ಪದಿಂದ ಶಿರಸಿ ವಲಯಕ್ಕೆ ವರ್ಗವಾದ ನಂತರವೂ ವಿದ್ಯಾಶ್ರೀ ಜಾದವ್ ಅವರು ಕಾರ್ತೀಕ್ ಅವರಿಗೆ ಮೆಸೆಜ್ ಮಾಡುವುದನ್ನು ಮುಂದುವರೆಸಿದ್ದರು.
ಹೀಗಿರುವಾಗ ಫೆಬ್ರವರಿ 10ರಂದು ವಿದ್ಯಾಶ್ರೀ ಜಾದವ್ ಅವರು ಕಾರ್ತೀಕ ನಾರ್ವೇಕರ್ ಅವರು ಕೆಲಸ ಮಾಡುವ ಕಚೇರಿಗೆ ಬಂದರು. ಅಲ್ಲಿಯೂ ಕಾರ್ತೀಕ ನಾರ್ವೇಕರ್ ಅವರ ಬಗ್ಗೆ ವಿಚಾರಣೆ ನಡೆಸಿದರು. `ನೀ ಪ್ರೀತಿಸದಿದ್ದರೆ ನಾ ಸತ್ತು ಹೋಗುವೆ’ ಎಂದು ಮೆಸೆಜ್ ಮಾಡಿದರು. ಇದರಿಂದ ಹೆದರಿದ ಕಾರ್ತೀಕ್ ನಾರ್ವೇಕರ್ ಅವರು ಈ ವಿಷಯದ ಬಗ್ಗೆ ಮೇಲಧಿಕಾರಿಗಳಲ್ಲಿ ಹೇಳಿದರು. ಕುಟುಂಬದವರ ಜೊತೆ ಚರ್ಚಿಸಿದ ಅವರು ವಿದ್ಯಾಶ್ರೀ ಜಾದವ್ ಅವರಿಂದ ಬಿಡುಗಡೆ ಕೋರಿ ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯದ ಸೂಚನೆ ಮೇರೆಗೆ ಶಿರಸಿ ನಗರ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿದರು.