ಶಿರಸಿ ಹೊಸಪೇಟೆಯಲ್ಲಿರುವ ಚೋಳಮಂಡಳo ಇನ್ವೆಸ್ಟಮೆಂಟ್ & ಫೈನಾನ್ಸ ಕಂಪನಿಯವರು ಯಲ್ಲಾಪುರದ ಕಾರ್ತಿಕ್ ಸಿದ್ದಿ ಅವರಿಗೆ ಅನ್ಯಾಯ ಮಾಡಿದ್ದಾರೆ. ಸೆಕೆಂಡ್ ಹ್ಯಾಂಡ್ ಮ್ಯಾಕ್ಸಿ ಟ್ರಕ್ ಖರೀದಿಗೆ ಸಾಲ ಕೊಡುವುದಾಗಿ ನಂಬಿಸಿದ ಫೈನಾನ್ಸಿನವರು ಕಾರ್ತಿಕ್ ಸಿದ್ದಿ ಅವರಿಂದ ಹಕ್ಕು ಬದಲಾವಣೆ, ವಾಹನದ ಕಂತು ಎಂದು ಹಣ ಪಾವತಿಸಿಕೊಂಡಿದ್ದು, ನಂತರ ಆ ವಾಹನವನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ!
ಯಲ್ಲಾಪುರದ ದೆಹಳ್ಳಿಯಲ್ಲಿ ಕಾರ್ತಿಕ ಕೃಷ್ಣ ಸಿದ್ದಿ ಅವರು ವಾಸವಾಗಿದ್ದಾರೆ. ಚಾಲಕರಾಗಿರುವ ಅವರು ಜೀವನ ನಡೆಸಲು ಮ್ಯಾಕ್ಸಿ ಟ್ರಕ್ ಖರೀದಿಗೆ ನಿರ್ಧರಿಸಿದ್ದರು. 2022ರಲ್ಲಿ ಮ್ಯಾಕ್ಸಿ ಟ್ರಕ್ ಹುಟುಕಾಟ ನಡೆಸುತ್ತಿರುವಾಗ ಅವರಿಗೆ ಯಲ್ಲಾಪುರ ರವೀಂದ್ರ ನಗರದ ವ್ಯಾಪಾರಿ ಮನೋಜ ಮಂಜುನಾಥ ನಾಯ್ಕ ಅವರ ಪರಿಚಯವಾಯಿತು. ಅವರ ಬಳಿಯಿದ್ದ ಮಹೇಂದ್ರಾ ಕಂಪನಿಯ ಬುಲೆರೋ ಮ್ಯಾಕ್ಸಿ ಟ್ರಕ್ ಖರೀದಿಗಾಗಿ ಕಾರ್ತಿಕ್ ಸಿದ್ದಿ ಅವರು ಮಾತುಕಥೆ ನಡೆಸಿದರು. ಅದರ ಪ್ರಕಾರ ಆ ವಾಹನಕ್ಕೆ 7.75 ಲಕ್ಷ ನೀಡುವ ಬಗ್ಗೆ ಒಪ್ಪಂದ ಮಾಡಿಕೊಂಡರು.
1.60 ಲಕ್ಷ ರೂ ಹಣ ಪಾವತಿ ಮಾಡಿದ ಕಾರ್ತಿಕ್ ಸಿದ್ದಿ ಅವರು ಉಳಿದ ಹಣಕ್ಕಾಗಿ ಫೈನಾನ್ಸಿನವರ ಮೊರೆ ಹೋಗಲು ನಿರ್ಧರಿಸಿದರು. ಶಿರಸಿ ಹೊಸಪೇಟೆ ರಸ್ತೆಯ ಲೇಕಾನಂದ ಬಿಲ್ಡಿಂಗ್’ನಲ್ಲಿದ್ದ ಚೋಳ ಮಂಡಳA ಫೈನಾನ್ಸಿನ ಮುಖ್ಯ ವ್ಯವಸ್ಥಾಪಕ ಚನ್ನಪ್ಪ ಹಾಗೂ ಮನೋಜ ನಾಯ್ಕ ಸೇರಿ 6.15 ಲಕ್ಷ ರೂ ಸಾಲವನ್ನು ಕಾರ್ತಿಕ್ ಸಿದ್ದಿ ಅವರ ಹೆಸರಿಗೆ ವರ್ಗಾವಣೆ ಮಾಡಿದರು. ಅದಾದ ನಂತರ ವಾಹನದ ಕಂತು ಎಂದು 90 ಸಾವಿರ ರೂಪಾಯಿಯನ್ನು ಕಾರ್ತಿಕ್ ಸಿದ್ದಿ ಅವರಿಂದ ವಸೂಲಿ ಮಾಡಿದರು. ಹಕ್ಕು ಬದಲಾವಣೆಗಾಗಿ ಮತ್ತೆ 25 ಸಾವಿರ ರೂ ಹಣಪಡೆದರು. ಆದರೆ, ವಾಹನದ ಹಕ್ಕು ಬದಲಾವಣೆ ಮಾತ್ರ ಮಾಡಲಿಲ್ಲ.
ಈ ಬಗ್ಗೆ ಕಾರ್ತಿಕ ಸಿದ್ದಿ ಅವರು ಪ್ರಶ್ನಿಸಿದಾಗ `ಮೇಲಧಿಕಾರಿಗಳ ಪತ್ರ ಬಾರದ ಕಾರಣ ಹಕ್ಕು ಬದಲಾವಣೆ ಆಗಿಲ್ಲ’ ಎಂಬ ಉತ್ತರ ಸಿಕ್ಕಿತು. ಈ ನಡುವೆ ಫೈನಾನ್ಸಿನ ಫಂಡ್ ಕಲೆಕ್ಷನರ್ ಗಂಗಾಧರ ವಿರೂಪಾಕ್ಷ ಕುಂಬಾರ್ ಅವರು ಐದು ಜನ ದಾಂಡಿಗರ ಜೊತೆ ಕಾರ್ತಿಕ್ ಸಿದ್ದಿ ಅವರ ಮನೆ ಬಳಿ ಬಂದರು. ಕಾರ್ತಿಕ್ ಸಿದ್ದಿ ಅವರ ತಾಯಿ ಸೀತಾ ಸಿದ್ದಿ ಅವರ ಬಳಿ ಕಾಸು ಕೇಳಿದರು. 6.40 ಲಕ್ಷ ರೂ ಹಣ ಕಟ್ಟದಿದ್ದರೆ ವಾಹನ ಜಪ್ತು ಮಾಡುವುದಾಗಿ ಹೇಳಿದ್ದು, `ಆ ವಾಹನ ತಮ್ಮ ಬಳಿಯೇ ಇದೆ’ ಎಂದು ಕಾರ್ತಿಕ್ ಸಿದ್ದಿ ಫೈನಾನ್ಸಿನ ಕಚೇರಿಗೆ ಹೋಗಿ ತಿಳಿಸಿದರು. `ಹಕ್ಕು ಬದಲಾವಣೆ ಸಹ ಆಗಿಲ್ಲ’ ಎಂದು ಸಮಸ್ಯೆ ಹೇಳಿದರು.
`2022ರಲ್ಲಿ ಆನಗೋಡು ಕೆನರಾ ಬ್ಯಾಂಕಿನ ಚೆಕ್ ಬುಕ್ಗೆ ಸಹಿ ಹಾಕಿ ಕೊಟ್ಟಿದ್ದೇನೆ. ಅದನ್ನು ಏನು ಮಾಡಿದಿರಿ?’ ಎಂದು ಕಾರ್ತಿಕ ಸಿದ್ದಿ ಅವರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಫೈನಾನ್ಸಿನ ಬ್ರಾಂಚ್ ಮ್ಯಾನೇಜರ್ ವಿಶಾಲ್ ಬಿಬಿಎಂ ಅವರು ಚೆನೈನಲ್ಲಿ ಚೆಕ್ ಬೌನ್ಸ್ ಕೇಸ್ ಹಾಕುವುದಾಗಿ ಬೆದರಿಸಿದರು. ಅದಾದ ನಂತರ ಕಾರ್ತಿಕ್ ಸಿದ್ದಿ ಅವರು ಖರೀದಿಸಿದ ವಾಹನವನ್ನು ತುಮಕೂರಿನ ಆರ್ ಟಿ ಓ ಕಚೇರಿ ಬಳಿಯ ವ್ಯಾಪಾರಿ ಸತೀಶ ಎಂ ಎನ್, ಶ್ರೀಗಿರಿಪುರದ ರಾಕೇಶ ಎಸ್ ಅವರಿಗೆ ಮಾರಾಟ ಮಾಡಿರುವುದು ಗಮನಕ್ಕೆ ಬಂದಿತು. ಶಿರಸಿ ಹೊಸಪೇಟೆ ರಸ್ತೆಯಲ್ಲಿರುವ ಚೋಳ ಮಂಡಳA ಇನ್ವೆಸ್ಟಮೆಂಟ್ & ಫೈನಾನ್ಸ ಸಿಬ್ಬಂದಿ ಜೊತೆ ವಾಹನ ಮಾರಾಟಗಾರ ಹಾಗೂ ಖರೀದಿದಾರರ ವಿರುದ್ಧ ಕಾರ್ತಿಕ್ ಸಿದ್ದಿ ಅವರು ಪೊಲೀಸ್ ದೂರು ನೀಡಿದರು.