ದಾಂಡೇಲಿಯ ಕೆರವಾಡ ಪ್ರದೇಶದಲ್ಲಿರುವ ಶ್ರೇಯಸ್ ಪೇಪರ್ ಮಿಲ್ಲಿಗೆ ಭಾರೀ ಪ್ರಮಾಣದಲ್ಲಿ ಬೆಂಕಿ ಬಿದ್ದಿದೆ. ಕಂಪನಿ ಆವರಣದಲ್ಲಿ ಸಂಗ್ರಹಿಸಿದ್ದ ಪ್ಲಾಸ್ಟಿಕ್ ತ್ಯಾಜ್ಯ ಹೊತ್ತಿ ಉರಿದಿದೆ.
ಇಲ್ಲಿ ಕಳೆದ ಅನೇಕ ವರ್ಷಗಳಿಂದ ಪ್ಲಾಸ್ಟಿಕ್ ಸಂಗ್ರಹಿಸಿಡಲಾಗಿತ್ತು. ಭಾನುವಾರ ಆ ಪ್ಲಾಸ್ಟಿಕ್ ರಾಶಿಗೆ ಬೆಂಕಿ ತಗುಲಿದ್ದರಿಂದ ದಟ್ಟ ಹೊಗೆ ಕಾಣಿಸಿತು. ಕಾರ್ಖಾನೆ ಸುತ್ತಲಿನ 500ಮೀ ಪ್ರದೇಶದಲ್ಲಿ ಬೆಂಕಿಯ ಜ್ವಾಲೆ ಆವರಿಸಿದ್ದು, ಆ ಪ್ರಮಾಣದಲ್ಲಿ ಬೆಂಕಿ ನೋಡಿದ ಜನ ಆತಂಕಕ್ಕೆ ಒಳಗಾದರು. ಗಾಳಿಯ ವೇಗಕ್ಕೆ ತಕ್ಕ ಹಾಗೇ ಬೆಂಕಿಯೂ ಎಲ್ಲಡೆ ಬಹುಬೇಗ ಪ್ರಸರಿಸಿದ್ದರಿಂದ ಒಮ್ಮೆಲೆ ನಿಯಂತ್ರಣ ಸಾಧ್ಯವಾಗಲಿಲ್ಲ.
ಎರಡು ವಾರದ ಹಿಂದೆಯೂ ಈ ಭಾಗದಲ್ಲಿ ಅಗ್ನಿ ಅನಾಹುತ ನಡೆದಿತ್ತು. ಆ ವೇಳೆ ದೊಡ್ಡ ಪ್ರಮಾಣದಲ್ಲಿ ಅನಾಹುತ ನಡೆದಿರಲಿಲ್ಲ. ಆದರೆ, ಈ ಬಾರಿ ಕಾರ್ಖಾನೆ ಕಟ್ಟಡದವರೆಗೂ ಬೆಂಕಿ ಸಮೀಪಿಸಿದ್ದು, ಶೈಲೇಶ್ ಪರಮಾನಂದ ಹಾಗೂ ಪಿಐ ಶಿವಾನಂದ ಅಂಬಿಗೇರ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಬಗ್ಗೆ ಚರ್ಚಿಸಿದರು. ಕಾಗದ ಕಂಪನಿಯ ಅಗ್ನಿಶಾಮಕ ಸಿಬ್ಬಂದಿ ಜೊತೆ ದಾಂಡೇಲಿ, ಹಳಿಯಾಳ ಮತ್ತು ಜೊಯಿಡಾ ಭಾಗದಿಂದಲೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸುವ ಪ್ರಯತ್ನ ಮಾಡಿದರು.
ಭಾನುವಾರ ಮಧ್ಯಾಹ್ನದ ವೇಳೆ ಅಗ್ನಿ ಅವಘಡ ನಡೆದಿದ್ದು, ರಾತ್ರಿ 9 ಗಂಟೆಯವರೆಗೆ ಕಾರ್ಯಾಚರಣೆ ನಡೆದರೂ ಬೆಂಕಿ ಆರಲಿಲ್ಲ. ಸೋಮವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಮುಂದುವರೆದಿದ್ದು, ಸದ್ಯ ದೊಡ್ಡ ಅನಾಹುತ ಆಗದಂತೆ ಮುನ್ನಚ್ಚರಿಕೆವಹಿಸಲಾಗಿದೆ.