ಸಾಕಷ್ಟು ವಿರೋಧದ ನಡುವೆಯೂ ಸರ್ಕಾರ ಹೊನ್ನಾವರದಲ್ಲಿ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಆಸಕ್ತಿವಹಿಸಿದ್ದು, ಬಂಗಾರಮಕ್ಕಿ ವೀರಾಂಜನೇಯ ಸಂಸ್ಥಾನದ ಮಾರುತಿ ಗುರೂಜಿ ಈ ಅವೈಜ್ಞಾನಿಕ ಯೋಜನೆ ವಿರುದ್ಧ ಇನ್ನಷ್ಟು ಆಕ್ರೋಶಹೊರಹಾಕಿದ್ದಾರೆ. `ಜನ ವಿರೋಧದ ನಡುವೆಯೂ ಈ ಯೋಜನೆ ಮಾಡುವುದಾದರೆ ತನ್ನ ಸಮಾಧಿ ಮೇಲೆ ಮಾಡಲಿ’ ಎಂದು ಮಾರುತಿ ಗುರೂಜಿ ಸಿಟ್ಟಿನಿಂದ ಹೇಳಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು `ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಟಾನ ಪ್ರದೇಶವು ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಬರುತ್ತದೆ. ಪಶ್ವಿಮ ಘಟ್ಟಗಳನ್ನು ಯುನೆಸ್ಕೋ ಪಾರಂಪರಿಕ ತಾಣ ಎಂದು ಘೋಷಿಸಿದೆ’ ಎಂದು ತಿಳಿಸಿದರು. `ಯುನೆಸ್ಕೋ ಪಶ್ಚಿಮಘಟ್ಟ ರಕ್ಷಣೆಗಾಗಿ ಕಳೆದ 10 ವರ್ಷದಲ್ಲಿ 8.16 ಬಿಲಿಯನ್ ಅಂದರೆ, 12 ಸಾವಿರ ಕೋಟಿ ವಿನಿಯೋಗಿಸಿದೆ. ಹೀಗಾಗಿ ಪಶ್ಚಿಮಘಟ್ಟದ ಬಗ್ಗೆ ಯುನೆಸ್ಕೋ ಕಾಳಜಿಹೊಂದಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಇಡೀ ಪಶ್ಚಿಮ ಘಟ್ಟದಲ್ಲಿನ ಅಪರೂಪದ ಜೀವ ವೈವಿಧ್ಯತೆ ನಾಶವಾಗಲಿರುವ ಕುರಿತು ಯುನೆಸ್ಕೋ ಗಮನಕ್ಕೆ ತರಲಾಗಿದೆ’ ಎಂಬ ಮಾಹಿತಿ ಬಹಿರಂಗಪಡಿಸಿದರು. `ಪಂಪ್ಡ್ ಸ್ಟೋರೇಜ್ ನಿರ್ಮಾಣ ಯೋಜನೆಯ ವಿವರವನ್ನು ಯುನೆಸ್ಕೋ ಗಮನಕ್ಕೆ ತಂದಿದ್ದೇವೆ. ಯುನೆಸ್ಕೋ ಸಹ ಸರ್ಕಾರಕ್ಕೆ ಕೆಲ ಸ್ಪಷ್ಟ ನಿರ್ದೇಶನ ನೀಡಿದೆ’ ಎಂದವರು ವಿವರಿಸಿದರು.
`ಶರಾವತಿ ಭೂಗತ ಯೋಜನೆಯಿಂದ ಅಳಿವಿನಂಚಿನಲ್ಲಿರುವ ಸಿಂಹಬಾಲದ ಸಿಂಗಳೀಕ, ಕೆಂದಳಿಲು, ಕಾಳಿಂಗ ಸರ್ಪ, ಮಂಗಟ್ಟೆ ಹಕ್ಕಿಗಳ ಜೊತೆ ಅಪರೂಪದ ಔಷಧೀಯ ಸಸ್ಯಗಳು ನಾಶವಾಗಲಿದೆ’ ಎಂದವರು ಎಚ್ಚರಿಸಿದರು. `ಶರಾವತಿ ಯೋಜನೆಗಾಗಿ 18 ಸಾವಿರ ಟನ್ ಸ್ಫೋಟಕಗಳನ್ನು ಬಳಸಲಾಗುತ್ತದೆ. ಭೂಗತ ಬಂಡೆಗಳನ್ನು ಒಡೆದು ಸುರಂಗ ಮಾರ್ಗ ಕೊರೆಯಲಾಗುತ್ತದೆ. ಇದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಪರಿಸರ ನಾಶವಾಗಲಿದೆ’ ಎಂದವರು ಆತಂಕವ್ಯಕ್ತಪಡಿಸಿದರು. `ಪಂಪ್ಡ್ ಸ್ಟೋರೇಜ್ ಯೋಜನೆಯಿಂದಾಗುವ ಅನಾಹುತಗಳನ್ನು ಮನಗೊಂಡು ಜಗತ್ತಿನ ನಂ.1 ದೇಶವಾದ ಅಮೇರಿಕಾವೇ ತನ್ನಲ್ಲಿರುವ ಎಲ್ಲಾ ಈ ಪಂಪ್ಡ್ ಸ್ಟೋರೇಜ್ ವಿದ್ಯುತ್ ಘಟಕಗಳನ್ನು ಬಂದ್ ಮಾಡುತ್ತಿದೆ’ ಎಂದರು.
`ಈ ಜನವಿರೋಧಿ, ಪರಿಸರ ಹಾಗೂ ಜೀವ ವೈವಿಧ್ಯತೆಗಳಿಗೆ ಮಾರಕವಾದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಜನಹೋರಾಟದ ಮೂಲಕ ಓಡಿಸುತ್ತೇವೆ. ಅದಾಗಿಯೂ, ಸರ್ಕಾರ ಯೋಜನೆ ಮಾಡಿದರೆ ಅದು ತನ್ನ ಸಮಾಧಿ ಮೇಲೆಯೇ ಮಾಡಬೇಕು. ಯೋಜನೆ ಶುರುವಾದ ಕ್ಷಣದಲ್ಲಿ ತಾನು ಇರಲ್ಲ’ ಎಂದು ಎಚ್ಚರಿಸಿದರು.