ಬೇರೆ ಬೇರೆ ರಾಜ್ಯದಿಂದ ಬಾಲ ಕಾರ್ಮಿಕರನ್ನು ಕರೆಯಿಸಿ ಅವರನ್ನು ಅಂಕೋಲಾದಲ್ಲಿ ದುಡಿಸಿಕೊಳ್ಳುತ್ತಿದ್ದ ವ್ಯಾಪಾರಿಯೊಬ್ಬನನ್ನು ಅಂಕೋಲಾ ಎಸೈ ಮಹಾಬಲೇಶ್ವರ ಗಡರ್ ಅವರು ತಮ್ಮ ಚಾಣಾಕ್ಷತನದಿಂದ ಬಂಧಿಸಿದ್ದಾರೆ. ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪಿ ರಾಮರ್ ಪೆರುಮೇರಾ ತೆವರ್ ಅವರು ಮಧುರೈನಲ್ಲಿ ಸಿಕ್ಕಿಬಿದ್ದಿದ್ದಾರೆ.
ಅಂಕೋಲಾ ತಾಲೂಕಿನ ಮಾದನಗೇರಿ ಬಳಿ ರಾಮನ್ ಅಯ್ಯರ್ ತೇವರ್ ಹಾಗೂ ಅವರ ಪತ್ನಿ ಮಾಗಾದೇವಿ ತೇವರ್ ಜೊತೆ ಪಿ ರಾಮರ್ ಪೆರುಮೇರಾ ತೆವರ್ ಎಂಬಾತರು ಸೇರಿ ಬೇಕರಿ ನಡೆಸುತ್ತಿದ್ದರು. ತಮ್ಮ ಬೇಕರಿ ಕೆಲಸಕ್ಕಾಗಿ ಅವರು 16 ವರ್ಷದ ಇಬ್ಬರು ಹಾಗೂ 14 ವರ್ಷದ ಒಬ್ಬರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು. ಅವರ ಜೊತೆ 21 ವರ್ಷದ ಮತ್ತೊಬ್ಬರು ಇದ್ದು, ಆ ಎಲ್ಲರನ್ನು ತಮ್ಮ ಮನೆ ಕೆಲಸಕ್ಕೆ ಸಹ ನಿಯೋಜಿಸಿದ್ದರು. ಬೇರೆ ಬೇರೆ ಕಡೆ ಪೇಟಿಂಗ್ ಕೆಲಸಕ್ಕೆ ಸಹ ಆ ಬಾಲ ಕಾರ್ಮಿಕರನ್ನು ಕಳುಹಿಸುತ್ತಿದ್ದರು.
ಮಧುರೈಯ ಆ ಮೂವರು ಬಾಲಕರು ಶಿಕ್ಷಣದಿಂದ ವಂಚಿತರಾಗಿದನ್ನು ಅಧಿಕಾರಿಗಳು ಗಮನಿಸಿದ್ದರು. 2019ರಲ್ಲಿ ಮಾದನಗೇರಿಯಲ್ಲಿರುವ ಮನೆ ಹಾಗೂ ಬೇಕರಿ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದರು. ಆಗ, ಮಣಿಕಂಠ, ಶ್ರವಣ, ಪರಮೇಶ, ಶಿವಾ ಎಂಬ ಬಾಲಕರು ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ದುಡಿಯುತ್ತಿರುವುದು ಕಾಣಿಸಿತು. ಮಣಿಕಂಟ ಅವರನ್ನು ಹೊರತುಪಡಿಸಿ ಉಳಿದ ಮೂವರು ಅಪ್ರಾಪ್ತರಾಗಿದ್ದು, ಜೀತ ಕಾರ್ಮಿಕರಾಗಿ ಬಾಲಕರನ್ನು ದುಡಿಸಿಕೊಳ್ಳುತ್ತಿದ್ದ ರಾಮನ್ ಅಯ್ಯರ್ ತೇವರ್ ಹಾಗೂ ಅವರ ಪತ್ನಿ ಮಾಗಾದೇವಿ ತೇವರ್ ಅವರನ್ನು ಪೊಲೀಸರು ಬಂಧಿಸಿದರು. ಈ ವೇಳೆ ಮತ್ತೊಬ್ಬ ಆರೋಪಿ ಪಿ ರಾಮರ್ ಪೆರುಮೇರಾ ತೆವರ್ ಓಡಿ ಪರಾರಿಯಾಗಿದ್ದರು.
ಬಾಲ ಕಾರ್ಮಿಕರನ್ನು ದುಡಿಸಿಕೊಂಡ ತಪ್ಪಿಗೆ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಆದರೆ, ಪರಾರಿಯಾಗಿದ್ದ ಪಿ ರಾಮರ್ ಪೆರುಮೇರಾ ತೆವರ್ ಈವರೆಗೂ ಪತ್ತೆ ಆಗಿರಲಿಲ್ಲ. ಪರಾರಿಯಾದವನ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿದರು. ಅಂಕೋಲಾ ಎಸೈ ಮಹಾಬಲೇಶ್ವರ ಗಡರ್ ಅವರು ಆ ತಂಡದ ನೇತ್ರತ್ವವಹಿಸಿದ್ದು, ಪೊಲೀಸ್ ಸಿಬ್ಬಂದಿ ಮೋಹನ್ ಅವರು ಶೋಧ ಕಾರ್ಯ ಶುರು ಮಾಡಿದರು. ಈ ವೇಳೆ ಪಿ ರಾಮರ್ ಪೆರುಮೇರಾ ತೆವರ್ ಅವರು ತಮಿಳುನಾಡಿನಲ್ಲಿರುವ ವಿಷಯ ಗೊತ್ತಾಯಿತು.
ತಮಿಳುನಾಡಿನ ರಾಮನಾಥಪುರ ವಧುಗಪಟ್ಟಿಯ ಆಸ್ಲಿಮಪಟ್ಟಿ ಪೊಲೀಸ್ ಠಾಣೆ ಸಿಬ್ಬಂದಿ ಸಹಕಾರದಲ್ಲಿ ಅಂಕೋಲಾ ಪೊಲೀಸರು ಕಾರ್ಯಾಚರಣೆ ಮಾಡಿದರು. ಅಲ್ಲಿ ಅಡಗಿದ್ದ ಪಿ ರಾಮರ್ ಪೆರುಮೇರಾ ತೆವರ್ ಏಳು ವರ್ಷದ ನಂತರ ಸಿಕ್ಕಿ ಬಿದ್ದರು. ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನವಿಧಿಸಿದೆ. ಸದ್ಯ ಪಿ ರಾಮರ್ ಪೆರುಮೇರಾ ತೆವರ್ ಅವರು ಕಾರವಾರ ಕಾರಾಗೃಹದಲ್ಲಿ ಕಾಲ ಕಳೆಯುತ್ತಿದ್ದಾರೆ.