ಹಾನಗಲ್ಲಿನ ವಿನಾಯಕ ಜಾಡರ್ ಅವರು ಮುಂಡಗೋಡಿನ ಜನಾರ್ಧನ ಆಚಾರಿ ಅವರಿಗೆ 10 ಸಾವಿರ ರೂ ಸಾಲ ನೀಡಿದ್ದು, ಸಾಲ ಮರಳಿ ಕೇಳಿ ಪೆಟ್ಟು ತಿಂದಿದ್ದಾರೆ. ಹಣ ಕೇಳಿದ ಕಾರಣ ಜನಾರ್ಧನ ಆಚಾರಿ ಅವರು ಮೈಮೇಲೆ ಖಾರದಪುಡಿ ಎರಜಿ ಬಡಿಗೆಯಿಂದ ಬಡಿದಿದ್ದಾರೆ.
ಹಾನಗಲ್ಲಿನ ಸಮ್ಮಸಗಿಯ ವಿನಾಯಕ ಗುಡ್ಡಪ್ಪ ಜಾಡರ್ ಅವರು ಮುಂಡಗೋಡದ ಮಳಗಿ ಧರ್ಮಾ ಕಾಲೋನಿಯಲ್ಲಿ ಆಚಾರಿ ಕೆಲಸ ಮಾಡುವ ಜನಾರ್ಧನ ವಾಸು ಆಚಾರಿ ಅವರಿಗೆ ಸಾಲ ಕೊಟ್ಟಿದ್ದರು. ಎರಡುವರೆ ತಿಂಗಳ ಹಿಂದೆ ಅವರು 10 ಸಾವಿರ ರೂ ಸಾಲ ನೀಡಿದ್ದು, ಮಾರ್ಚ 17ರಂದು ಅದನ್ನು ಮರಳಿಸುವಂತೆ ಕೇಳಿದರು. ಇದರಿಂದ ಸಿಟ್ಟಾದ ಜನಾರ್ಧನ ಆಚಾರಿ ಅವರು `ಹಣ ಕೊಡುವುದಿಲ್ಲ’ ಎಂದರು. ಮತ್ತೆ ಮತ್ತೆ ಕೇಳಿದಾಗ ಹೊಡೆದಾಟಕ್ಕೆ ಮುಂದಾದರು.
ಮನೆ ಒಳಗೆ ಹೋದ ಜನಾರ್ಧನ ಆಚಾರಿ ಅವರು ಅಲ್ಲಿಂದ ಖಾರದಪುಡಿ ತಂದು ವಿನಾಯಕ ಜಾಡರ್ ಅವರ ಮೈಮೇಲೆ ಎರಚಿದರು. ಕೆಟ್ಟದಾಗಿ ಬೈಯುತ್ತ ಹೊಡೆಯಲು ಶುರು ಮಾಡಿದರು. ಅಲ್ಲಿದ್ದ ಕಟ್ಟಿಗೆಯ ದೊಣ್ಣೆಯಿಂದ ವಿನಾಯಕ ಜಾಡರ್ ಅವರಿಗೆ ಹಿಗ್ಗಾಮುಗ್ಗ ಥಳಿಸಿದರು. ಹಣ ಕೊಟ್ಟ ತಪ್ಪಿಗೆ ಏಟು ತಿಂದ ವಿನಾಯಕ ಜಾಡರ್ ಅವರು ಜನಾರ್ಧನ ಆಚಾರಿ ಅವರು ಮಾಡಿದ ಅನ್ಯಾಯದ ಬಗ್ಗೆ ಪೊಲೀಸ್ ದೂರು ನೀಡಿದರು. ಮುಂಡಗೋಡು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಶುರು ಮಾಡಿದ್ದಾರೆ.