ಕಾರವಾರದ ಗುತ್ತಿಗೆದಾರ ಶ್ರವಣ ಶಿರೂಡಕರ್ ಅವರು ಹೊಟೇಲ್ ಕಾರ್ಮಿಕ ಪ್ರಥಮೇಶ ಮರಾಠೆ ಅವರೊಂದಿಗೆ ದ್ವೇಷ ಸಾಧಿಸಿದ್ದಾರೆ. ಈ ದ್ವೇಷದ ಪರಿಣಾಮ ಶ್ರವಣ ಶಿರೂಡಕರ್ ಅವರ ಮನೆ ಮುಂದೆ ನಿಲ್ಲಿಸಿದ್ದ ಕಾರು, ಟಿಪ್ಪರ್ ಸೇರಿ ಮೂರು ವಾಹನ ಧ್ವಂಸವಾಗಿದೆ.
ಕಾರವಾರದ ಬೈತಕೋಲ್ ಬಳಿಯ ಸೀಬರ್ಡ ರಸ್ತೆ ಬಳಿ ಶ್ರವಣ ಉಮೇಶ ಶಿರೂಡಕರ್ (62) ಅವರು ವಾಸವಾಗಿದ್ದಾರೆ. ಶ್ರವಣ ಶಿರೂಡಕರ್ ಅವರು ಗುತ್ತಿಗೆದಾರರಾಗಿ ಕೆಲಸ ಮಾಡಿಕೊಂಡಿದ್ದಾರೆ. ಬೈತಕೋಲಿನಲ್ಲಿಯೇ ಪ್ರಥಮೇಶ ಸಂದೀಪ ಮರಾಠೆ (22) ಅವರು ಸಹ ವಾಸವಾಗಿದ್ದು, ಪ್ರಥಮೇಶ ಮರಾಠೆ ಅವರು ಹೊಟೇಲ್ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಶ್ರವಣ ಶಿರೂಡಕರ್ ಹಾಗೂ ಪ್ರಥಮೇಶ ಮರಾಠೆ ಅವರ ನಡುವೆ ವೈಮನಸ್ಸು ಮೂಡಿದೆ. ಅದೇ ದ್ವೇಷ ದೊಡ್ಡದಾಗಿದ್ದು, ಪ್ರಥಮೇಶ ಮರಾಠೆ ಅವರು ಶ್ರವಣ ಶಿರೂಡಕರ್ ಅವರ ಮನೆ ಮುಂದೆ ನಿಂತಿದ್ದ ವಿವಿಧ ವಾಹನಗಳಿಗೆ ಕಲ್ಲು ಹೊಡೆದಿದ್ದಾರೆ.
ಮಾರ್ಚ 14ರಂದು ರಾತ್ರಿ 10 ಗಂಟೆ ಸುಮಾರಿಗೆ ಶ್ರವಣ ಶಿರೂಡಕರ್ ಅವರ ಮನೆ ಮುಂದೆ ಕಲ್ಲು ತೂರಾಟ ನಡೆದಿದೆ. ಈ ವೇಳೆ ಮನೆ ಮುಂದೆ ನಿಲ್ಲಿಸಿದ ಟಿಪ್ಪರ್, ಸ್ಕಾರ್ಪಿಯೋ ಹಾಗೂ ಮತ್ತೊಂದು ವಾಹನಕ್ಕೆ ಕಲ್ಲು ತಾಗಿದೆ. ಪರಿಣಾಮ ಆ ವಾಹನಗಳ ಗಾಜು ಪುಡಿಪುಡಿಯಾಗಿದೆ. ಪ್ರಥಮೇಶ ಮರಾಠೆ ಅವರ ದಾಳಿಯಿಂದ ಆದ ನಷ್ಟದ ಬಗ್ಗೆ ಶ್ರವಣ ಶಿರೂಡಕರ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದಾದ ನಂತರ ನ್ಯಾಯಾಲಯದ ಮೊರೆ ಹೋದ ಶ್ರವಣ ಶಿರೂಡಕರ್ ಅವರು ಪ್ರಥಮೇಶ ಮರಾಠೆ ಅವರ ವಿರುದ್ಧ ಕಾನೂನು ಕ್ರಮಕ್ಕಾಗಿ ಪ್ರಕರಣ ದಾಖಲಿಸಿದ್ದಾರೆ. ಕಾರವಾರ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ವಿಚಾರಣೆ ಶುರು ಮಾಡಿದ್ದಾರೆ.