ಶಿರಸಿ – ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸದ್ಯ ರಾಜಕೀಯ ಕಚ್ಚಾಟದಿಂದ ಕೊಂಚ ದೂರವಿದ್ದರೂ ಅವರ ಬೆಂಬಲಿಗರು ಪರಸ್ಪರ ಕಾಲೆಳೆಯುವುದನ್ನು ಬಿಟ್ಟಿಲ್ಲ. ಶಿರಸಿ ರಾಜಕಾರಣದಲ್ಲಿ ಇದೀಗ `ಶೆಟ್ಟಿ VS ಶೆಟ್ಟಿ’ ಎಂಬ ಸಮರ ಶುರುವಾಗಿದೆ.
ಕಳೆದ ಎರಡು ದಿನಗಳಿಂದ ಭೀಮಣ್ಣ ನಾಯ್ಕ ಅವರ ಆಪ್ತ ಪ್ರಸನ್ನ ಶೆಟ್ಟಿ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಆಪ್ತ ನಾಗರಾಜ ಶೆಟ್ಟಿ ಕಾದಾಟ ಶುರು ಮಾಡಿದ್ದಾರೆ. `ಕೆನರಾ ಕ್ಷೇತ್ರ ಸಂಸದ ಕೇವಲ ಪ್ರಚಾರಕಷ್ಟೇ ಸೀಮಿತ’ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಅವರು ಲೇವಡಿ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ `ಕಾಗೇರಿ ಅವರು ಮಂಜೂರಿ ಮಾಡಿದ ಕಾಮಗಾರಿಗಳನ್ನು ಉದ್ಘಾಟಿಸಿ ಭೀಮಣ್ಣ ನಾಯ್ಕ ಅವರು ಪ್ರಚಾರಪಡೆಯುತ್ತಿದ್ದಾರೆ’ ಎಂದು ನಾಗರಾಜ ಶೆಟ್ಟಿ ಅವರು ಕಾಲೆಳೆದಿದ್ದಾರೆ. `ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜನರು ಓಡಾಡುವುದೇ ಕಷ್ಟವಾಗಿದೆ’ ಎಂದು ಉತ್ತರ ಕನ್ನಡ ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಅವರು ಹೇಳಿದ್ದು, `ಕಾಗೇರಿಯವರ ಕಾಲದಲ್ಲಿ ರಸ್ತೆಯ ಮರುಡಾಂಬರೀಕರಣ ಎನ್ನುವುದು ಒಂದು ಸಹಜ ಪ್ರಕ್ರಿಯೆಯಾಗಿತ್ತು. ಕಾಗೇರಿ ಅವರು ಶಾಸಕರಾಗಿದ್ದಾಗ ಅನೇಕ ಹಳ್ಳಿಗಳಿಗೆ ಹೊಸ ಸೇತುವೆ ನಿರ್ಮಾಣವಾಗಿದೆ. ಆದರೆ, ಭೀಮಣ್ಣ ನಾಯ್ಕ ಅವರು ಶಾಸಕರಾಗಿ ಒಂದೇ ಒಂದು ಹೊಸ ಸೇತುವೆ ನಿರ್ಮಿಸಿದ ದಾಖಲೆಯಿದ್ದರೆ ತೋರಿಸಲಿ’ ಎಂದು ಸವಾಲು ಹಾಕಿದ್ದಾರೆ.
`ಪ್ರತಿ ವರ್ಷದಂತೆ ಈ ವರ್ಷವೂ ಸಹ ಅಡಿಕೆ ವಿಮೆ ಬಂದಿದೆ. ಆದರೆ, ಕಾಗೇರಿಯವರು ಅದೇ ತಮ್ಮ ದೊಡ್ಡ ಸಾಧನೆ ಎಂದು ಪ್ರಚಾರಪಡೆಯುತ್ತಿದ್ದಾರೆ’ ಎಂದು ಪ್ರಸನ್ನ ಶೆಟ್ಟಿ ಅವರು ದೂರಿದ್ದಾರೆ. `ಅಲ್ಪ ಪ್ರಮಾಣದಲ್ಲಿ ವಿಮೆ ಸಂದಾಯವಾದ ಗ್ರಾಮ ಪಂಚಾಯತ ಮಟ್ಟದ ರೈತರಿಗೆ ಕಾಗೇರಿ ಅವರು ಸಹಾಯ ಮಾಡಿಲ್ಲ’ ಎಂದು ಸಹ ಪ್ರಸನ್ನ ಶೆಟ್ಟಿ ಅವರು ದೂರಿದ್ದಾರೆ. `ಬೆಳೆ ವಿಮೆಯ ವಿಷಯದಲ್ಲಿ ರಾಜ್ಯ ಸರ್ಕಾರದ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಕಳೆದ ಎರಡು ವರ್ಷಗಳಿಂದ ಸ್ವತಃ ಕಾಗೇರಿಯವರೇ ಕೇಂದ್ರದಿAದ ವಿಶೇಷ ಆದೇಶ ಮಾಡಿಸಿ ರಾಜ್ಯ ಸರ್ಕಾರದ ಬೇಜವಾಬ್ದಾರಿಯನ್ನು ಎತ್ತಿ ತೋರಿಸಿದ್ದಾರೆ. ಅಲ್ಪ ಪ್ರಮಾಣದ ವಿಮೆ ಪಡೆದ ಗ್ರಾಮ ಪಂಚಾಯಿತಿಗಳ ರೈತರ ಬೆನ್ನಿಗೆ ಶಾಸಕರು ನಿಲ್ಲುವುದು ಅವರ ಕರ್ತವ್ಯವಾಗಿದ್ದು, ಸಂಸದರು ತಮ್ಮ ಕಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ’ ಎಂದು ತಾಲೂಕು ಪಂಚಾಯತ ಮಾಜಿ ಸದಸ್ಯ ನಾಗರಾಜ ಅವರು ಪ್ರತಿಕ್ರಿಯಿಸಿದ್ದಾರೆ.
`ಶಿರಸಿ ಕ್ಷೇತ್ರದ ಶಾಸಕರ ಅಸಮರ್ಥತೆ ಮತ್ತು ಬೇಜವಾಬ್ದಾರಿತನದಿಂದ ಅರ್ಹ ರೈತರಿಗೆ ಅನ್ಯಾಯವಾಗಿದೆ. ಇದಕ್ಕೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕು. ಎಲೆ ಚುಕ್ಕಿ ರೋಗದಿಂದ ಅಡಿಕೆ ಬೆಳೆ ಕುಂಠಿತವಾಗಿ ರೈತರು ಸಂಕಷ್ಟದಲ್ಲಿದ್ದಾರೆ’ ಎಂದು ಸಹ ನಾಗರಾಜ ಶೆಟ್ಟಿ ಅವರು ವಿವರಿಸಿದ್ದಾರೆ. `ಸಣ್ಣ ಪುಟ್ಟ ಕೆಲಸಗಳಿಗೂ ಕಾಗೇರಿ ಅವರು ಭಾರೀ ಪ್ರಮಾಣದಲ್ಲಿ ಪ್ರಚಾರಪಡೆಯುತ್ತಿದ್ದಾರೆ. ತಾವೇ ವಿಧಾನಸಭಾ ಅಧ್ಯಕ್ಷರಾಗಿದ್ದಾಗ ತಮ್ಮ ಊರಿನ ರಸ್ತೆಗೆ ತಮ್ಮ ಮನೆಯ ಹತ್ತಿರದವರೆಗೂ ರೆಫ್ಲೆಕ್ಟರ್ ಹಾಕಿಸಿಕೊಂಡ ಕಾಗೇರಿ ಅವರು ಸದ್ಯ ಜನರು ಓಡಾಡುವ ಮಟ್ಟಿಗಾದರೂ ರಸ್ತೆ ಒದಗಿಸಲಿ’ ಎಂದು ಪ್ರಸನ್ನ ಶೆಟ್ಟಿ ಅವರು ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಯಾಗಿ `ಕಾಗೇರಿ ಅವರು ಎಂದಿಗೂ ಸಣ್ಣ ಸಣ್ಣ ಕೆಲಸ ಮಾಡಿದಾಗ ಪುಟಗಟ್ಟಲೆ ಪ್ರಚಾರಪಡೆದಿಲ್ಲ. ಆದರೆ, ಭೀಮಣ್ಣ ನಾಯ್ಕ ಅವರು ಕೊಡುವುದು ಮೂರು ಕಾಸು-ಹೇಳುವುದು ಮೂರು ತಾಸು ಎನ್ನುವಂತೆ ಪ್ರಚಾರದ ನಾಟಕ ಮಾಡುತ್ತಿದ್ದಾರೆ’ ಎಂದು ನಾಗರಾಜ ಶೆಟ್ಟಿ ಅವರು ಹೇಳಿದ್ದಾರೆ. ಜೊತೆಗೆ `ಕಾಗೇರಿಯವರು ಸಭಾಧ್ಯಕ್ಷರಾಗಿದ್ದಾಗ ಹೈಟೆಕ್ ಆಸ್ಪತ್ರೆ, ಸಿದ್ದಾಪುರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ, ಕೃಷಿ ಇಲಾಖೆಯ ನೂತನ ಕಟ್ಟಡ, ತಾಲೂಕು ಪಂಚಾಯತ್ ಕಟ್ಟಡ ಹಾಗೂ ಭವ್ಯವಾದ ಆಡಳಿತ ಸೌಧ, ಶಿರಸಿಯ ಮತ್ತು ಸಿದ್ದಾಪುರದ ಬಸ್ ನಿಲ್ದಾಣಗಳು ಇಂದಿಗೂ ಅವರ ಸಾಧನೆಗೆ ಸಾಕ್ಷಿಯಾಗಿವೆ’ ಎಂದು ನಾಗರಾಜ ಶೆಟ್ಟಿ ಅವರು ಹೇಳಿದ್ದಾರೆ.