ಕಾರವಾರ ಜನರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ ಬಿದ್ದಿದೆ. ಕಳೆದ ಒಂದು ವಾರದಿಂದ ಜನರ ಆತಂತಕ್ಕೆ ಕಾರಣವಾಗಿದ್ದ ವನ್ಯಜೀವಿಯನ್ನು ಅರಣ್ಯ ಇಲಾಖೆಯವರು ಬಂಧಿಸಿದ್ದಾರೆ.
ಕಾರವಾರದ ಚಿತ್ತಾಕುಲ ಪಂಚಾಯತ್ ವ್ಯಾಪ್ತಿಯ ಸಾವರಪೈ ಬಳಿ ಚಿರತೆ ಓಡಾಟ ಜೋರಾಗಿತ್ತು. ಆ ಭಾಗದ ಎಲ್ಲಡೆ ಓಡಾಡುವ ಚಿರತೆ ನೋಡಿ ಜನ ಭಯಪಟ್ಟಿದ್ದರು. ಚಿರತೆ ನೋಡಿದ ಜನ ಸಂಜೆ ವೇಳೆ ಮನೆಯಿಂದ ಹೊರಬರಲು ಹೆದರುತ್ತಿದ್ದರು. ಊರಿಗೆ ಚಿರತೆ ಬಂದ ಬಗ್ಗೆ ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಅಲ್ಲಲ್ಲಿ ಬೋನುಗಳನ್ನಿರಿಸಿದ್ದರು. ಶುಕ್ರವಾರ ಆ ಭೋನಿಗೆ ಚಿರತೆ ಬಿದ್ದಿದೆ.
ಅರಣ್ಯಾಧಿಕಾರಿ ವಿ ಪಿ ನಾಯ್ಕ ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ಚಿರತೆ ಓಡಾಟದ ಚಲನ-ವಲನ ಗಮನಿಸಿದ್ದರು. ಚಿರತೆ ಹೆಚ್ಚಾಗಿ ಬರುವ ಪ್ರದೇಶ ಆಯ್ಕೆ ಮಾಡಿ ಅಲ್ಲಿ ಬೋನು ಇರಿಸಿದ್ದರು. ಆಹಾರ ಅರೆಸಿ ಬಂದ ಚಿರತೆಗೆ ಶುಕ್ರವಾರ ಸಂಜೆ ಬೋನಿನಲ್ಲಿರುವ ಜೀವಿ ಕಾಣಿಸಿತು. ಅದರ ಭಕ್ಷಣೆಗಾಗಿ ಬೋನಿನ ಒಳಗೆ ಹೋದ ಚಿರತೆಗೆ ಹೊರಬರಲು ಸಾಧ್ಯವಾಗಲಿಲ್ಲ.
ಚಿರತೆ ಬೋನಿಗೆ ಬಿದ್ದಿದ್ದು ಕಂಡು ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ನಂತರ ಆ ಚಿರತೆಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶ ಬಿಟ್ಟು ಬಂದರು. ಒಂದು ವಾರದಿಂದ ಊರಿನಲ್ಲಿ ಓಡಾಡುತ್ತಿದ್ದ ಚಿರತೆ ಬೋನಿಗೆ ಬಿದ್ದಿದ್ದನ್ನು ನೋಡಿ ಗ್ರಾಮದ ಜನರು ನಿರಾಳರಾದರು.