ಕುರಿ ಕಾಯುವ ಹುಡುಗನಿಗೆ ಬಂಗಾರದ ಆಸೆ ತೋರಿಸಿ 10 ಲಕ್ಷ ರೂಪಡೆದು ಮೋಸ ಮಾಡಿದ ವಂಚಕನ್ನು ಸಿದ್ದಾಪುರ ಪೊಲೀಸರು ಸೆದೆಬಡಿದಿದ್ದಾರೆ.
ಸಿದ್ದಾಪುರ – ಸಾಗರ ರಸ್ತೆಯಲ್ಲಿರುವ ಹಿತ್ತಲಕೊಪ್ಪ ಕ್ರಾಸಿನ ಬಳಿ ಬೆಳಗಾವಿಯ ಕುರಿ ವ್ಯಾಪಾರಿ ಆಕಾಶ ಅಬುಬಕ್ಕರ್ ಕಲಾಲ್ ಅವರು ಮೋಸ ಹೋಗಿದ್ದರು. `ಭೂಮಿ ಅಗೆಯುವಾಗ 2 ಕೆಜಿ ಚಿನ್ನ ಸಿಕ್ಕಿದೆ. 10 ಲಕ್ಷ ರೂಪಾಯಿಗೆ ಅದನ್ನು ಮಾರಾಟ ಮಾಡುವೆ’ ಎಂದು ನಂಬಿಸಿ ಚಿಕ್ಕಮಗಳೂರಿನ ಹೊಸಳ್ಳಿಯ ರವಿ ಎಂಬಾತರು 10 ಲಕ್ಷ ರೂಪಡೆದು ನಕಲಿ ಬಂಗಾರ ನೀಡಿ ಯಾಮಾರಿಸಿದ್ದರು. ನಡೆದ ಸೌದತ್ತಿ ಯಲ್ಲಮ್ಮನ ಜಾತ್ರೆಯಲ್ಲಿ ಆಕಾಶ ಕಲಾಲ್ ಹಾಗೂ ಹೊಸಳ್ಳಿಯ ರವಿ ಪರಿಚಿತರಾಗಿದ್ದು, ರವಿ ಅವರು ಆ ಪರಿಚಯವನ್ನು ತಮ್ಮ ಮೋಸಕ್ಕೆ ಬಳಸಿಕೊಂಡಿದ್ದರು.
`ತನ್ನ ಮನೆಯ ನೆಲ ಅಗೆಯುವಾಗ 2 ಕೆಜಿ ಬಂಗಾರ ಸಿಕ್ಕಿದೆ’ ಎಂದು ಆಕಾಶ ಅವರ ಮಾವನಿಗೆ ಫೋನ್ ಮಾಡಿ ನಂಬಿಸಿದ ರವಿ ಅವರು ಅದರ ಮಾರಾಟ ವ್ಯವಹಾರ ನಡೆಸಲು ಸಿದ್ದಾಪುರಕ್ಕೆ ಆಮಂತ್ರಿಸಿದ್ದರು. ಮೊದಲು ಅಸಲಿ ಚಿನ್ನದ ನಾಣ್ಯ ಕೊಟ್ಟು, ಹಣಪಡೆದ ನಂತರ ನಕಲಿ ನಾಣ್ಯ ನೀಡಿ ಪರಾರಿಯಾಗಿದ್ದರು. 10 ಲಕ್ಷ ರೂಪಾಯಿಗೆ 2 ಕೆಜಿ ಚಿನ್ನ ಸಿಗುತ್ತದೆ ಎಂಬ ಆಸೆಗೆ ಬಿದ್ದ ಆಕಾಶ ಅವರು ಫೆಬ್ರವರಿ 23ರಂದು 10 ಲಕ್ಷ ರೂ ಹಣವನ್ನು ಕೊಟ್ಟು ಮೋಸ ಹೋಗಿದ್ದರು. ಮಾವ ಮತ್ತು ತಮ್ಮನ ಜೊತೆ ಬಾಡಿಗೆ ಕಾರಿನಲ್ಲಿ ಸಿದ್ದಾಪುರಕ್ಕೆ ಬಂದಿದ್ದ ಆಕಾಶ ಅವರನ್ನು ರವಿ ಅವರು ಎಲ್ಲಾ ಕಡೆ ಸುತ್ತಾಡಿಸಿ ಕೊನೆಗೆ ಸಿದ್ದಾಪುರ-ಸಾಗರ ರಸ್ತೆಯ ಕವಂಚೂರು ಗ್ರಾಮದ ಹಿತ್ತಲಕೊಪ್ಪ ಕ್ರಾಸಿನ ಬಳಿ ಕರೆದಿದ್ದರು.
ರವಿ ಅವರ ಜೊತೆ ಮತ್ತೆ 5 ಜನ ಅಪರಿಚಿತರಿದ್ದು, ಅವರೆಲ್ಲರೂ ಸೇರಿ ಬಿಳಿ ಬಟ್ಟೆಯಲ್ಲಿ ಸುತ್ತಿರುವ ಎರಡು ಗಂಟುಗಳನ್ನು ನೀಡಿ, `ಅದರಲ್ಲಿ ಚಿನ್ನದ ನಾಣ್ಯಗಳಿವೆ’ ಎಂದು ನಂಬಿಸಿ ಆಕಾಶ ಅವರಿಂದ ಹತ್ತು ಲಕ್ಷ ರೂ ಪಡೆದು ಪರಾರಿಯಾಗಿದ್ದರು. ಅದಾದ ನಂತರ ನಕಲಿ ನಾಣ್ಯಗಳ ಬಗ್ಗೆ ಅರಿತ ಆಕಾಶ ಅವರು ಸಿದ್ದಾಪುರ ಠಾಣೆಯಲ್ಲಿ ಪೊಲೀಸ್ ದೂರು ನೀಡಿದ್ದರು.
ದೂರಿನ ಬಗ್ಗೆ ವಿಚಾರಣೆ ನಡೆಸಿದ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಡಿವೈಎಸ್ಪಿ ಗೀತಾ ಪಾಟೀಲ್ ಅವರ ಜೊತೆ ಚರ್ಚಿಸಿ ಆರೋಪಿತರ ಪತ್ತೆಗೆ ತಂಡ ರಚಿಸಿದರು. ಸಿದ್ದಾಪುರ ಪಿಐ ಜೆಬಿ ಸೀತಾರಾಮ, ಪಿಸೈ ಶಾಂತಿನಾಥ ಪಾಸಾನೆ, ಸಿಬ್ಬಂದಿ ರಮೇಶ ಕುಡಲ, ಚೇತನಕುಮಾರ, ಸಂತೋಷ ತಳವಾರ್, ಮೋಹನ ಗಾವಡಿ, ಮಣಿಕಂಠ, ಪ್ರಶಾಂತ, ರೋಹಿತ, ಗಿರೀಶ ಅವರು ಆರೋಪಿ ಪತ್ತೆಗೆ ಬಲೆ ಬೀಸಿದರು. ಆ ಬಲೆಗೆ ಶಿವಮೊಗ್ಗದ ಶಿಕಾರಿಪುರದ ಗಜೇಂದ್ರ ಹಾಲೇಶಪ್ಪ ಕೊರಚರ ಅವರು ಸಿಕ್ಕಿಬಿದ್ದರು. ಅವರೇ ಈ ವಂಚನೆಯ ಪ್ರಮುಖ ಆರೋಪಿಯಾಗಿದ್ದು, ನಕಲಿ ಬಂಗಾರ ನೀಡಿಪಡೆದಿದ್ದ 10 ಲಕ್ಷ ರೂಪಾಯಿ ಹಣವನ್ನು ಪೊಲೀಸರು ಜಪ್ತು ಮಾಡಿದರು. ಆರೋಪಿ ಬಳಿಯಿದ್ದ ಬಜಾಜ್ ಬೈಕ್ ಹಾಗೂ ಕೀಪ್ಯಾಡ್ ಮೊಬೈಲ್’ನ್ನು ವಶಕ್ಕೆಪಡೆದು ವಂಚಕನನ್ನು ಜೈಲಿಗೆ ಕಳುಹಿಸಿದರು.