ಅಖಿಲ್ ಹಾಗೂ ನಿಖಿಲ್ ಎಂಬ ಹೆಸರಿನಲ್ಲಿ ಶಿರಸಿ ಮಾರಿಕಾಂಬಾ ದೇವಿ ಸನ್ನಿಧಿಯಲ್ಲಿ ದೇಣಿಗೆ ಪಾವತಿಸಿದ ವ್ಯಕ್ತಿಯೊಬ್ಬರು ಯಲ್ಲಾಪುರ ಅರಣ್ಯ ಪ್ರದೇಶಕ್ಕೆ ಆಗಮಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೈ ಚೀಲ ಹಿಡಿದು ಯಲ್ಲಾಪುರ ಪಟ್ಟಣದಲ್ಲಿ ಅವರು ಓಡಾಡಿದ ದೃಶ್ಯವಾಗಳಿಗಳು ಸೆರೆಯಾಗಿದ್ದು, ಅದೇ ಆಧಾರದಲ್ಲಿ ಪೊಲೀಸರು ಸಾವನಪ್ಪಿದವರ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಯಲ್ಲಾಪುರ ಪಟ್ಟಣದಿಂದ ಅನತಿ ದೂರದ ಮಾಗೋಡು ಕ್ರಾಸಿನ ಬಳಿಯಿರುವ ಕಪ್ಪೆಗದ್ದೆ ಕಾಡಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಭಾನುವಾರ ಬೆಳಗ್ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಕಾಣಿಸಿದ್ದು, 10 ದಿನದ ಹಿಂದೆಯೇ ಆತ್ಮಹತ್ಯೆ ನಡೆದಿರುವ ಅನುಮಾನ ಕಾಡುತ್ತಿದೆ. ನಾಯ್ಕನಕೆರೆಯ ವ್ಯಾಪಾರಿ ಸಂಜೀವ ಗೋಪಾಲ ಪಟಗಾರ ಅವರ ಅಂಗಡಿ ಮುಂದೆ ಮಹಿಳೆಯೊಬ್ಬರು ಆಗಮಿಸಿ, `ಕಾಡಿನಿಂದ ಕೆಟ್ಟ ವಾಸನೆ ಬರುತ್ತಿದೆ’ ಎಂದಿದ್ದಾರೆ. ಆ ವಾಸನೆ ಅರೆಸಿ ಹೊರಟ ಸಂಜೀವ ಪಟಗಾರ ಅವರಿಗೆ ಕೊಳೆತ ಶವ ಕಾಣಿಸಿದೆ. ತಕ್ಷಣ ಸಂಜೀವ ಪಟಗಾರ ಅವರು ಪೊಲೀಸರಿಗೆ ಫೋನ್ ಮಾಡಿ ವಿಷಯ ಮುಟ್ಟಿಸಿದ್ದಾರೆ.
ಸಾವನಪ್ಪಿದ ಅಪರಿಚಿತ ವ್ಯಕ್ತಿ ಅದೇ ಹೊಳಗೇರಿ ಮರದ ಟೊಂಗೆಗೆ ಕೈ ಚೀಲ ನೇತು ಹಾಕಿದ್ದು, ಅದರಲ್ಲಿ ಮಾರಿಕಾಂಬಾ ದೇವಿಗೆ ದೇಣಿಗೆ ಅರ್ಪಿಸಿದ ರಸೀದಿಯಿದೆ. ಮಾರ್ಚ 19ರಂದು ದೇಣಿಗೆ ಸಲ್ಲಿಸಿದ್ದು, ಅದೇ ದಿನ ಮಧ್ಯಾಹ್ನ 2 ಗಂಟೆ ಅವಧಿಗೆ ಶಿರಸಿ-ಯಲ್ಲಾಪುರ ಬಸ್ಸಿನ ಮೂಲಕ ಯಲ್ಲಾಪುಕ್ಕೆ ಆಗಮಿಸಿದ ಸಾಕ್ಷಿಯಾಗಿ ಬಸ್ಸಿನ ಟಿಕೆಟ್ ಸಹ ಸಿಕ್ಕಿದೆ. ಅದಾದ ನಂತರ ಬಸ್ ನಿಲ್ದಾಣ ಸುತ್ತಲಿನ ಪ್ರದೇಶದಲ್ಲಿ ಆ ಅಪರಿಚಿತ ಓಡಾಡಿದ ಬಗ್ಗೆ ಸಿಸಿ ಕ್ಯಾಮರಾ ದಾಖಲೆಗಳು ಸಾಕ್ಷಿ ಹೇಳಿವೆ. ಪೊಲೀಸರು ಇನ್ನಷ್ಟು ಶೋಧ ನಡೆಸಿದಾಗ ಸಾವನಪ್ಪಿದ ಸ್ಥಳದಲ್ಲಿ ಸರಾಯಿ ಕುಡಿದು ಬಿಸಾಡಿದ ಟ್ರೆಟ್ರಾಪ್ಯಾಕ್, ಖಾಲಿ ನೀರಿನ ಬಾಟಲಿ, ಪ್ಲಾಸ್ಟಿಕ್ ಲೋಟವೂ ಅಲ್ಲಿ ಸಿಕ್ಕಿದೆ.
ಆದರೆ, ಸಾವನಪ್ಪಿದ ವ್ಯಕ್ತಿ ಕಾಣೆಯಾದ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಆ ಅಪರಿಚಿತ ವ್ಯಕ್ತಿಯ ಬಗ್ಗೆ ಹುಡುಕಿದರೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಅಖಿಲ್ ಹಾಗೂ ನಿಖಿಲ್ ಎಂಬ ಹೆಸರಿನಲ್ಲಿ ಮಾರಿಕಾಂಬಾ ದೇವಿಗೆ ದೇಣಿಗೆ ಪಾವತಿ ಆಗಿದ್ದರೂ ಅವರಿಬ್ಬರು ಯಾರು? ಎಂದು ಗೊತ್ತಾಗಿಲ್ಲ. ಸಾವನಪ್ಪಿದ ವ್ಯಕ್ತಿಯ ಸಂಬAಧಿಕರು ಸಹ ಪೊಲೀಸ್ ಠಾಣೆಗೆ ಆಗಮಿಸಿಲ್ಲ. ದುಡಿಯುವುದಕ್ಕಾಗಿ ಆಗಮಿಸಿದ ಕೂಲಿ ಕಾರ್ಮಿಕರೊಬ್ಬರು ತಮ್ಮ ದುಡುಕು ನಿರ್ಧಾರದಿಂದ ಆತ್ಮಹತ್ಯೆಗೆ ಶರಣಾದ ಅನುಮಾನಗಳಿವೆ. ಆದರೆ, ಆ ವ್ಯಕ್ತಿ ಯಾರು? ಎಲ್ಲಿಯವರು? ಅವರ ವಾರಸುದಾರರು ಯಾರು? ಎನ್ನುವುದರ ಬಗ್ಗೆ ಶೋಧ ನಡೆಯುತ್ತಿದೆ. ಈ ಎಲ್ಲಾ ಮಾಹಿತಿ ಕಲೆಹಾಕುವ ಹಿನ್ನಲೆ ಯಲ್ಲಾಪುರ ಪೊಲೀಸರು ಸಾರ್ವಜನಿಕರ ಸಹಾಯ ಬಯಸಿದ್ದಾರೆ. ಫೋಟೋದಲ್ಲಿರುವ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದರೆ ಫೋನ್ ಮಾಡಿ ಎಂದು ಮನವಿ ಮಾಡಿದ್ದಾರೆ. ಯಲ್ಲಾಪುರ ಪೊಲೀಸ್ ಸಹಾಯವಾಣಿ ಸಂಖ್ಯೆ: 9480805257 ಅಥವಾ 9480805273