ಕುಮಟಾ ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯೆ ವಿರುದ್ಧ ವಿದ್ಯಾರ್ಥಿಗಳ ಗುಂಪೊoದು ಪ್ರತಿಭಟನೆ ನಡೆಸಿದೆ. ಎಬಿವಿಪಿ ಮುಂದಾಳತ್ವದಲ್ಲಿ ಈ ಪ್ರತಿಭಟನೆ ನಡೆದಿದ್ದರೂ ಕಾಂಗ್ರೆಸ್ ಮುಖಂಡ ಭಾಸ್ಕರ ಪಟಗಾರ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ ಸೋನಿ ಪ್ರತಿಭಟನಾಕಾರರಿಗೆ ಬೆಂಬಲ ನೀಡಿದ್ದಾರೆ. ಬಿಜೆಪಿ ಬೆಂಬಲಿತರಾದ ಶಾಸಕ ದಿನಕರ ಶೆಟ್ಟಿ ಅವರು ಆಗಮಿಸಿ, ಸಮಸ್ಯೆ ಆಲಿಸಿದ್ದಾರೆ.
ಕುಮಟಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜಯಾ ಡಿ ನಾಯ್ಕ ಅವರು ಪ್ರಾಚಾರ್ಯರಾಗಿದ್ದಾರೆ. ಹಿರಿಯ ಅನುಭವಿ ಪ್ರಾದ್ಯಾಪಕಿಯಾಗಿರುವ ಅವರ ವಿರುದ್ಧ ಇಷ್ಟು ವರ್ಷಗಳ ಕಾಲ ಯಾವುದೇ ಆರೋಪಗಳಿರಲಿಲ್ಲ. ಆದರೆ, ಅದೇ ಕಾಲೇಜಿನ ವಿದ್ಯಾರ್ಥಿಗಳಾದ ಚೈತ್ರೇಯಾ ಮುಕ್ರಿ ಹಾಗೂ ಜ್ಞಾನೇಶ ನಾಯ್ಕ ಅವರು ಲೆಕ್ಕಪತ್ರದ ಬಗ್ಗೆ ಪ್ರಾಚಾರ್ಯರಲ್ಲಿ ಪ್ರಶ್ನಿಸಿದ್ದು ಹಾಗೂ ಅದಕ್ಕೆ ಸಮಾಧಾನಕರ ಉತ್ತರ ಸಿಗದಿರುವುದು ವಿವಾದಕ್ಕೆ ಕಾರಣವಾಗಿದೆ. ಇದೇ ವಿಷಯವಾಗಿ ನಡೆದ ಹೋರಾಟ ಹಾಗೂ ಸಮರ್ಥನೆಯಲ್ಲಿ ಕಾಲೇಜಿಗೆ ಸಂಬAಧಿಸದವರೂ ಸಹ ಕಾಲೇಜಿನ ಒಳಗೆ ಪ್ರವೇಶಿಸಿದ್ದಾರೆ. ಹೀಗಾಗಿ ಈ ವಿಷಯ ಇನ್ನಷ್ಟು ದೊಡ್ಡದಾಗಿದ್ದು, ಸದ್ಯ ಪ್ರತಿಭಟನೆಯ ಮಾರ್ಗಕ್ಕೆ ತಿರುಗಿದೆ.
`ಲೆಕ್ಕ ಕೇಳಿದ ಕಾರಣ ಕಾಲೇಜಿನಿಂದ ಡಿಬಾರ್ ಮಾಡುವುದಾಗಿ ಪ್ರಾಚಾರ್ಯರು ಬೆದರಿಸಿದ್ದಾರೆ’ ಎಂಬುದು ಚೈತ್ರೇಯಾ ಮುಕ್ರಿ ಅವರ ಆರೋಪ. ಇದೇ ವಿಷಯವಾಗಿ ಪಾಲಕರಾದ ತಿಮ್ಮಪ್ಪ ಮುಕ್ರಿ ಅವರು ಕಾಲೇಜು ಪ್ರಾಚಾರ್ಯೆ ವಿಜಯಾ ಡಿ ನಾಯ್ಕ, ಉಪನ್ಯಾಸಕರಾದ ವಿದ್ಯಾಧರ ನಾಯ್ಕ, ಶಿಲ್ಪಾ ಬಿ ಎಂ, ಸಂದೇಶ ಎಚ್ ಹಾಗೂ ಉಷಾರಾಣಿ ಅವರ ವಿರುದ್ಧ ದೂರಿದ್ದಾರೆ. ವಿದ್ಯಾರ್ಥಿ ಚೈತ್ರೇಯಾ ಮುಕ್ರಿ ಹಾಗೂ ಜ್ಞಾನೇಶ ನಾಯ್ಕ ಅವರು ನಡೆದುಕೊಂಡ ರೀತಿ ಹಾಗೂ ಪಾಲಕರ ಹೆಸರಿನಲ್ಲಿ ಕಾಲೇಜು ಪ್ರವೇಶಿಸಿ ಅನುಚಿತವಾಗಿ ವರ್ತಿಸಿದ ತಿಮ್ಮಪ್ಪ ಮುಕ್ರಿ ಹಾಗೂ ಸವಿತಾ ಮುಕ್ರಿ ಅವರ ವಿರುದ್ಧವೂ ಪ್ರಾಚಾರ್ಯೆ ವಿಜಯಾ ಡಿ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದಾರೆ.
ಇದೆಲ್ಲದರ ಬೆನ್ನಲ್ಲೆ ಮಂಗಳವಾರ ಸರಕಾರಿ ಪದವಿ ಕಾಲೇಜ್ ಪ್ರಾಚಾರ್ಯೆ ವಿರುದ್ದ ಕೆಲವು ವಿದ್ಯಾರ್ಥಿಗಳು ಘೋಷಣೆ ಕೂಗುತ್ತ ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. `ಪ್ರಾಚಾರ್ಯರು ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕದ ಖರ್ಚು-ವೆಚ್ಚದ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಪ್ರಶ್ನಿಸಿದರೆ ಡಿಬಾರ್ ಮಾಡುವುದಾಗಿ ಬೆದರಿಸುತ್ತಿದ್ದಾರೆ’ ಎಂಬುದು ವಿದ್ಯಾರ್ಥಿಗಳ ಮುಖ್ಯ ಆರೋಪವಾಗಿತ್ತು. ಪ್ರತಿಭಟನೆ ನಿರತ ವಿದ್ಯಾರ್ಥಿಗಳಿಗೆ ರಾಜಕೀಯ ನಾಯಕರು ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು. `ಪ್ರಾಚಾರ್ಯರನ್ನು ಅಮಾನತು ಮಾಡಬೇಕು. ಇಲ್ಲಿಂದ ವರ್ಗಾಯಿಸಬೇಕು’ ಎಂದು ವಿದ್ಯಾರ್ಥಿಗಳು ಪಟ್ಟುಹಿಡಿದರು.
`ವಿದ್ಯಾರ್ಥಿಗಳು ಮತ್ತು ಪ್ರಾಚಾರ್ಯರ ನಡುವೆ ಒಳ್ಳೆಯ ಬಾಂಧವ್ಯ ಇರಬೇಕು. ಪ್ರಾಚಾರ್ಯರ ವರ್ಗಾವಣೆಯಿಂದ ಸಮಸ್ಯೆ ಪರಿಹಾರವಾಗುವುದಿಲ್ಲ’ ಎಂದು ದಿನಕರ ಶೆಟ್ಟಿ ಅವರು ಹೇಳಿ ಪ್ರತಿಭಟನಾಕಾರರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದರು. ಅಲ್ಲಿಂದಲೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ಫೋನ್ ಮಾಡಿ ವಿದ್ಯಮಾನಗಳ ಬಗ್ಗೆ ವಿವರಣೆ ನೀಡಿದರು. ಫೋನ್ ಮೂಲಕ ಮಾತನಾಡಿದ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಕ್ರಮ ಜರುಗಿಸುವ ಭರವಸೆ ನೀಡಿದ್ದು, ಈ ಹಿನ್ನಲೆ ಪ್ರತಿಭಟನಾಕಾರರು ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಸಮಾಧಾನದಿಂದ ಮನೆಗೆ ಮರಳಿದರು. `ಇದೇ ವಿಷಯವಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅವನ್ನು ಹಾಗೇ ಮುಂದುವರೆಸದೇ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಿ. ಸಣ್ಣ-ಪುಟ್ಟ ಸಮಸ್ಯೆಗಳನ್ನು ಆಯಾ ಹಂತದಲ್ಲಿಯೇ ಮುಗಿಸಿಕೊಳ್ಳುವುದು ಉತ್ತಮ’ ಎಂದು ಸೂರಜ ನಾಯ್ಕ ಸೋನಿ ಹಾಗೂ ಇನ್ನಿತರರು ವಿದ್ಯಾರ್ಥಿಗಳ ಜೊತೆ ಪಾಲಕರು, ಉಪನ್ಯಾಸಕರಿಗೂ ಕಿವಿಮಾತು ಹೇಳಿದರು.