ಸರಾಯಿ ಕುಡಿಯಲು ಕಾಸುಕೊಡದ ಕಾರಣ ಅಳಿಯನ್ನೇ ಕೊಲೆ ಮಾಡಿದ ಶಿರಸಿ ವೆಂಕಟ್ರಮಣ ಗೌಡ ಅವರಿಗೆ ನ್ಯಾಯಾಲಯ ಜೀವನಪೂರ್ತಿ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದೆ.
ಶಿರಸಿಯ ನೆಗ್ಗು ಬಳಿಯ ಮಳಲಿಯಲ್ಲಿ ವೆಂಕಟ್ರಮಣ ಗಣಪಾ ಗೌಡ ಅವರು ವಾಸವಾಗಿದ್ದರು. ಹುಲೆಕಲ್ ತಂಡಿಗುAಡಿಯ ಮಂಜುನಾಥ ರಾಮಾ ಗೌಡ ಅವರು ವೆಂಕಟ್ರಮಣ ಗೌಡ ಅವರ ಅಳಿಯನಾಗಿದ್ದು, ಮನೆ ಅಳಿಯತನಕ್ಕಾಗಿ ಮಳಲಿಗೆ ಬಂದಿದ್ದರು. ವೆಂಕಟ್ರಮಣ ಗೌಡ ಅವರ ಮನೆಯಲ್ಲಿಯೇ ಮಂಜುನಾಥ ಗೌಡ ಅವರು ವಾಸವಾಗಿದ್ದರು. ಹೀಗಿರುವಾಗ ಅಳಿಯನ ಬಳಿ ವೆಂಕಟ್ರಮಣ ಗೌಡ ಅವರು ನಿತ್ಯವೂ ಕಾಸು ಕೇಳುತ್ತಿದ್ದರು. ಕುಡಿತದ ಚಟಕ್ಕೆ ಕಾಸು ಕೊಡಲು ಮಂಜುನಾಥ ಗೌಡ ಅವರು ನಿರಾಕರಿಸಿದ್ದರು. ಇದೇ ದ್ವೇಷದಲ್ಲಿದ್ದ ವೆಂಕಟ್ರಮಣ ಗೌಡ ಅವರು 2024ರ ಮೇ 2ರಂದು ಬಡಿಗೆಯಿಂದ ಬಡಿದು ಅಳಿಯನನ್ನೇ ಕೊಲೆ ಮಾಡಿದ್ದರು.
ಸಹೋದರನ ಕೊಲೆಯ ಬಗ್ಗೆ ಹುಲೆಕಲ್ ಬಳಿಯ ತಂಡಿಗುAಡಿಯ ಸುರೇಶ ರಾಮಾ ಗೌಡ ಅವರು ಪೊಲೀಸ್ ದೂರು ನೀಡಿದ್ದರು. ಶಿರಸಿ ಗ್ರಾಮೀಣ ಠಾಣೆಯ ಆಗಿನ ಪಿಸೈ ಪ್ರತಾಪ ಪಚ್ಚಪ್ಪನವರ್ ಅವರು ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿದ್ದರು. ಮನೆ ಅಳಿಯನಾಗಿದ್ದ ಮಂಜುನಾಥ ಗೌಡ ಅವರನ್ನು ತಮ್ಮ ಮನೆಯಿಂದ ಓಡಿಸಬೇಕು ಎಂಬ ಪ್ರಯತ್ನದಲ್ಲಿದ್ದ ವೆಂಕಟ್ರಮಣ ಗೌಡ ಅವರು ಅದು ಸಾಧ್ಯವಾಗದೇ ಕೊಲೆ ಮಾಡಿದ್ದರು. ತನಿಖೆಯಲ್ಲಿ ಕುಟುಂಬದವರೆಲ್ಲರೂ ಮದುವೆ ಮನೆಗೆ ಹೋದಾಗ ವೆಂಕಟ್ರಮಣ ಗೌಡ ಅವರು ಮಂಜುನಾಥ ಗೌಡ ಅವರನ್ನು ಕೊಲೆ ಮಾಡಿದ್ದು ಗೊತ್ತಾಗಿತ್ತು. ಅದಕ್ಕೆ ಪೂರಕ ಸಾಕ್ಷಿಗಳು ಸಹ ಸಿಕ್ಕಿದ್ದವು.
ಶಿರಸಿ ಗ್ರಾಮೀಣ ಠಾಣೆಯ ಪಿಐ ಆಗಿದ್ದ ಸೀತಾರಾಮ ಪಿ ಅವರು ಈ ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದರು. ಪೊಲೀಸ್ ಸಿಬ್ಬಂದಿ ಮಹೇಶ ನಾಯ್ಕ, ಶಂಕರಾಚಾರಿ ಎನ್ ಅವರು ಕಾಲಕಾಲಕ್ಕೆ ಅನುಗುಣವಾಗಿ ಸಾಕ್ಷಿಗಳನ್ನು ಹಾಜರುಪಡಿಸಿದರು. ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರು ನ್ಯಾಯಾಲಯದಲ್ಲಿ ತಮ್ಮ ವಾದ ಮಂಡಿಸಿದರು. `ಅಳಿಯನನ್ನು ಕೊಲೆ ಮಾಡಿದ ವೆಂಕಟ್ರಮಣ ಗೌಡರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಅವರು ವಾದಿಸಿದರು. ಶಿರಸಿ ನಗರ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ ಪೀಠಾಸೀನ ನ್ಯಾಯಾಧೀಶ ಕಿರಣ ಕಿಣಿ ಅವರು ವಾದ ಆಲಿಸಿ ತಮ್ಮ ಆದೇಶ ಪ್ರಕಟಿಸಿದರು.
ಅದರ ಪ್ರಕಾರ, ವೆಂಕಟ್ರಮಣ ಗೌಡ ಅವರ ಮೇಲಿದ್ದ ಕೊಲೆ ಆರೋಪ ಸಾಭೀತಾಗಿದೆ. ಈ ಹಿನ್ನಲೆ ವೆಂಕಟ್ರಮಣ ಗೌಡ ಅವರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಜೊತೆಗೆ 10 ಸಾವಿರ ರೂ ದಂಡವನ್ನು ಅವರು ಪಾವತಿಸಬೇಕಿದ್ದು, ಮಂಜುನಾಥ ಗೌಡ ಅವರ ಪತ್ನಿಗೆ 50 ಸಾವಿರ ರೂ ಪರಿಹಾರವನ್ನು ಕೊಡಬೇಕಿದೆ. `ಸಂತ್ರಸ್ತೆ ಕಾನೂನು ಸೇವಾ ಪ್ರಾಧಿಕಾರದಿಂದಲೂ ಹೆಚ್ಚಿನ ಪರಿಹಾರಪಡೆಯಲು ಅರ್ಹರಾಗಿದ್ದಾರೆ’ ಎಂದು ನ್ಯಾಯಾಧೀಶ ಕಿರಣ ಕಿಣಿ ಅವರು ಆದೇಶ ಹೊರಡಿಸಿದರು.