ಸಿದ್ದಾಪುರದ ಶಿರಳಗಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ರಾಜೇಶ ನಾಯ್ಕ ಅವರಿಗೆ ಅವರ ಮೇಲೆ ನಡೆದ ದಾಳಿ ಮತ್ತೊಂದು ಸ್ವರೂಪಪಡೆದಿದೆ. ಆ ದಿನ ಪಿಡಿಓ 2 ಸಾವಿರ ರೂ ಲಂಚ ಬೇಡಿದ ಬಗ್ಗೆ ಹಲ್ಲೆ ನಡೆಸಿದ ಪ್ರಭು ದೊಡ್ಡಮನೆ ಅವರು ದೂರಿದ್ದಾರೆ.
ಮಾರ್ಚ 31ರಂದು ಪಿಡಿಓ ರಾಜೇಶ ನಾಯ್ಕ ಅವರ ಮೇಲೆ ದಾಳಿ ನಡೆದ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು. `ತಮಗೆ ಜೀವ ಬೆದರಿಕೆಯಿದೆ’ ಎಂದು ರಾಜೇಶ ನಾಯ್ಕ ಅವರೇ ಪೊಲೀಸರ ಬಳಿ ದೂರಿದ್ದರು. ಪ್ರಭು ದೊಡ್ಡಮನೆ ಅವರು ಗ್ರಾಮ ಪಂಚಾಯತ ಕಚೇರಿಗೆ ಅರ್ಜಿಯೊಂದನ್ನು ಸಲ್ಲಿಸಿದ್ದು, ಆ ಅರ್ಜಿ ವಿಷಯವಾಗಿ ಮಾತುಕಥೆಗೆ ಬಂದಾಗ ಹಲ್ಲೆ ನಡೆಸಿದ ಬಗ್ಗೆ ಆರೋಪಿಸಿದ್ದರು. `ಅರ್ಜಿಯಲ್ಲಿನ ಮಾಹಿತಿ ಅಸ್ಪಷ್ಟವಾಗಿದ್ದು, ಅಗತ್ಯ ದಾಖಲೆ ಒದಗಿಸಿ’ ಎಂದು ಹೇಳಿದಾಗ ಹಲ್ಲೆ ನಡೆಸಿ, ಕೊಲೆ ಬೆದರಿಕೆಯನ್ನು ಹಾಕಿದ ಬಗ್ಗೆ ದೂರಿದ್ದರು.
ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಇದೀಗ ಪ್ರಭು ದೊಡ್ಡಮನೆ ಅವರು ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ. ಅದರೊಂದಿಗೆ ನ್ಯಾಯಾಲಯಕ್ಕೂ ಹೋದ ಪ್ರಭು ದೊಡ್ಡಮನಿ ಅವರು ಪಿಡಿಓ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. `ಲಂಚ ಕೊಡದ ಕಾರಣ ಪಿಡಿಓ ತಮ್ಮ ಕುತ್ತಿಗೆ ಹಿಸುಕಿ ಹೊಡೆದಿದ್ದಾರೆ’ ಎಂಬ ನಿಟ್ಟಿನಲ್ಲಿ ಪ್ರಭು ದೊಡ್ಡಮನೆ ಅವರು ದೂರಿದ್ದಾರೆ. ಇಲೆಕ್ಟಿçಕಲ್ ಕೆಲಸ ಮಾಡಿಕೊಂಡಿರುವ ಪ್ರಭು ಈರಪ್ಪ ದೊಡ್ಡಮನಿ ಅವರು ಶಿರಳಗಿ ಬಳಿಯ ವಡಗೇರಿ ನಿವಾಸಿಯಾಗಿದ್ದು, ಪತ್ನಿ ಹೆಸರಿನಲ್ಲಿ ಉದ್ದಿಮೆ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮಾರ್ಚ 24ರಂದು ಸಲ್ಲಿಸಿದ ಅರ್ಜಿಗೆ ಮಾರ್ಚ 31ರವರೆಗೂ ಗ್ರಾಮ ಪಂಚಾಯತದವರು ಹಿಂಬರಹ ನೀಡಿಲ್ಲ.
ಹೀಗಾಗಿ ಆ ಬಗ್ಗೆ ವಿಚಾರಿಸಲು ಬಿಕ್ಕಳಸೆಯಲ್ಲಿರುವ ಗ್ರಾಮ ಪಂಚಾಯತ ಕಚೇರಿಗೆ ಪ್ರಭು ದೊಡ್ಡಮನಿ ಅವರು ಹೋಗಿದ್ದು, ಅಲ್ಲಿದ್ದ ಪಿಡಿಓ ಸರಿಯಾಗಿ ಮಾತನಾಡಿಸಿಲ್ಲ. ಈ ವೇಳೆ ಪಿಡಿಓ `ಮಾಹಿತಿ ಕೊಡಲು ಎರಡು ದಿನ ಸಮಯ ಬೇಕು. ಇಂದೇ ಬೇಕಾದರೆ 2 ಸಾವಿರ ರೂ ಕೊಡಬೇಕು’ ಎಂದಿದ್ದಾರೆ. ಇದರಿಂದ ಸಿಟ್ಟಾದ ಪ್ರಭು ದೊಡ್ಡಮನಿ ಪಿಡಿಓ ಮೇಲೆ ಹಲ್ಲೆ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಪಿಡಿಓ ರಾಜೇಶ ನಾಯ್ಕ ಅವರು ಸಹ ಪ್ರತಿ ದಾಳಿ ಮಾಡಿದ್ದಾರೆ. ಆ ದಿನ ರಾಜೇಶ ನಾಯ್ಕ ಅವರ ದೂರು ಆಲಿಸಿ ಪ್ರಕರಣ ದಾಖಲಿಸಿದ್ದ ಪೊಲೀಸರು ಈ ದಿನ ಪ್ರಭು ದೊಡ್ಡಮನಿ ಅವರ ಅಳಲನ್ನು ಆಲಿಸಿ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ. ಸಿದ್ದಾಪುರ ಠಾಣೆಯ ಪೊಲೀಸರು ಈ ಎರಡು ಜನರ ಹೇಳಿಕೆ ಆಧರಿಸಿ ಸತ್ಯಾಸತ್ಯತೆಯ ಶೋಧ ಶುರು ಮಾಡಿದ್ದಾರೆ.