ಅಂಕೋಲಾದ ಡೋಂಗ್ರಿ ಗ್ರಾಮ ಪಂಚಾಯತ ಕಚೇರಿಯಲ್ಲಿ 20 ನಿಮಿಷಗಳ ಕಾಲ ನಡೆದ ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ 10 ಜನ ಸಹ ಭಾಗವಹಿಸಿಲ್ಲ. ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಫೋಟೋಗೆ ಮಾತ್ರ ಸೀಮಿತವಾಗಿದ್ದು, ಕಾಟಾಚಾರಕ್ಕೆ ಜಯಂತಿ ಆಚರಣೆ ನಡೆದ ಬಗ್ಗೆ ಅಸಮಧಾನವ್ಯಕ್ತವಾಗಿದೆ.
ADVERTISEMENT
ಡೋಂಗ್ರಿ ಗ್ರಾಮ ಪಂಚಾಯತದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಿಡಿಓ ಮಹಾದೇವ ಗೌಡ ಅವರು ಭಾಗವಹಿಸಿಲ್ಲ. ಆಡಳಿತಾಧಿಕಾರಿಯಾಗಿರುವ ಅರಣ್ಯಾಧಿಕಾರಿ ಸುರೇಶ ನಾಯ್ಕ ಅವರು ಸಹ ಕಾರ್ಯಕ್ರಮಕ್ಕೆ ಆಗಮಿಸಿಲ್ಲ. `ರಾಷ್ಟ್ರೀಯ ನಾಯಕರ ಜಯಂತಿಗಳನ್ನು ಆಚರಿಸುವಾಗ ಪಾಲಿಸಬೇಕಾದ ನಿಯಮಗಳು ಮತ್ತು ವಿಧಾನಗಳನ್ನು ಕಡೆಗಣಿಸಿ ಕಾಟಾಚಾರಕ್ಕೆ ಅಂಬೇಡ್ಕರ್ ಜಯಂತಿ ಆಚರಿಸಲಾಗಿದೆ’ ಎಂದು ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಮಂಜುನಾಥ ಸಿದ್ಧಿ ಅವರು ಅಸಮಧಾನವ್ಯಕ್ತಪಡಿಸಿದ್ದಾರೆ. `ಕಳೆದ ವರ್ಷ ಸಹ ಕಾಟಾಚಾರಕ್ಕೆ ಅಂಬೇಡ್ಕರ್ ಜಯಂತಿ ಆಚರಿಸಲಾಗಿದ್ದು, ಈ ಬಾರಿಯೂ ಅದೇ ರೀತಿ ಮಾಡಲಾಗಿದೆ’ ಎಂದವರು ದೂರಿದ್ದಾರೆ.
ADVERTISEMENT
`ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಬಗ್ಗೆ ಗ್ರಾಮ ಪಂಚಾಯತ ಪೂರ್ವಭಾವಿ ಸಭೆ ನಡೆಸಿಲ್ಲ. ಅಂಬೇಡ್ಕರ್ ಅವರ ತತ್ವ-ಸಿದ್ಧಾಂತದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಆಸಕ್ತಿವಹಿಸಿಲ್ಲ. ಕಾರ್ಯಕ್ರಮ ನಡೆಸುವ ಬಗ್ಗೆ ಯಾರಿಗೂ ಅಧಿಕೃತ ಮಾಹಿತಿ ನೀಡಿಲ್ಲ. ಅಲ್ಲಿನ ಸಿಬ್ಬಂದಿಯೇ ಸೇರಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಫೋಟೋ ತೆಗೆಸಿಕೊಂಡಿದ್ದು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆದಿಲ್ಲ’ ಎಂದವರು ಆಕ್ರೋಶಹೊರಹಾಕಿದ್ದಾರೆ.
ADVERTISEMENT
`ಗ್ರಾಮ ಪಂಚಾಯತ್ ಒಂದು ಸಾರ್ವಜನಿಕ ಹಾಗೂ ಪ್ರಜಾಪ್ರಭುತ್ವ ಸಂಸ್ಥೆಯಾಗಿದೆ. ಇಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮವೂ ನಿಯಮಾನುಸಾರ ಮತ್ತು ಪಾರದರ್ಶಕವಾಗಿ ನಡೆಯಬೇಕು. ಆದರೆ ಇಲ್ಲಿ ಜನಪ್ರತಿನಿಧಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿ, ಕೆಲವು ಸಿಬ್ಬಂದಿ ಮಾತ್ರ ಕಾಟಾಚಾರಕ್ಕೆ ಕಾರ್ಯಕ್ರಮ ನಡೆಸಿರುವುದು ಖಂಡನೀಯ’ ಎಂದವರು ಹೇಳಿದ್ದಾರೆ. `ಗ್ರಾಮ ಪಂಚಾಯತ್ ಮಟ್ಟದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಿಗೆ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಸಭೆ ನಡೆಸುವ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಬೇಕು. ಅಧಿಕಾರಿಗಳ ಸಮ್ಮುಖದಲ್ಲಿ ಆಚರಣೆ ನಡೆಯಬೇಕು. ಆದರೆ, ಇಲ್ಲಿ ಇದ್ಯಾವುದು ನಡೆದಿಲ್ಲ’ ಎಂದವರು ದೂರಿದ್ದಾರೆ.
ಬಾಗಿಲು ಮುಚ್ಚಿದ ಗ್ರಾಮ ಪಂಚಾಯತ ಕಚೇರಿ ಮುಂದೆ ಗ್ರಾ ಪಂ ಮಾಜಿ ಅಧ್ಯಕ್ಷ ಮಂಜುನಾಥ ಸಿದ್ದಿ
`ಅಧಿಕಾರಿಗಳು ಯಾವ ಕಾರಣಕ್ಕೆ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ? ಎಂದು ಸ್ಪಷ್ಟನೆ ಕೊಡಬೇಕು. ಅಂಬೇಡ್ಕರ್ ಜಯಂತಿಗೆ ಅವಮಾನ ಮಾಡುವಂಥ ಇಂಥ ಘಟನೆ ಮರುಕಳಿಸದ ಹಾಗೇ ಎಚ್ಚರಿಕೆವಹಿಸಬೇಕು. ಮೇಲಧಿಕಾರಿಗಳು ಸಹ ಈ ಬಗ್ಗೆ ಕ್ರಮ ಜರುಗಿಸಬೇಕು’ ಎಂದವರು ಒತ್ತಾಯಿಸಿದ್ದಾರೆ. ಗ್ರಾಮ ಪಂಚಾಯತ್ ಆಡಳಿತದ ಕಾರ್ಯವೈಖರಿಯ ಕುರಿತು ಹಲವು ಪ್ರಶ್ನೆಗಳು ಉದ್ಬವಿಸಿದ್ದು, ಈ ಬಗ್ಗೆ ಮೇಲಧಿಕಾರಿಗಳಿಗೂ ದೂರು ನೀಡುವುದಾಗಿ ಮಂಜುನಾಥ ಸಿದ್ಧಿ ಅವರು ಹೇಳಿದ್ದಾರೆ.