ಕಾರವಾರದ ಅಸ್ನೋಟಿಯ ಮೇದವಾಡಾ ಗ್ರಾಮದ ರಾಮನಾಥ ದೇವಾಲಯದಲ್ಲಿ ಭಾರೀ ಪ್ರಮಾಣದ ಹಗರಣ ನಡೆದಿದೆ. ಈ ಬಗ್ಗೆ ಗ್ರಾಮಸ್ಥರು ದೂರು ನೀಡಿದರೂ ಮುಜರಾಯಿ ಇಲಾಖೆ ಮೌನವಾಗಿರುವುದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ.
ಕಾರವಾರದ ಅಸ್ನೋಟಿಯ ಮೇದವಾಡಾ ಗ್ರಾಮದಲ್ಲಿ ಅನಾಧಿಕಾಲದಿಂದಲೂ ರಾಮನಾಥ ದೇವಾಲಯವಿದೆ. ಸುತ್ತಲಿನ ಅನೇಕ ಊರಿನ ಭಕ್ತರು ಇಲ್ಲಿನ ದೇವರಿಗೆ ನಡೆದುಕೊಳ್ಳುತ್ತಾರೆ. ನಾನಾ ರಾಜ್ಯದ ಭಕ್ತರು ಇಲ್ಲಿಗೆ ಆಗಮಿಸಿ ದೇವರ ಸೇವೆ ಮಾಡುತ್ತಾರೆ. ಹೀಗಿರುವಾಗ ದೇವಸ್ಥಾನದ ಜಮೀನು ಅಕ್ರಮ ಹಸ್ತಾಂತರ ಹಾಗೂ ಹಣಕಾಸು ಅವ್ಯವಹಾರದ ಆರೋಪ ದೇವಾಲಯವನ್ನು ಆವರಿಸಿದೆ.
`ದೇವಸ್ಥಾನದ ಹೆಸರಿನಲ್ಲಿದ್ದ ಜಮೀನನ್ನು ಮಾಜಿ ಮುಕ್ತಸರರು ನಕಲಿ ದಾಖಲೆಗಳ ಮೂಲಕ ಬೇರೆಯವರ ಹೆಸರಿಗೆ ವರ್ಗಾಯಿಸಿದ್ದಾರೆ’ ಎಂದು ಅದೇ ಊರಿನ ಜನ ದೂರಿದ್ದಾರೆ. `ಕೊಂಕಣ ಮರಾಠಾ ಸಮುದಾಯ ಭವನ ನಿರ್ಮಾಣಕ್ಕಾಗಿ ದತ್ತಿ ಇಲಾಖೆಯ ಅನುಮತಿಪಡೆಯದೇ ಜಮೀನನ್ನು ದಾನವಾಗಿ ನೀಡಲಾಗಿದೆ. ಸಾರ್ವಜನಿಕರ ವಿರೋಧದ ಕಾರಣ ಕಾಮಗಾರಿ ಅರ್ದಕ್ಕೆ ನಿಂತಿದ್ದು, ಕಟ್ಟಡ ಸಾಮಗ್ರಿಗಳು ಶಾಲಾ ಮಕ್ಕಳ ಆಟದ ಮೈದಾನದಲ್ಲಿ ಬಿದ್ದಿರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ’ ಎಂಬುದು ಊರಿನವರ ಅಳಲು. `ಈ ಅನಧಿಕೃತ ಕಟ್ಟಡವನ್ನು ತೆರವುಗೊಳಿಸಲು ಇಲಾಖೆ ಮುಂದಾಗಿಲ್ಲ. ದೇವಾಲಯದ ಆರ್ಥಿಕ ವಿಷಯಗಳ ಬಗ್ಗೆ ಅಧಿಕೃತ ಆಡಿಟ್ ಸಹ ನಡೆದಿಲ್ಲ’ ಎಂಬುದು ಅಲ್ಲಿನವರ ಅಸಮಧಾನ.
`ದೇವಸ್ಥಾನವು ಸಿ ವರ್ಗದಡಿ ನೋಂದಣಿಯಾಗಿದ್ದರೂ 2005ರಿಂದ 2026ರವರೆಗೆ ಆಡಿಟ್ ನಡೆಸಿಲ್ಲ. ದೇವಸ್ಥಾನದ ಹುಂಡಿಗೆ ಇಲಾಖೆಯು ಸೀಲ್ ಹಾಕಿಲಾಗಿದ್ದರೂ ಅದರ ಕೀಲಿ ಮಾಜಿ ಮೊಕ್ತೇಸರರ ವಶದಲ್ಲಿದೆ. ಜಾತ್ರೆ ಹಾಗೂ ಇನ್ನಿತರ ಕಾರ್ಯಕ್ರಮಗಳ ಹೆಸರಿನಲ್ಲಿ ಇಲಾಖೆಯ ಮೊಹರು ಇಲ್ಲದ ರಸೀದಿಗಳನ್ನು ನೀಡಿ ಲಕ್ಷಾಂತರ ರೂಪಾಯಿ ದೇಣಿಗೆ ಸಂಗ್ರಹಿಸಲಾಗುತ್ತಿದ್ದು, ಅದನ್ನು ಮೋಕ್ತೆಸರರು ಸ್ವಂತಕ್ಕೆ ಬಳಸಿದ್ದಾರೆ’ ಎಂದು ಅಲ್ಲಿನವರು ದೂರಿದ್ದಾರೆ.
ಊರಿನ ಗಜೇಂದ್ರ ನಾಯ್ಕ ಅವರು ಈ ಬಗ್ಗೆ ಮಾತನಾಡಿದ್ದು, `ಹಗರಣದ ಎಲ್ಲಾ ಕಡತ ಬೆಂಗಳೂರಿನ ಆಯುಕ್ತರಿಗೆ ರವಾನೆಯಾಗಿದೆ. ಜಿಲ್ಲಾಡಳಿತ ಕಳುಹಿಸಿದ ಕಡತದ ಬಗ್ಗೆ ಆಯುಕ್ತರು ಕ್ರಮ ಜರುಗಿಸುತ್ತಿಲ್ಲ’ ಎಂದಿದ್ದಾರೆ. `ದೂರು ನೀಡಿದ ಗ್ರಾಮಸ್ಥರಿಗೆ ನ್ಯಾಯ ನೀಡುವ ಬದಲು ಅಧಿಕಾರಿಗಳು ಲೋಪಗಳನ್ನು ಮರೆಮಾಚುತ್ತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ. `ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಆಡಳಿತ ಮಂಡಳಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಅಲ್ಲಿನ ಗಣಪತಿ ಆಚಾರಿ, ಕನನ್ಯಾ ವಾರಿಕರ, ಸೂರಜ್ ಅಸ್ನೋಟಿಕರ್, ಸಂಜಯ ದೇವದಾಸ, ವಿಷ್ಣು ಕೊಳಗೇಕರ್, ಕಿಶನ್ ವಾರಿಕರ್ ಇತರರು ಆಗ್ರಹಿಸಿದ್ದಾರೆ.