ಮಂಗನನ್ನು ಓಡಿಸಲು ಏರ್ಗನ್ ಹಿಡಿದು ಹೊರಟಿದ್ದ ಹೊನ್ನಾವರದ ಸುಬ್ರಹ್ಮಣ್ಯ ಮರಾಠಿ ಅದೇ ಏರ್ ಗನ್ ಗುಂಡಿಗೆ ಬಲಿಯಾಗಿದ್ದು, ಒಂದು ತಿಂಗಳ ನಂತರ ಸುಬ್ರಹ್ಮಣ್ಯ ಮರಾಠಿ ಅವರ ಸಹೋದರ ಮಾಬ್ಲು ಮರಾಠಿ ವಿರುದ್ಧ ಸಂಶಯ ಶುರುವಾಗಿದೆ.
ಹೊನ್ನಾವರದ ಗೇರುಸೊಪ್ಪ ಬಳಿಯ ಕೊಂಕಣಮಕ್ಕಿಯ ಹಾಡಗೇರಿ ಗ್ರಾಮದಲ್ಲಿ 2026ರ ಮಾರ್ಚ 15ರಂದು ಸುಬ್ರಹ್ಮಣ್ಯ ಮರಾಠಿ ಅವರು ಸಾವನಪ್ಪಿದ್ದರು. ಮಂಗನನ್ನು ಓಡಿಸಲು ಏರ್ಗನ್ ಹಿಡಿದು ಹೊರಟ ಅವರು ಅದೇ ಏರ್ ಗನ್ ಗುಂಡಿನಿoದ ಸಾವನಪ್ಪಿದ್ದರು. ಈ ವೇಳೆ ಸುಬ್ರಹ್ಮಣ್ಯ ಮರಾಠಿ ಅವರ ತಾಯಿ ಗಂಗೆ ಮರಾಠಿ ಹಾಗೂ ಅವರ ಪತಿ ಮನೆಯಲ್ಲಿ ಊಟ ಮಾಡುತ್ತಿದ್ದರು. ಹಿರಿಯ ಮಗ ಮಾಬ್ಲು ಮರಾಠಿ ಮನೆ ಹೊರಗೆ ಅಡಿಕೆ ಸುಲಿಯುತ್ತಿದ್ದರು. ಸುಬ್ರಹ್ಮಣ್ಯ ಮರಾಠಿ ಅವರು ಕೂಗಿದ ಸದ್ದು ಕೇಳಿ ಬಂದು ನೋಡುವಷ್ಟರಲ್ಲಿ ಅವರು ಶವವಾಗಿದ್ದರು. ಅಂಗಳದಲ್ಲಿ ಮಗ ನರಳಾಡುವುದನ್ನು ನೋಡಿದ ಗಂಗೆ ಮರಾಠಿ ಅವರು ಆಘಾತಕ್ಕೆ ಒಳಗಾಗಿದ್ದರು. `ಆಸ್ಪತ್ರೆಗೆ ಕರೆದುಕೊಂಡು ಹೋಗು’ ಎಂದು ಸುಬ್ರಹ್ಮಣ್ಯ ಮರಾಠಿ ಹೇಳಿದ್ದು, ಆಸ್ಪತ್ರೆಗೆ ಒಯ್ಯುವ ಮುನ್ನ ಅವರು ಶವವಾಗಿದ್ದರು.
ಇದನ್ನು ಓದಿ: ಆ ದಿನ ನಡೆದಿದ್ದೇನು? ಎದೆಗೆ ನಾಟಿದ ಏರ್ಗನ್ ಗುಂಡು
ಶವದ ಪಕ್ಕ ಬಿದ್ದಿದ್ದ ಏರ್ ಗನ್, ರಕ್ತದ ಓಕಳಿ ನೋಡಿ ಆತಂಕದಲ್ಲಿದ್ದ ಗಂಗೆ ಮರಾಠಿ ಅವರು ಸಾವಿನ ಬಗ್ಗೆ ಸಂಶಯವ್ಯಕ್ತಪಡಿಸಿ ಪೊಲೀಸ್ ದೂರು ನೀಡಿದ್ದರು. ಮೇಲ್ನೋಟಕ್ಕೆ ಆಕಸ್ಮಿಕವಾಗಿ ಏರಗನ್ ಗುಂಡು ತಗುಲಿ ಸುಬ್ರಹ್ಮಣ್ಯ ಮರಾಠಿ ಅವರು ಸಾವನಪ್ಪಿದ ರೀತಿ ಕಾಣಿಸಿದ್ದರೂ ಪೊಲೀಸರು ಅದನ್ನು ಒಪ್ಪಲು ಸಿದ್ಧವಾಗಿರಲಿಲ್ಲ. ಸುಬ್ರಹ್ಮಣ್ಯ ಮರಾಠಿ ಅವರೇ ಏರ್ಗನ್’ನಿಂದ ಗುಂಡು ಹೊಡೆದುಕೊಂಡಿದನ್ನು ನೋಡಿದವರಿರಲಿಲ್ಲ. ಈ ಹಿನ್ನಲೆ ಪೊಲೀಸರು ಈ ವಿಷಯದ ಬಗ್ಗೆ ಗುಪ್ತ ಮಾಹಿತಿ ಸಂಗ್ರಹಿಸಲು ಶುರು ಮಾಡಿದ್ದರು.
ಮಾಬ್ಲಾ ಮಂಜಾ ಮರಾಠಿ ಅವರು ಏರ್ಗನ್ ಬಳಸುವ ವೇಳೆ ಆ ಗುಂಡು ಸುಬ್ರಹ್ಮಣ್ಯ ಮರಾಠಿ ಅವರಿಗೆ ತಗುಲಿದ ಬಗ್ಗೆ ಊರಿನವರು ಮಾತನಾಡುತ್ತಿದ್ದರು. ಪೊಲೀಸ್ ಸಿಬ್ಬಂದಿ ವಿಠ್ಠಲ ಗೌಡ ಅವರು ಈ ಬಗ್ಗೆ ಅಲ್ಲಲ್ಲಿ ವಿಚಾರಿಸಿದ್ದು, ಈ ಬಾತ್ಮಿಯನ್ನು ಖಚಿತಪಡಿಸಿಕೊಂಡರು. ಸುಬ್ರಹ್ಮಣ್ಯ ಮರಾಠಿ ಅವರ ಸಹೋದರ ಮಾಬ್ಲಾ ಮರಾಠಿ ಅವರನ್ನು ಆರೋಪಿ ಸ್ಥಾನದಲ್ಲಿರಿಸಿ ಪೊಲೀಸರು ಪ್ರಕರಣ ದಾಖಲಿಸಿದರು.