ಎರಡುವರೆ ಕೆಜಿ ಗಾಂಜಾ ಹಿಡಿದು ಶಿರಸಿಗೆ ಬಂದಿದ್ದ ಮೊಹ್ಮದ್ ಅಸ್ಬಾಕ್ ಪೊಲೀಸರನ್ನು ಕಂಡು ಪರಾರಿಯಾಗಿದ್ದು, ಆರು ವರ್ಷದ ನಂತರ ಸಿಕ್ಕಿ ಬಿದ್ದಿದ್ದಾರೆ. ಗಾಂಜಾ ಮಾರಾಟಗಾರನನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
2021ರ ಮಾರ್ಚ 19ರಂದು ಮುಂಡಗೋಡು ಮುಂಡಗೋಡು ಮಳಗಿ ಸಿದ್ದಾಪುರ ಓಣಿಯ ಶಬ್ಬಿರ ಪೀರಸಾಬ್ ಶೇಖ್ ಹಾಗೂ ಕೇರಳದ ಮಹ್ಮದ್ ಅಸ್ಪಾಕ್ ಜಾಹೀರ ಅಹ್ಮದ್ ಶೇಖ್ ಸೇರಿ ಗಾಂಜಾ ಮಾರಾಟಕ್ಕಾಗಿ ಶಿರಸಿಗೆ ಬಂದಿದ್ದರು. ಎಂ ಇ ಎಸ್ ಕಾಲೇಜು ರಸ್ತೆಯ ಮಾರಿಕಾಂಬಾ ಕ್ರೀಡಾಂಗಣ ಕ್ರಾಸಿನ ಬಳಿ ಅವರಿಬ್ಬರು ಸೇರಿ 2 ಸಾವಿರ ರೂ ಮೌಲ್ಯದ ಗಾಂಜಾ ಮಾರಾಟ ಮಾಡಿದ್ದರು. 75 ಸಾವಿರ ರೂ ಮೌಲ್ಯದ ಎರಡುವರೆ ಕೆಜಿ ಗಾಂಜಾವನ್ನು ಅವರು ಹೊಂದಿದ್ದು, ಅದನ್ನು ಮಾರಾಟ ಮಾಡುವುದಕ್ಕಾಗಿ ಗಿರಾಕಿ ಹುಡುಕುತ್ತಿದ್ದರು.
ಪಿಸೈ ನಾಗಪ್ಪ ಅವರು ಅವರಿಬ್ಬರನ್ನು ನೋಡಿದರು. ಪೊಲೀಸರನ್ನು ಕಂಡ ತಕ್ಷಣ ಮಹ್ಮದ್ ಅಸ್ಪಾಕ್ ಜಾಹೀರ ಅಹ್ಮದ್ ಶೇಖ್ ಅಲ್ಲಿಂದ ಓಡಿ ಪರಾರಿಯಾದರು. ಶಬ್ಬಿರ ಪೀರಸಾಬ್ ಶೇಖ್ ಆ ವೇಳೆ ಸಿಕ್ಕಿಬಿದ್ದಿದ್ದು, ಅವರ ಬಳಿಯಿದ್ದ ಗಾಂಜಾ ಜೊತೆ ಹಣ, ಮೊಬೈಲನ್ನು ಪೊಲೀಸರು ಜಪ್ತು ಮಾಡಿದರು. ಜೊತೆಗೆ ಅವರಿಬ್ಬರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದರು. ಆದರೆ, ಆ ದಿನ ಓಡಿ ಪರಾರಿಯಾಗಿದ್ದ ಮಹ್ಮದ್ ಅಸ್ಪಾಕ್ ಜಾಹೀರ ಅಹ್ಮದ್ ಶೇಖ್ ನಂತರ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಪೊಲೀಸರು ಹುಡುಕಾಟ ನಡೆಸಿದರೂ ಸಿಗಲಿಲ್ಲ.
ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಓಡಿ ಪರಾರಿಯಾಗಿದ್ದ ಮಹ್ಮದ್ ಅಸ್ಪಾಕ್ ಜಾಹೀರ ಅಹ್ಮದ್ ಶೇಖ್ ಹುಡುಕಾಟಕ್ಕೆ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತು. ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆ ಪಿಸೈ ಬಸವರಾಜ ಕನಕಶೆಟ್ಟಿ ಅವರು ವಿಶೇಷ ತಂಡ ರಚಿಸಿ ಆರೋಪಿ ಶೋಧ ಮಾಡಿದರು. ಪೊಲೀಸ್ ಸಿಬ್ಬಂದಿ ಮೋಹನ ನಾಯ್ಕ, ವಿಶ್ವನಾಥ ಭಂಡಾರಿ, ಪ್ರದೀಪ ನಾಯಕ, ಅಶೋಕ ಹರಿಕಂತ್ರ, ರಮೇಶ ಮಚ್ಚಂಡಿ ಸೇರಿ ಮಹ್ಮದ್ ಅಸ್ಪಾಕ್ ಜಾಹೀರ ಅಹ್ಮದ್ ಶೇಖ್ ಅವರನ್ನು ಹುಡುಕಿದರು. ಸಿಕ್ಕಿಬಿದ್ದ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ನ್ಯಾಯಾಲಯ ಮುಂದಿನ ಕ್ರಮ ಜರುಗಿಸಿದೆ.