ಮೊಮ್ಮಗಳ ಮದುವೆ ಮುಗಿಸಿ ಮನೆಗೆ ಮರಳಬೇಕಿದ್ದ ಲಲಿತಾ ಹೆಗಡೆ ಅವರು ಶಿರಸಿ-ಹಾವೇರಿ ಹೆದ್ದಾರಿಯಲ್ಲಿ ಪ್ರಯಾಣಿಸಿದ್ದು, ಪರಿಣಾಮ ಅವರ ಸೊಂಟ ಮುರಿದಿದೆ. ಸೊಂಟಕ್ಕೆ ಬೆಲ್ಟ್ ಹಾಕಿದ ವೈದ್ಯರು ಏಳು ತಿಂಗಳ ವಿಶ್ರಾಂತಿಗೆ ಸೂಚಿಸಿದ್ದಾರೆ!
ಶಿರಸಿ-ಹಾವೇರಿ ಹೆದ್ದಾರಿ ಸಂಪೂರ್ಣವಾಗಿ ಹದಗೆಟ್ಟಿದ್ದು, ನಿತ್ಯ ಸಾವಿರಾರು ಜನ ಇಲ್ಲಿ ಸಮಸ್ಯೆ ಅನುಭವಿಸುತ್ತಿದ್ದಾರೆ. ರಾಜಕಾರಣಿಗಳ ಅಸಡ್ಡೆ, ಗುತ್ತಿಗೆದಾರರ ಬೇಜವಬ್ದಾರಿಯಿಂದ ಜನ ಹೈರಣಾಗಿದ್ದಾರೆ. ಹದಗೆಟ್ಟ ರಸ್ತೆ, ಅತಿಯಾದ ಧೂಳಿನಿಂದ ಅನೇಕರು ಆರೋಗ್ಯ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ವಿವಿಧ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿಯೂ ಶಿರಸಿ-ಹಾವೇರಿ ಹೆದ್ದಾರಿ ಬಗ್ಗೆ ವಿಷಯ ಬರುತ್ತಿದೆ. ಸದ್ಯ ರಸ್ತೆಯ ಪ್ಯಾಚ್ವರ್ಕ ಕೆಲಸ ನಡೆಯುತ್ತಿದ್ದರೂ ಜನ ಅದರಿಂದ ಸಮಾಧಾನವಾಗಿಲ್ಲ.
ಈ ಹೆದ್ದಾರಿ ಹದಗೆಟ್ಟ ಕಾರಣ ಈಗಾಗಲೇ ಎರಡು ಸಾವಾಗಿದೆ. ರಸ್ತೆ ಪಕ್ಕದ ನಿವಾಸಿಗಳು ಅಸ್ತಮಾ ರೋಗಕ್ಕೆ ತುತ್ತಾಗಿದ್ದಾರೆ.
ಈ ಎಲ್ಲದರ ನಡುವೆ ವೃದ್ಧೆಯೊಬ್ಬರು ಈ ಮಾರ್ಗದ ಬಸ್ಸಿನಲ್ಲಿ ಸಂಚರಿಸಿ ಸಮಸ್ಯೆಗೆ ಸಿಲುಕಿದ್ದಾರೆ. ಈ ದಿನ 76 ವರ್ಷದ ಲಲಿತಾ ಹೆಗಡೆ ಅವರು ಆಸ್ಪತ್ರೆ ಸೇರಿದ ಸುದ್ದಿ ಬಂದಿದ್ದು, ಹದಗೆಟ್ಟ ರಸ್ತೆಯಿಂದ ಈ ಸಮಸ್ಯೆ ಬಂದಿರುವುದನ್ನು ಕೇಳಿ ಆಸ್ಪತ್ರೆಯ ವೈದ್ಯರು ದಂಗಾಗಿದ್ದಾರೆ. ಸದ್ಯ ಪೂನಾದಲ್ಲಿ ವಾಸವಾಗಿರುವ ಲಲಿತಾ ಭಟ್ಟ ಅವರು ಮೊಮ್ಮಗಳ ಮದುವೆಗಾಗಿ ಶಿರಸಿಗೆ ಬಂದಿದ್ದು, ಮರಳುವ ವೇಳೆ ಸೊಂಟ ಮುರಿದುಕೊಂಡಿದ್ದಾರೆ. ಪರಿಣಾಮ ಪತಿ ಹಾಗೂ ಮಗ ಸೇರಿ ಲಲಿತಾ ಹೆಗಡೆ ಅವರ ಆರೈಕೆ ಮಾಡುವ ಹಾಗಾಗಿದೆ. ವಿ ಆರ್ ಎಲ್ ಬಸ್ಸಿನಲ್ಲಿ ಮುಂಗಡವಾಗಿ ಕಾಯ್ದಿರಿಸಿದ ಬಸ್ಸಿನಲ್ಲಿ ಪೂನಾಗೆ ಹೋಗಬೇಕಿದ್ದ ಅವರಿಗೆ ಕೊನೆಯ ಆಸನ ಸಿಕ್ಕಿದ್ದು, ಅಲ್ಲಿ ಅವರು ಆಸೀನರಾಗಿದ್ದಾರೆ. ಬಸ್ಸು ಹಾವೇರಿ ಹೆದ್ದಾರಿ ಚಲಿಸುವಾಗ ಸೊಂಟ ನೋವು ಬಂದರೂ ಪ್ರಯಾಣದಲ್ಲಿ ಅದು ಸಾಮಾನ್ಯ ಎಂದವರು ಭಾವಿಸಿದ್ದಾರೆ.
ಶಿರಸಿಯಿಂದ ಹಾವೇರಿ ಮಾರ್ಗವಾಗಿ ಹೊರಟ ಬಸ್ಸು ಪೂನಾ ತಲುಪಿದ್ದು, ಊರು ಮುಟ್ಟಿದ ಮೇಲೆ ಸೊಂಟ ಮುರಿದಿರುವುದು ಗೊತ್ತಾಗಿದೆ. ಸ್ಲೀಪರ್ ಬಸ್ಸಿನಲ್ಲಿ ಮಲಗಿದಾಗ ಸೊಂಟ ಉಳುಕಿದ ಹಾಗಾಗಿದ್ದರೂ ಸಾಮಾನ್ಯ ನೋವು ಎಂದು ಭಾವಿಸಿದ್ದ ಲಲಿತಾ ಹೆಗಡೆ ಅವರಿಗೆ ಇದೀಗ ಆಘಾತವಾಗಿದೆ. ಸದ್ಯ ನೋವು ಜಾಸ್ತಿ ಆಗಿದ್ದರಿಂದ ಕುಳಿತುಕೊಳ್ಳಲು ಆಗದೇ, ಮಲಗಲು ಆಗದೇ ಅವರು ನರಕ ಅನುಭವಿಸುತ್ತಿದ್ದಾರೆ. ಇನ್ನೂ 76 ವರ್ಷ ಆದ ಕಾರಣ `ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲ’ ಎಂದು ವೈದ್ಯರು ತಿಳಿಸಿದ್ದಾರೆ. ಇದೀಗ ಏಳು ತಿಂಗಳ ಔಷಧ ಚಿಕಿತ್ಸೆ ಮತ್ತು ನಿರಂತರ ನೋವಿನ ನಡುವೆ ಅವರು ಬದುಕು ಸಾಗಿಸುವ ಪರಿಸ್ಥಿತಿಗೆ ಸಿಲುಕಿದ್ದಾರೆ.