ನೂರಕ್ಕೂ ಅಧಿಕ ಮರಿ ಪುಡಾರಿಗಳಿಗೆ ಆಶ್ರಯ ನೀಡಿ ಕಾನೂನುಬಾಹಿರ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಮುಂಡಗೋಡಿನ ಜಮೀರ್ ಅಹ್ಮದ್ ದುರ್ಗಾವಾಲೆ ಅವರ ಬರ್ಬರ ಹತ್ಯೆ ನಡೆದಿದೆ. ಕಳೆದ ವರ್ಷ ಅಪಹರಣಕ್ಕೊಳಗಾಗಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡು ಬಂದಿದ್ದ ಜಮೀರ್ ಈ ವರ್ಷ ಶವವಾಗಿದ್ದಾರೆ.
ಜಮೀರ್ ಅಹ್ಮದ್ ದುರ್ಗಾವಾಲೆ ಅವರು ಮುಂಡಗೋಡಿನಲ್ಲಿ ಮೀಟರ್ ಬಡ್ಡಿಯ ಸಾಮ್ರಾಜ್ಯ ಕಟ್ಟಿದ್ದರು. ಜೈಲಿನಿಂದ ಜಾಮೀನಿನ ಮೇಲೆ ಹೊರಬರುವ ಕೈದಿಗಳಿಗೆ ಅದ್ಧೂರಿ ಸ್ವಾಗತ-ಮೆರವಣಿಗೆ ಮಾಡಿ ಅವರನ್ನು ತಮ್ಮ ಗುಂಪಿಗೆ ಸೇರಿಸಿಕೊಳ್ಳುತ್ತಿದ್ದರು. ಕಾನೂನುಬಾಹಿರ ಚಟುವಟಿಕೆಗಳಿಗೆ ಆ ಕೈದಿಗಳನ್ನು ಬಳಸಿಕೊಂಡು ಅಕ್ರಮ ಮರಳುಗಾರಿಕೆ, ಬೆಟ್ಟಿಂಗ್, ಬ್ಲಾಕ್ ಟಿಕೆಟ್ ಮಾರಾಟ, ಮಟ್ಕಾ, ಹಪ್ತಾ ವಸೂಲಿ ಜೊತೆ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದರು. ನೂರಕ್ಕೂ ಅಧಿಕ ಅಪರಾಧ ಹಿನ್ನಲೆ ಹೊಂದಿದವರು ಜಮೀರ್ ಅಹ್ಮದ್ ದುರ್ಗಾವಾಲೆ ಅವರ ಸಹಚರರಾಗಿದ್ದರು. ಜಮೀರ್ ಅಹ್ಮದ್ ದುರ್ಗಾವಾಲೆ ಅವರು ಎನ್ ಎಂ ಡಿ ಎಂಬ ಕಂಪನಿ ಕಟ್ಟಿ ಉದ್ಯಮಿ ಎಂದು ಗುರುತಿಸಿಕೊಂಡಿದ್ದರು.
ಧಾರವಾಡದಲ್ಲಿ ಕೊಲೆ ಆರೋಪದ ಅಡಿ ಜೈಲು ಸೇರಿದ್ದ ರಹೀಮ್ ಹಾಗೂ ಅಜಯ್ ಎಂಬಾತರನ್ನು ಜಮೀರ್ ಅಹ್ಮದ್ ದುರ್ಗಾವಾಲೆ ಅವರು ಪರಿಚಯಿಸಿಕೊಂಡು, ಅವರ ಸ್ನೇಹ ಬೆಳೆಸಿದ್ದರು. ಅವರಿಬ್ಬರು ಜಮೀರ್ ಅವರ ಮನೆಗೆ ಬಂದಾಗ ಅಲ್ಲಿನ ಶ್ರೀಮಂತಿಕೆ ನೋಡಿ, ಮುಂಡಗೋಡಿನ ಖಾಜಾ ಎಂಬಾತರ ಜೊತೆ ಸೇರಿ ಜಮೀರ್ ಅವರ ಅಪಹರಣಕ್ಕೆ ಸಂಚು ರೂಪಿಸಿದ್ದರು. ಆ ಕಾರ್ಯಾಚರಣೆಗಿಳಿದವರು ಜಮೀರ್ ಅಹ್ಮದ್ ದುರ್ಗಾವಾಲೆ ಅವರ ಅಪಹರಣ ನಡೆಸಿ, 30 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಈ ವೇಳೆ ಹೆದರಿದ ಜಮೀರ್ ಕುಟುಂಬದವರು 18 ಲಕ್ಷ ರೂ ನೀಡಿ ರಾಜಿ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರು ತಪ್ಪಿಸಿಕೊಳ್ಳುವ ಪ್ರಯತ್ನ ನಡೆದಾಗ ಅವರ ಕಾಲಿಗೆ ಗುಂಡು ಹೊಡೆದಿದ್ದರು.
ಈ ಎಲ್ಲಾ ವಿಷಯಗಳ ಬೆನ್ನಲ್ಲೆ ಶುಕ್ರವಾರ ರಾತ್ರಿ ಜಮೀರ್ ಅಹ್ಮದ್ ದುರ್ಗಾವಾಲೆ ಅವರ ಕೊಲೆಯಾಗಿದೆ. ಜಮೀರ್ ಅಹ್ಮದ್ ಅವರು ಊಟಕ್ಕಾಗಿ ಮುಂಡಗೋಡ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಅಂಬಿಕಾ ಹೋಟೆಲ್ನಲ್ಲಿದ್ದಾಗ ನಾಲ್ವರು ಆಗಮಿಸಿ ಮಾರಕಾಸ್ತ್ರಗಳಿಂದ ಹೊಡೆದು ಅವರ ಕೊಲೆ ಮಾಡಿದ್ದಾರೆ. ಅದಕ್ಕೂ ಮುನ್ನ ದುಷ್ಕರ್ಮಿಗಳು ಮುಖಕ್ಕೆ ಖಾರದ ಪುಡಿ ಎರಚಿದ್ದಾರೆ. ಊಟ ಮಾಡಲು ಸಹ ಸಮಯ ಕೊಡದೇ ಕೊಚ್ಚಿ ಹಾಕಿದ್ದಾರೆ.
ಹಣಕಾಸು ವಿಷಯವಾಗಿ ಜಮೀರ್ ಅಹ್ಮದ್ ದುರ್ಗಾವಾಲೆ ಸಾಕಷ್ಟು ಶತ್ರುಗಳನ್ನುಹೊಂದಿದ್ದು, ಸದ್ಯ ಯಾವ ಉದ್ದೇಶಕ್ಕೆ ಕೊಲೆ ನಡೆದಿದೆ? ಎನ್ನುವುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಕೊಲೆ ವಿಷಯ ಅರಿತ ಕೂಡಲೇ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹಂತಕರ ಹುಡುಕಾಟ ಶುರುವಾಗಿದೆ.