ಕಾರವಾರದಲ್ಲಿ 33 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣದಲ್ಲಿ ಅಸ್ನೋಟಿ ಭಗತವಾಡದ ದಿಲೀಪ್ ತಳೇಕರ್ ಎಂಬಾತರು ಸಿಕ್ಕಿಬಿದ್ದಿದ್ದು, ಅಪರಾಧ ಸಾಭೀತಾದ ಹಿನ್ನಲೆ ದಿಲೀಪ್ ತಳೇಕರ್ ಅವರಿಗೆ ನ್ಯಾಯಾಲಯ ಜೈಲು ಶಿಕ್ಷೆವಿಧಿಸಿದೆ.
1993ರ ಅವಧಿಯಲ್ಲಿ ಕಾರವಾರದಲ್ಲಿ ಪ್ರಶಾಂತ ಎಂಬಾತರ ಕೊಲೆ ನಡೆದಿತ್ತು. ವೈಯಕ್ತಿಕ ದ್ವೇಷಕ್ಕೆ ಪ್ರಶಾಂತ ಅವರು ಬಲಿಯಾಗಿದ್ದರು. ಬಡಿಗೆಯಿಂದ ಬಡಿದು ಪ್ರಶಾಂತ ಅವರನ್ನು ಹತ್ಯೆ ಮಾಡಲಾಗಿತ್ತು. ಆ ಪ್ರಕರಣದಲ್ಲಿ ಅಸ್ನೋಟಿ ಭಗತವಾಡದ ದಿಲೀಪ್ ತಳೇಕರ್ ಅವರು ಆರೋಪಿಯಾಗಿದ್ದರು. ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಶೋಧ ನಡೆಸಿದ್ದರು.
ಆಗಿನ ಕದ್ರಾ ಸಿಪಿಐ ಡಿ ಕೆ ನಿಕ್ಕಿಂ ಅವರು ಈ ಪ್ರಕರಣದ ತನಿಖಾಧಿಕಾರಿಯಾಗಿದ್ದರು. ಆರೋಪಿ ದಿಲೀಪ್ ತಳೇಕರ್ ಅವರನ್ನು ಬಂಧಿಸಿ ಅವರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಜೊತೆಗೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ವಿಚಾರಣಾ ಅವಧಿಯಲ್ಲಿ ಜಾಮೀನುಪಡೆದಿದ್ದ ದಿಲೀಪ್ ತಳೇಕರ್ ನಂತರ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. 2021ರವರೆಗೂ ತಲೆಮರೆಸಿಕೊಂಡು ಅವರು ಓಡಾಟ ನಡೆಸಿದ್ದು, 2021ರ ಏಪ್ರಿಲ್’ನಲ್ಲಿ ಈ ಬಗ್ಗೆ ಅರಿತ ಚಿತ್ತಾಕುಲ ಪಿಸೈ ಆಗಿದ್ದ ಪ್ರವೀಣಕುಮಾರ ಆರೋಪಿ ಹುಡುಕಾಟ ನಡೆಸಿದ್ದರು. ಆಗ, ಸಿಕ್ಕಿಬಿದ್ದ ದಿಲೀಪ್ ತಳೇಕರ್ ಅವರನ್ನು ಬಂಧಿಸಿ ಮತ್ತೆ ನ್ಯಾಯಾಲಯಕ್ಕೆ ಒಪ್ಪಿಸಿದ್ದರು.
ಕೊಲೆ ಆರೋಪದ ದಾಖಲೆಗಳ ಜೊತೆ ಸರ್ಕಾರಿ ಅಭಿಯೋಜಕಿ ಸುನಿತಾ ನಾಗೇಕರ್ ಅವರು ವಾದ ಮಂಡಿಸಿದರು. ದಿಲೀಪ್ ತಳೇಕರ್ ಅವರು ಮಾಡಿದ ಅಪರಾಧದ ಗಂಭೀರತೆಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು. ಏಪ್ರಿಲ್ 28ರಂದು ಕಾರವಾರ ನ್ಯಾಯಾಲಯ ಆದೇಶ ಪ್ರಕಟಿಸಿದ್ದು, ದಿಲೀಪ್ ತಳೇಕರ್’ಗೆ ಐದು ವರ್ಷ ಜೈಲು ಶಿಕ್ಷೆ ಅನುಭವಿಸುವಂತೆ ಸೂಚಿಸಿತು. ಜೊತೆಗೆ 7 ಸಾವಿರ ರೂ ದಂಡವನ್ನು ವಿಧಿಸಿತು.
ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರ ಜೊತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ, ಡಿವೈಎಸ್ಪಿ ಗಿರೀಶ ವಿ ಅವರ ಮಾರ್ಗದರ್ಶನದಲ್ಲಿ ಪಿಸೈ ಪರಶುರಾಮ ಮಿರ್ಚಗಿ, ಎಸೈ ಸಂತೋಷ ನಾಯ್ಕ, ಪೊಲೀಸ್ ಸಿಬ್ಬಂದಿ ಆಂಜನೇಯ ಎಚ್ ಕೆ, ಶ್ರೀಕಾಂತ ನಾಯ್ಕ, ಗಣೇಶ ನಾಯ್ಕ ಅವರು ಈ ಪ್ರಕರಣಕ್ಕೆ ಶ್ರಮಿಸಿದ್ದಾರೆ.