ಭಟ್ಕಳದ ಜಾಲಿ ದೇವಿನಗರದಲ್ಲಿರುವ ಸ್ಮಶಾನ ಭೂಮಿ ಅತಿಕ್ರಮಣವಾಗುತ್ತಿದೆ. ಸ್ಮಶಾನ ಭೂಮಿ ಅಂಚಿನ ಅರಣ್ಯ ಜಾಗವೂ ಆಕ್ರಮಣಕ್ಕೆ ಒಳಗಾಗಿದ್ದು, ಈ ಬಗ್ಗೆ ಅರಿವಿದ್ದರೂ ಅರಣ್ಯ ಇಲಾಖೆ ಮೌನವಾಗಿದೆ.
ಭಟ್ಕಳ ತಾಲೂಕಿನ ಜಾಲಿಯ ದೇವಿನಗರದಲ್ಲಿ ಅನೇಕ ವರ್ಷಗಳಿಂದ ಹಿಂದೂ ರುದ್ರಭೂಮಿಯಿದೆ. ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವ ಈ ಜಾಗದಲ್ಲಿ ಕೆಲವರು ಅತಿಕ್ರಮಣ ನಡೆಸಿದ್ದಾರೆ. ಅಲ್ಲಿ ಮನೆಯನ್ನು ನಿರ್ಮಿಸಿದ್ದು, ಸ್ಮಶಾನ ಭೂಮಿ ಬಿಟ್ಟುಕೊಡುವಂತೆ ಜನ ಬೇಡಿಕೊಂಡರೂ ಪ್ರಯೋಜನವಾಗಿಲ್ಲ. ಅರಣ್ಯ ಇಲಾಖೆಗೆ ದೂರು ನೀಡಿದರೂ ಅವರು ಕಾನೂನು ಕ್ರಮ ಜರುಗಿಸಿಲ್ಲ.
ಗ್ರಾಮದವರು ದೂರು ನೀಡಿದಾಗಲೆಲ್ಲ ಅರಣ್ಯ ಅಧಿಕಾರಿಗಳು ಸ್ಥಳ ಭೇಟಿ ಮಾಡುತ್ತಾರೆ. ಅತಿಕ್ರಮಣದಾರರಿಗೆ ಎಚ್ಚರಿಕೆ ನೀಡುತ್ತಾರೆ. ಆದರೆ, ಹೊಸದಾಗಿ ನಡೆಯುವ ಅತಿಕ್ರಮಣ ತಡೆಯುತ್ತಿಲ್ಲ. ಅಲ್ಲಿ ನಿರ್ಮಾಣವಾಗುವ ಕಟ್ಟಡಗಳನ್ನು ನಿಲ್ಲಿಸುತ್ತಿಲ್ಲ. ಹೀಗಾಗಿ ಹಂತ ಹಂತವಾಗಿ ಸ್ಮಶಾನ ಭೂಮಿ ತುಂಬ ಮನೆ ನಿರ್ಮಾಣವಾಗುವ ಆತಂಕ ಎದುರಾಗಿದ್ದು, ಜನ ಅಸಮಧಾನವ್ಯಕ್ತಪಡಿಸಿದ್ದಾರೆ.
ಈ ಎಲ್ಲದರ ನಡುವೆ ರುದ್ರಭೂಮಿ ಸಮೀಪದಲ್ಲಿರುವ ನಾಗಯಕ್ಷ ಚೌಡಿ ದೇವಸ್ಥಾನ ಹಾಗೂ ಅಯ್ಯಪ್ಪ ಭಜನಾ ಮಂದಿರದ ಅಭಿವೃದ್ಧಿಗೆ ಅರಣ್ಯ ಇಲಾಖೆ ಅಡ್ಡಗಾಲು ಹಾಕಿದೆ. ಸ್ಮಶಾನ ಭೂಮಿ ರಕ್ಷಣೆಗೆ ಮುಂದಾಗದ ಅಧಿಕಾರಿಗಳು ದೇಗುಲ ಅಭಿವೃದ್ಧಿಗೆ ತಡೆ ಒಡ್ಡುತ್ತಿರುವುದಕ್ಕೆ ಆಕ್ಷೇಪವ್ಯಕ್ತವಾಗಿದೆ. ಸ್ಥಳೀಯ ಮುಖಂಡ ದಯಾ ನಾಯ್ಕ ಅವರು ಅಧಿಕಾರಿಗಳ ನಡೆಯ ವಿರುದ್ಧ ಕಿಡಿಕಾರಿದ್ದಾರೆ.