ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರತಿ ಬಾರಿ ದಿಶಾ ಸಭೆ ನಡೆಸಿದಾಗಲೂ `ಸೂರ್ಯಘರ್ ಯೋಜನೆ ಬಗ್ಗೆ ವ್ಯಾಪಕ ಪ್ರಚಾರ ಮಾಡಿ’ ಎಂದು ತಾಕೀತು ಮಾಡುತ್ತಾರೆ. ಆದರೆ, ಈ ವಿಷಯವನ್ನು ಮಾತ್ರ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ!
2025ರ ಸೆಪ್ಟೆಂಬರ್ 12ರಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಾರವಾರದಲ್ಲಿ ದಿಶಾ ಸಭೆ ನಡೆಸಿದ್ದರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ `ಸೂರ್ಯಘರ್ ಯೋಜನೆ’ ಕುರಿತು ಮಾತನಾಡಿದ್ದರು. `ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಬಗ್ಗೆ ವ್ಯಾಪಕ ಪ್ರಚಾರ ಕೊಡಿ’ ಎಂದು ಸೂಚನೆ ನೀಡಿದ್ದರು. `ವಿವಿಧ ಬಸ್ ನಿಲ್ದಾಣ, ರೈಲು ನಿಲ್ದಾಣ ಜೊತೆ ಸರ್ಕಾರಿ ಕಚೇರಿಗಳಲ್ಲಿಯೂ ಈ ಯೋಜನೆಯ ಬಗ್ಗೆ ಫಲಕ ಅಳವಡಿಸಿ’ ಎಂದು ಸೂಚಿಸಿದ್ದರು. 2026ರ ಫೆಬ್ರವರಿ 27ರಂದು ಸಹ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮತ್ತೊಮ್ಮೆ ದಿಶಾ ಸಭೆ ನಡೆಸಿದ್ದು, ಆ ಸಭೆಯಲ್ಲಿಯೂ ಅವರು `ಸೂರ್ಯಘರ್ ಯೋಜನೆ’ ಕುರಿತು ಮಾತನಾಡಿದ್ದರು. ಈ ಯೋಜನೆಯ ಬಗ್ಗೆ ಸಾಕಷ್ಟು ಪ್ರಚಾರ ಕೊಡುವಂತೆ ಮತ್ತೊಮ್ಮೆ ಸೂಚಿಸಿದ್ದರು. ಆದರೆ, ವಿಶ್ವೇಶ್ವರ ಹೆಗಡೆ ಅವರು ನೀಡಿದ ಈ ಸೂಚನೆ ಸರ್ಕಾರಿ ಕಡತದಲ್ಲಿ ದಾಖಲೆಯಾಗಿದೆಯೇ ವಿನ: ಅನುಷ್ಠಾನಕ್ಕೆ ಮಾತ್ರ ಬಂದಿಲ್ಲ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂರ್ಯಘರ್ ಯೋಜನೆಗಾಗಿ ಐದಾರು ಸೋಲಾರ್ ಕಂಪನಿಗಳು ಕೆಲಸ ಮಾಡುತ್ತಿವೆ. ಈ ಯೋಜನೆಯನ್ನು ಜನರಿಗೆ ಸಬ್ಸಿಡಿ ದರದಲ್ಲಿ ತಲುಪಿಸುವುದು ಆ ಕಂಪನಿಯ ಹೊಣೆಯಾಗಿದೆ. ಆದರೆ, ಸಬ್ಸಿಡಿ ಕುರಿತು ಪ್ರಚಾರ ಮಾಡಿ, ಕೇಂದ್ರ ಸರ್ಕಾರ ಹಾಗೂ ಸಂಸದರಿಗೆ ಶ್ರೇಯಸ್ಸು ಕೊಡುವುದಕ್ಕಿಂತಲೂ ಬೇರೆ ಉತ್ಪನ್ನ ಮಾರಾಟ ಮಾಡುವುದೇ ಆ ಕಂಪನಿಗಳಿಗೆ ಸುಲಭದ ಕೆಲಸವಾಗಿದೆ. ಸಬ್ಸಿಡಿ ಕುರಿತು ಜನರಿಗೆ ಸರಿಯಾಗಿ ಮಾಹಿತಿ ದೊರೆತರೆ ಫಲಾನುಭವಿಗಳ ದಾಖಲೆ ಸಂಗ್ರಹಿಸಿ, ಅದನ್ನು ಸರ್ಕಾರಕ್ಕೆ ನೀಡಿ ಸಬ್ಸಿಡಿ ಮೊತ್ತ ಜಮಾ ಮಾಡಿಸುವುದು ಕಂಪನಿಗೆ ಹೆಚ್ಚುವರಿ ಕೆಲಸ. ಹೀಗಾಗಿ ಸಬ್ಸಿಡಿ ಯೋಜನೆಯ ಬಗ್ಗೆ ಮಾಧ್ಯಮ ಜಾಹೀರಾತುಗಳ ಮೂಲಕ ಅರಿವು ಮೂಡಿಸುವ ಅವಕಾಶವಿದ್ದರೂ ಕಂಪನಿಗಳು ಅದಕ್ಕೆ ಆಸಕ್ತಿವಹಿಸುತ್ತಿಲ್ಲ. ಸ್ವತಃ ಸಂಸದರೇ ಈ ಬಗ್ಗೆ ಪ್ರಚಾರ ನೀಡುವಂತೆ ಸೂಚಿಸಿದರೂ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.