ನಟ ದರ್ಶನ್ ಜೊತೆಯೂ ಚಿತ್ರರಂಗದಲ್ಲಿ ಮಿಂಚಿದ್ದ ಶಿರಸಿಯ ಸಂಕೇತ ಮೇಸ್ತಾ ಅವರು ಹೊಡೆದಾಟ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದಾರೆ. ಹೀರೋ ಆಗಬೇಕು ಎಂದು ಕನಸು ಕಂಡಿದ್ದ ಅವರು ಕೆಲವರಿಗೆ ವಿಲನ್ ಆಗಿ ಕಾಣಿಸಿದ್ದಾರೆ.
ಸಂಕೇತ ಮೇಸ್ತಾ ಅವರು ಈ ಹಿಂದೆ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ಚಲನಚಿತ್ರದಲ್ಲಿ ಖಳ ನಾಯಕನ ಪಾತ್ರ ನಿಭಾಯಿಸಿ ಜನರ ಮೆಚ್ಚುಗೆಗಳಿಸಿದ್ದರು. ಶಿರಸಿಯ ಬೇಡರ ವೇಷಕ್ಕೆ ಸಂಕೇತ ಮೇಸ್ತ ಅವರು ಮೆರಗು ತಂದುಕೊಟ್ಟಿದ್ದರು. ಸದ್ಯ ಶಿರಸಿಯ ತೆರಕನಹಳ್ಳಿಯಲ್ಲಿ ಹಣಕಾಸು ವಿಷಯವಾಗಿ ಹೊಡೆದಾಟ ನಡೆದಿದ್ದು, ಚಿತ್ರರಂಗದಲ್ಲಿ ಮಿಂಚಿ ಮೆರೆಯಬೇಕಿದ್ದ ಸಂಕೇತ ಮೇಸ್ತಾ ಅವರು ಸಹ ಈ ಹೊಡೆದಾಟದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ. ಸಂಕೇತ ಮೇಸ್ತ ಅವರಿಗೂ ಪೆಟ್ಟು ಬಿದ್ದಿರುವ ಮಾಹಿತಿಯಿದೆ.
ಕಾರು-ಜೀಪುಗಳಲ್ಲಿ ಗುಂಪು ಕಟ್ಟಿಕೊಂಡು ಬಂದ ಜನ ತುಕಾರಾಮ ನಾಯ್ಕ, ಸುನೀಲ ನಾಯ್ಕ, ರೇಖಾ ನಾಯ್ಕ, ಸುಭಾಸ್ ನಾಯ್ಕ, ಕವಿತಾ ನಾಯ್ಕ ಹಾಗೂ ಸುಮನಾ ಸುಭಾಸ್ ನಾಯ್ಕ ಎಂಬಾತರ ಮೇಲೆ ದಾಳಿ ಮಾಡಿದ್ದಾರೆ. 20ಕ್ಕೂ ಅಧಿಕ ಜನ ಈ ಆಕ್ರಮಣ ನಡೆಸಿದ್ದು, ಕುಟುಂಬದವರು ಆ ದಾಳಿಗೆ ನಲುಗಿದ್ದಾರೆ. ಶಿರಸಿಯ ರಾಮನಬೈಲಿನ 20 ಮಂದಿಯ ಗುಂಪು ಏಕಾಏಕಿ ದಾಳಿ ನಡೆಸಿದ ದೂರಿದ್ದು, ಕಬ್ಬಿಣದ ರಾಡ್, ಪಂಚ್ ಸೇರಿದಂತೆ ವಿವಿಧ ಮಾರಕಾಸ್ತ್ರಗಳನ್ನು ಬಳಸಿ ದಾಳಿ ನಡೆಸಿದ ಆರೋಪಗಳಿವೆ. ಈ ಹೊಡೆದಾಟದಲ್ಲಿ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಿರುತೆರೆ ನಟ ಸಂಕೇತ್ ಮೇಸ್ತಾ ಅವರ ಜೊತೆ ನಾಗರಾಜ ಮೇಸ್ತಾ, ಜನ್ನು ಮೇಸ್ತಾ, ಪೃಥ್ವಿ ಶಿವರಾಜ್, ಶಿವರಾಜ್, ಗಗನ್ ಮೇಸ್ತಾ, ಶರತ್ ಮೇಸ್ತಾ, ರಫಿಕ್ ಇತರರು ದಾಳಿ ನಡೆಸಿದ ಬಗ್ಗೆ ದೂರಲಾಗಿದೆ. ಹಲ್ಲೆಗೊಳಗಾದ ತುಕಾರಾಮ ನಾಯ್ಕ ಹಾಗೂ ಸಂಕೇತ್ ಮೇಸ್ತಾ ಸಂಬoಧಿ ನಾಗರಾಜ್ ಮೇಸ್ತಾ ನಡುವೆ ಹಣಕಾಸಿನ ವಿಚಾರವಾಗಿ ಕೆಲ ದಿನಗಳಿಂದ ಜಗಳ ನಡೆಯುತ್ತಿದ್ದು, ಇದೇ ಈ ಹೊಡೆದಾಟಕ್ಕೆ ಕಾರಣ ಎಂಬ ಮಾಹಿತಿಯಿದೆ.