ಕಳೆದ ಮೂರು ದಿನಗಳಿಂದ ಉತ್ತರ ಕನ್ನಡದಲ್ಲಿ ಮಳೆಯಾಗುತ್ತಿದ್ದು, ಶುಕ್ರವಾರ ನಸುಕಿನಲ್ಲಿ ಅಂಕೋಲಾ ಮೊರಬಾದ ಯಾದವ ಹಳ್ಳೇರ್ ಅವರ ಮನೆ ಬಳಿ ಸಿಡಿಲು ಬಡಿದಿದೆ. ಮನೆ ಪಕ್ಕದ ವಿದ್ಯುತ್ ಕಂಬಕ್ಕೆ ಸಿಡಿಲು ಬಡಿದಿದ್ದು, ಆ ಕಂಬ ಮನೆ ಮೇಲೆ ಮುರಿದು ಬಿದ್ದಿದೆ.
ಗುರುವಾರ ಮಧ್ಯರಾತ್ರಿಯಿಂದ ಮಳೆ ಶುರುವಾಗಿದ್ದು, ಸುರಿದ ಮಳೆಯಿಂದಾಗಿ ಮೊರಬಾದ ಯಾದವ ದಾನು ಹಳ್ಳೇರ ಅವರ ಕುಟುಂಬ ನಲುಗಿದೆ. ವಿದ್ಯುತ್ ಕಂಬ ಮುರಿದ ಪರಿಣಾಮ ಅವರ ಮನೆಗೂ ಹಾನಿಯಾಗಿದೆ. ಜೋರಾಗಿ ಬೀಸಿದ ಗಾಳಿಯ ರಭಸಕ್ಕೆ ಗೋಕರ್ಣ ಬಳಿಯ ಚಿನ್ನದಕೇರಿಯ ಲಂಬೋಧರ ಆಚಾರಿ ಅವರ ಸ್ನಾನದ ಗೃಹದ ಮೇಲೆ ಮರ ಮುರಿದು ಬಿದ್ದಿದೆ. ಇನ್ನೂ ಅನೇಕ ಕಡೆ ಮನೆಯ ಮೇಲ್ಚಾವಣಿಗಳು ಹಾರಿ ಹೋಗಿದೆ.
ಗೋಕರ್ಣ ಹಾಗೂ ಸುತ್ತಲಿನ ಪ್ರದೇಶದ ರಸ್ತೆಗಳಲ್ಲಿ ಭಾರೀ ಪ್ರಮಾಣದಲ್ಲಿ ಕಸದ ರಾಶಿ ಕಾಣುತ್ತಿದೆ. ಮುಖ್ಯ ಕಡಲತೀರಕ್ಕೆ ಸಾಗುವ ಸಂಗಮ ನಾಲಾದ ಹತ್ತಿರ ರಸ್ತೆಯ ಚರಂಡಿ ಮುಚ್ಚಿದ್ದು, ಕೊಳಚೆ ನೀರು ದೇವಾಲಯದ ಅನ್ನ ಪ್ರಸಾದ ಭೋಜನ ಶಾಲೆಯ ಕಡೆ ಸಂಚರಿಸುತ್ತಿದೆ. ಈ ಬಗ್ಗೆ ದೂರು ಬಂದರೂ ಸ್ಥಳೀಯ ಆಡಳಿತ ಗಮನಹರಿಸಿಲ್ಲ.