ಉತ್ತರ ಕನ್ನಡ ಜಿಲ್ಲೆಯಲ್ಲಿ ಸತ್ತವರ ಖಾತೆಗೂ ಗೃಹಲಕ್ಷ್ಮೀ ದುಡ್ಡು ಸಂದಾಯವಾಗುತ್ತಿದೆ. 12.37 ಲಕ್ಷ ರೂ ಹಣ ಸಾವನಪ್ಪಿದವರ ಬ್ಯಾಂಕ್ ಖಾತೆಗೆ ಜಮಾ ಆಗಿರುವುದು ಗಮನಕ್ಕೆ ಬಂದಿದೆ. ಇನ್ನೂ ಅಧಿಕ ಮೊತ್ತ ಜಮಾ ಆಗಿರುವ ಸಾಧ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಗೃಹಲಕ್ಷ್ಮೀ ಯೋಜನೆಯಡಿ ರೂ.1828.28 ಕೋಟಿ ರೂ ಫಲಾನುಭವಿಗಳ ಖಾತೆಗೆ ಜಮಾ ಆಗಿದೆ. ಅದರಲ್ಲಿ 12.37 ಲಕ್ಷ ರೂ ಹಣ ಸಾವನಪ್ಪಿದವರ ಬ್ಯಾಂಕ್ ಖಾತೆಗೆ ಜಮಾ ಆಗಿರುವುದನ್ನು ಗ್ಯಾರಂಟಿ ಸಮಿತಿಯವರು ಪತ್ತೆ ಮಾಡಿದ್ದಾರೆ. ಸದ್ಯ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಸಾವಿನಪ್ಪಿದರೆ ಆ ಬಗ್ಗೆ ಅಂಗನವಾಡಿ ಕಾರ್ಯಕರ್ತರು ಸರ್ಕಾರಕ್ಕೆ ತಿಳಿಸಬೇಕು ಎಂದು ಸೂಚಿಸಲಾಗಿದೆ. ಫಲಾನುಭವಿ ಸಾವನಪ್ಪಿದ ನಂತರ ಆ ಕುಟುಂಬದ ಮತ್ತೊಬ್ಬರು ಫಲಾನುಭವಿ ಆಗಲು ಸರ್ಕಾರ ಅವಕಾಶ ನೀಡಿದ್ದು, ಹೊಸದಾಗಿ ಅರ್ಜಿ ಸಲ್ಲಿಸುವ ವೇಳೆ ಸಾವನಪ್ಪಿದವರ ಬ್ಯಾಂಕ್ ಖಾತೆಗೆ ಜಮಾ ಆದ ಮೊತ್ತ ಮರಳಿಸಬೇಕು ಎಂಬ ನಿರ್ದೇಶವನ್ನು ಸರ್ಕಾರ ನೀಡಿದೆ.
ಶುಕ್ರವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. `ತಾಂತ್ರಿಕ ಕಾರಣಗಳಿಂದ ಯೋಜನೆಯ ಹಣ ಸಂದಾಯವಾಗದಿರುವ ಪ್ರಕರಣಗಳಲ್ಲಿರುವ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಬೇಕು’ ಎಂದು ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. `ಗೃಹಲಕ್ಷ್ಮೀ ಯೋಜನೆಯ ಮೃತ ಫಲಾನುಭವಿಗಳಿಗೆ ಜಮೆ ಆಗಿರುವ ಮೊತ್ತವನ್ನು ಈಗಾಗಲೇ ಸರ್ಕಾರಕೆ ಜಮೆ ಮಾಡಲಾಗಿದ್ದು, ಈ ಮೊತ್ತವು ಇನ್ನೂ ಹೆಚ್ಚಿರುವ ಸಾಧ್ಯತೆಗಳಿದೆ. ಆದ್ದರಿಂದ ಮೃತ ಫಲಾನುಭವಿಗಳ ಕುರಿತು ಮಾಹಿತಿ ದೊರೆತಲ್ಲಿ ಗ್ಯಾರಂಟಿ ಸಮಿತಿಯ ಸದಸ್ಯರುಗಳು ತಮ್ಮ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು ಅಥವಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಒದಗಿಸುವ ಮೂಲಕ ಮೃತರ ಖಾತೆಗಳಿಗೆ ಯೋಜನೆಯ ಹಣ ಜಮೆಯಾಗುವುದನ್ನು ತಡೆಯಬೇಕು’ ಎಂದು ಅವರು ಹೇಳಿದ್ದಾರೆ.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ನಾಗರಾಜ ಮುರ್ಡೆಶ್ವರ, ಜನಾರ್ಧನ ಕುಪ್ಪ ದೇವಾಡಿಗ, ಪುರುಷೋತ್ತಮ ದೇವಪ್ಪ ನಾಯ್ಕ, ಕಾರವಾರ ತಾಲೂಕು ಅಧ್ಯಕ್ಷ ರಾಜೇಂದ್ರ ರಾಣೆ, ಜಿ.ಪಂ. ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮ ನವರ್, ಪ್ರಾಧಿಕಾರದ ಸದಸ್ಯರಾದ ಪಾಂಡುರoಗ ಕೆ ಗೌಡ, ರಿಯಾಜ್ ಅಹಮದ್ ಬಾಬುಸಾಬ್, ಸುಮಾ ರಾಜು ಉಗ್ರಾಣಕರ್, ರಾಜಶೇಖರ್ ರುದ್ರಗೌಡ ಹಿರೇಮಠ, ದೇವಿದಾಸ ನಾಗೇಶ ಶಾನುಭಾಗ, ಅಣ್ಣಪ್ಪ ಮಹಾಬಲೇಶ್ವರ ನಾಯ್ಕ, ರಾಜು ಮಂಜಪ್ಪ ನಾಯ್ಕ, ಅಶೋಕ ಕೃಷ್ಣಗೌಡ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.