ಗುಡ್ಡಗಾಡಿನ ಮಕ್ಕಳ ಶೈಕ್ಷಣಿಕ ಬದುಕಿಗೆ ಕಾರವಾರದ ಮಾತೋಶ್ರೀ ಸರೋಜಾ ಬಾಳಾ ದೇಸಾಯಿ ಚ್ಯಾರಿಟಬಲ್ ಟ್ರಸ್ಟ್ ಆಸರೆಯಾಗಿದೆ. ಕಳೆದ ನಾಲ್ಕು ವರ್ಷದಿಂದ ಈ ಟ್ರಸ್ಟ್ ಅನೇಕ ವಿದ್ಯಾರ್ಥಿಗಳ ಓದಿಗೆ ನೆರವು ನೀಡುತ್ತಿದ್ದು, ಈ ಕಾರ್ಯ ಈ ವರ್ಷವೂ ಮುಂದುವರೆದಿದೆ.
ಆರ್ಥಿಕವಾಗಿ ಹಿಂದುಳಿದ ಹಾಗೂ ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿರುವ ಅಸ್ನೋಟಿ ಶಿವಾಜಿ ವಿದ್ಯಾ ಮಂದಿರದಲ್ಲಿ ವಸತಿ ಜೊತೆ ಶಿಕ್ಷಣ ನೀಡಲಾಗುತ್ತಿದೆ. ಅಂಥ ವಿದ್ಯಾರ್ಥಿಗಳಿಗೆ ಮಾತೋಶ್ರೀ ಸರೋಜಾ ಬಾಳಾ ದೇಸಾಯಿ ಟ್ರಸ್ಟ್ ನೆರವು ನೀಡುತ್ತಿದೆ. ನರೇಂದ್ರ ದೇಸಾಯಿ ಮತ್ತು ಅವರ ಪತ್ನಿ ನೇಹಾ ದೇಸಾಯಿ ಅವರು ಬಡತನದಲ್ಲಿರುವ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ವಸತಿ ಸೌಲಭ್ಯ ನೀಡುತ್ತಿದ್ದಾರೆ. ಜೊತೆಗೆ ಕೌಶಲ್ಯ ತರಬೇತಿಯನ್ನು ಒದಗಿಸುತ್ತಿದ್ದಾರೆ. ಗ್ರಾಮಿಣ ಭಾಗದ ಹಲವು ವಿಶೇಷ ಶಾಲೆಗಳನ್ನು ಗುರುತಿಸಿ ಟ್ರಸ್ಟ್ ಮುಖೇನ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ವಿನೂತನ ಯೋಜನೆಗಳನ್ನು ಹಾಕಿಕೊಳ್ಳುವದರ ಜೊತೆಗೆ ದುರ್ಬಲ ಸಮುದಾಯದ ಮಕ್ಕಳಿಗೆ ಮೂಲಭೂತ ಕೌಶಲ್ಯಗಳಾದ ಓದು ಮತ್ತು ಬರೆಯುವುದನ್ನು ಕಲಿಯುವಂತೆ ಉತ್ತೇಜಿಸುವುದು ಟ್ರಸ್ಟಿನ ಮುಖ್ಯ ಉದ್ದೇಶ. ಪರಿಶಿಷ್ಟ ಜಾತಿ, ಪಂಗಡ ಮತ್ತು ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಟ್ರಸ್ಟ್ ನೀಡುತ್ತಿದೆ.
ಈ ಟ್ರಸ್ಟ್ ನೆರವಿನಲ್ಲಿ ಓದಿದ ಅಸ್ನೋಟಿ ಬಾಲಕರ ವಸತಿ ನಿಲಯದಲ್ಲಿದ್ದ 17 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಹಾಸ್ಟೆಲ್ ವಿದ್ಯಾರ್ಥಿಗಳಾದ ಭೂಮೇಶ ಮಿರಾಶಿ, ಧಿರಜ್ ನಾಯ್ಕ, ಸುದರ್ಶನ ದೇಸಾಯಿ, ಸುನೀಲ ಮಿರಾಶಿ, ಪ್ರವಿಣ ವೇಳಿಪ, ನಿವೇಶ ವೇಳಿಪ, ಪ್ರಜ್ವಲ ವೇಳಿಪ, ಅಥರ್ವ ಸಾವಂತ, ದಿಲಶನ್ ಮಿರಾಶಿ, ಕೇಶವ ಗಾವಡಾ, ಅಕುಲ ನಾಯ್ಕ, ಅಭಿಷೇಕ ಮುದ್ಲಾಪುರ, ತನುಜ ಪೂಜಾರಿ, ತನ್ಮಯ ಪೂಜಾರಿ, ರತಿಕ ಲಾಂಡೇಕರ, ಗಜಾನನ ವೇಳಿಪ ಸಾಧನೆ ಮಾಡಿದ್ದಾರೆ.