ಮುರುಡೇಶ್ವರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಪದೇ ಪದೇ ಹೊಡೆದಾಟದಲ್ಲಿ ಭಾಗಿಯಾಗುತ್ತಿದ್ದ ಶೇಖರ ನಾಯ್ಕ ಹಾಗೂ ಮಿಥುನ್ ನಾಯ್ಕ ಅವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಹೊರಗೆ ದಬ್ಬಲಾಗಿದೆ. ಮುಂದಿನ ಆರು ತಿಂಗಳ ಕಾಲ ಅವರಿಬ್ಬರು ಜಿಲ್ಲೆಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
ಶೇಖರ ಮಂಜುನಾಥ ನಾಯ್ಕ ಅವರು ಮುರುಡೇಶ್ವರದ ಮಾವಳ್ಳಿ ಬಳಿ ವಾಸವಾಗಿದ್ದರು. ಶಿಲ್ಪಿ ಕೆಲಸ ಮಾಡಿಕೊಂಡಿದ್ದ ಅವರು ವಿವಿಧ ಹೊಡೆದಾಟದಲ್ಲಿ ಭಾಗಿಯಾಗಿದ್ದರು. ಮುರುಡೇಶ್ವರ ಹಾಗೂ ಸುತ್ತಲಿನ ಪ್ರದೇಶದಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಶೇಖರ ಮಂಜುನಾಥ ನಾಯ್ಕ ಅವರ ಹೆಸರು ದಾಖಲಾಗಿತ್ತು. ಭಟ್ಕಳ ತೆರ್ನಮಕ್ಕಿಯ ರಾಜೇಶ ನಾಯ್ಕ ಅವರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿಯೂ ಶೇಖರ ಮಂಜುನಾಥ ನಾಯ್ಕ ಅವರು ಆರೋಪಿಯಾಗಿದ್ದರು. ರೂಮು ಕೊಡಿಸುವ ವಿಷಯದಲ್ಲಿ ನಡೆದ ಹೊಡೆದಾಟದಲ್ಲಿ ಶೇಖರ ನಾಯ್ಕ ಅವರು ಭಾಗಿಯಾಗಿದ್ದು, ಅದನ್ನು ಸೇರಿ ಇನ್ನೆರಡು ಪ್ರಕರಣದಲ್ಲಿ ಪೊಲೀಸರು ಅವರ ವಿರುದ್ಧ ಕೇಸು ದಾಖಲಿಸಿದ್ದರು.
ಕೋಣಾರ ಕೆರೆಹಿತ್ತಲ ಬಳಿಯ ಮಿಥುನ್ ಕುಪ್ಪಯ್ಯ ನಾಯ್ಕ ಅವರು ಸಹ ವಿವಿಧ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದರು. ಮುಖ್ಯವಾಗಿ ಅವರು ಹೊಡೆದಾಟ ಪ್ರಕರಣದಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಮಾವಳ್ಳಿ-2ರ ಶಾಲೆ ಬಳಿ ಗೌರೀಶ ಜಯಂತ ನಾಯ್ಕ ಅವರ ಮೇಲೆ ನಡೆದ ದಾಳಿ ಸೇರಿ ವಿವಿಧ ಕೇಸುಗಳನ್ನು ಮಿಥುನ್ ನಾಯ್ಕ ಅವರು ಎದುರಿಸುತ್ತಿದ್ದರು. ಈ ಇಬ್ಬರ ವಿರುದ್ಧವೂ ಪೊಲೀಸರು ಹದ್ದಿನ ಕಣ್ಣಿರಿಸಿದ್ದು, ಗಲಾಟೆ ಮಾಡದಂತೆ ಸಾಕಷ್ಟು ಬಾರಿ ಎಚ್ಚರಿಕೆಯನ್ನು ನೀಡಿದ್ದರು. ಅದಾಗಿಯೂ, ಅವರಿಬ್ಬರು ತಮ್ಮ ಜೀವನ ಪದ್ಧತಿ ಸುಧಾರಿಸಿಕೊಂಡಿರಲಿಲ್ಲ.
ಈ ಎಲ್ಲಾ ಹಿನ್ನಲೆ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಶೇಖರ ಮಂಜುನಾಥ ನಾಯ್ಕ ಹಾಗೂ ಮಿಥುನ್ ಕುಪ್ಪಯ್ಯ ನಾಯ್ಕ ಅವರನ್ನು ಗಡಿಪಾರು ಮಾಡಿದ್ದಾರೆ. ಶೇಖರ ನಾಯ್ಕ ಅವರನ್ನು ತುಮಕೂರು ಜಿಲ್ಲೆಗೆ ಹಾಗೂ ಮಿಥುನ್ ನಾಯ್ಕ ಅವರನ್ನು ವಿಜಯಪುರ ಜಿಲ್ಲೆಗೆ ಪೊಲೀಸರೇ ಬಿಟ್ಟು ಬಂದಿದ್ದಾರೆ.