ಬೈಕಿಗೆ ಬೈಕು ತಾಗಿದ ವಿಷಯವಾಗಿ ಶಿರಸಿಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಹಿಂದೂ-ಮುಸ್ಲಿo ಯುವಕರು ಬೀದಿಯಲ್ಲಿ ಹೊಡೆದಾಡಿಕೊಂಡ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೇ 21ರ ರಾತ್ರಿ ಶಿರಸಿಯ ಸಿಂಪಿಗಲ್ಲಿಯಲ್ಲಿ ಹಿಂದು ಹುಡುಗನ ಬೈಕಿಗೆ ಮುಸ್ಲಿಂ ಯುವಕನ ಬೈಕ್ ತಾಗಿದೆ. ಈ ವೇಳೆ ಅವರಿಬ್ಬರ ನಡುವೆ ಜಗಳ ಶುರುವಾಗಿದೆ. ಇದರಿಂದ ರೊಚ್ಚಿಗೆದ್ದ ಹಿಂದು ಹುಡುಗ ತನ್ನ ಸ್ನೇಹಿತರನ್ನು ಕರೆಯಿಸಿ ಮುಸ್ಲಿಂ ಯುವಕನ ಮೇಲೆ ಕೈ ಮಾಡಿದ್ದು, ಅದಾದ ನಂತರ ಮುಸ್ಲಿಂ ಯುವಕ ತನ್ನ ಇನ್ನಿತರ ಸ್ನೇಹಿತರನ್ನು ಕರೆದುಕೊಂಡು ಬಂದು ಗಲಾಟೆ ಮಾಡಿದ ಮಾಹಿತಿಯಿದೆ. ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆ ದೃಶ್ಯಾವಳಿಗಳು ಸದ್ಯ ಎಲ್ಲಡೆ ಹರಿದಾಡುತ್ತಿದೆ.
ದೇವಿಕೇರೆ ಬಳಿ ನಡೆದ ಈ ಪ್ರಕರಣ ಎರಡು ಗುಂಪುಗಳ ನಡುವಿನ ವೈಷಮ್ಯಕ್ಕೆ ಕಾರಣವಾಗಿದೆ. ಸಣ್ಣ ಅಪಘಾತವನ್ನು ಅಲ್ಲಿಯೇ ಮಾತುಕಥೆ ಮೂಲಕ ಬಗೆಹರಿಸಿಕೊಳ್ಳುವ ಬದಲು ದೊಡ್ಡ ಹೊಡೆದಾಟ ಮಾಡಿದಕ್ಕಾಗಿ ಅನೇಕರು ಬೇಸರವ್ಯಕ್ತಪಡಿಸಿದ್ದಾರೆ. ಶಿರಸಿಯ ಅಯಾನ್ ಟಿನಮೇಕರ್, ಸರ್ಪರಾಜ ಟಿನಮೇಕರ್, ಆಧೀಲ್ ಸಕ್ಕರಖಾನ್ ಜೊತೆ ಅಭಯ್ ಹುದಾರ್, ಸರ್ವೇಶ ಹಿರೇಮಠ, ಆಕಾಶ ಕುಂದನಗಾರ ಎಂಬಾತರು ಹೊಡೆದಾಟದಲ್ಲಿ ಭಾಗಿಯಾದ ಬಗ್ಗೆ ಪ್ರಾಥಮಿಕ ಮಾಹಿತಿ ಸಿಕ್ಕಿದೆ.