ಕಪ್ಪೆ ಚಿಪ್ಪು ಆರಿಸಲು ನದಿ ನೀರಿಗೆ ಇಳಿದಿದ್ದ ಎಂಟು ಜನ ಭಟ್ಕಳದಲ್ಲಿ ಜಲ ಸಮಾಧಿಯಾಗಿದ್ದಾರೆ. ವೆಂಕಟಾಪುರ ನದಿಯಲ್ಲಿ ಮೂವರು ಕಣ್ಮರೆಯಾಗಿದ್ದು, ಅವರ ಶೋಧ ಶುರುವಾಗಿದೆ.
ಭಟ್ಕಳ ಪಡುಶಿರಾಲಿಯ ಶಾರದಾಹೊಳೆ ಬಳಿಯ ಲಕ್ಷ್ಮಿ ಮಾದೇವ ನಾಯ್ಕ ಅವರು ತಮ್ಮ ಸಹಚರರ ಜೊತೆ ಭಾನುವಾರ ಕಪ್ಪೆ ಚಿಪ್ಪು ಆರಿಸುವ ಕೆಲಸಕ್ಕೆ ಹೋಗಿದ್ದರು. ಅದೇ ಭಾಗದ ಲಕ್ಷ್ಮಿ ಮಹಾದೇವ ನಾಯ್ಕ, ಲಕ್ಷ್ಮಿ ಶಿವರಾಂ ನಾಯ್ಕ, ಉಮೇಶ್ ಮಂಜುನಾಥ್ ನಾಯ್ಕ, ಮಾಸ್ತಿಮ್ಮ ಮಂಜುನಾಥ್ ನಾಯ್ಕ, ಲಕ್ಷ್ಮಿ ಅಣ್ಣಪ್ಪ ನಾಯ್ಕ ಜ್ಯೋತಿ ನಾಗಪ್ಪ ನಾಯ್ಕ, ಮಾಲತಿ ಜಟ್ಟಪ್ಪ ನಾಯ್ಕ, ಮಾದೇವ ಜಟ್ಟಪ್ಪ ನಾಯ್ಕ, ಮಂಜಮ್ಮ ಗೊತ್ತಾ ನಾಯ್ಕ, ನಾಗರತ್ನ ಪರಮೇಶ್ವರ ನಾಯ್ಕ, ನಾಗರತ್ನ ಈಶ್ವರ ನಾಯ್ಕ ಹಾಗೂ ಮಾದೇವಿ ನಾಯ್ಕ ಅವರು ಜೊತೆಗಿದ್ದರು. ಚಿಪ್ಪು ಆರಿಸಲು ನದಿಗೆ ಇಳಿದಾಗ ಅವರೆಲ್ಲರೂ ನೀರಿನಲ್ಲಿ ಮುಳುಗಿದ್ದು, ಈ ಪೈಕಿ ಎಂಟು ಜನ ಸಾವನಪ್ಪಿದರು.
ಲಕ್ಷ್ಮಿ ಮಾದೇವ ನಾಯ್ಕ ಅವರ ಜೊತೆ ಲಕ್ಷ್ಮಿ ಮಹಾದೇವ ನಾಯ್ಕ, ಲಕ್ಷ್ಮಿ ಶಿವರಾಂ ನಾಯ್ಕ, ಉಮೇಶ್ ಮಂಜುನಾಥ್ ನಾಯ್ಕ, ಮಾಸ್ತಿಮ್ಮ ಮಂಜುನಾಥ್ ನಾಯ್ಕ, ಲಕ್ಷ್ಮಿ ಅಣ್ಣಪ್ಪ ನಾಯ್ಕ ಅವರು ಅಲ್ಲಿಯೇ ಸಾವನಪ್ಪಿದರು. ಅಸ್ವಸ್ಥಗೊಂಡ ಜ್ಯೋತಿ ನಾಗಪ್ಪ ನಾಯ್ಕ, ಹಾಗೂ ಮಾಲತಿ ಜಟ್ಟಪ್ಪ ನಾಯ್ಕ ಅವರು ಆಸ್ಪತ್ರೆಗೆ ಬರುವಾಗ ಕೊನೆಯಿಸಿರೆಳೆದರು. ಇದರೊಂದಿಗೆ ಮಾದೇವ ಜಟ್ಟಪ್ಪ ನಾಯ್ಕ, ಮಂಜಮ್ಮ ಗೊತ್ತಾ ನಾಯ್ಕ ಹಾಗೂ ನಾಗರತ್ನ ಪರಮೇಶ್ವರ ನಾಯ್ಕ ಅವರು ಕಣ್ಮರೆಯಾಗಿದ್ದು, ಅವರ ಶೋಧ ನಡೆಯುತ್ತಿದೆ. ಈ ದುರಂತದಲ್ಲಿ ಸಿಲುಕಿದ್ದ ನಾಗರತ್ನ ಈಶ್ವರ ನಾಯ್ಕ ಹಾಗೂ ಮಾದೇವಿ ನಾಯ್ಕ ಅವರು ರಕ್ಷಣೆಗೆ ಒಳಗಾಗಿದ್ದಾರೆ. ಈ ದುರಂತದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಬನಿ ಮಿಡಿದಿದ್ದು, ಸಾವನಪ್ಪಿದವರ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.