ಯಲ್ಲಾಪುರದ ಹೊಸಳ್ಳಿ ಗ್ರಾಮದ ನೀರು ನೊರೆ ನೊರೆಯಾಗಿದೆ. ಈ ಭಾಗದ ಬಾವಿ-ಕೆರೆಯ ಜೊತೆ ಬೋರ್ವೆಲ್ ನೀರು ಸಹ ಕಲುಷಿತಗೊಂಡಿದೆ. ಕಲುಷಿತ ನೀರು ಸೇವನೆಯಿಂದ ಈ ಭಾಗದ ಜನ ವಿವಿಧ ಸಮಸ್ಯೆಗೆ ಒಳಗಾಗಿದ್ದಾರೆ.
ADVERTISEMENT
ಯಲ್ಲಾಪುರದ ಹೊಸಳ್ಳಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮೊದಲಿನಿಂದಲು ಕುಡಿಯುವ ನೀರಿನ ಸಮಸ್ಯೆಯಿದೆ. ಪ್ರತಿ ವರ್ಷವೂ ಇಲ್ಲಿನ ಜನ ಶುದ್ಧ ಕುಡಿಯುವ ನೀರಿಗಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಮಾರ್ಚ-ಏಪ್ರಿಲ್ ಹಾಗೂ ಮೇ ತಿಂಗಳ ಅವಧಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುತ್ತಿದ್ದು, ಈ ಅವಧಿಯಲ್ಲಿ ಕೆರೆ-ಬಾವಿಯ ನೀರು ಇನ್ನಷ್ಟು ಕಲುಷಿತವಾಗುತ್ತಿದೆ. ಇಲ್ಲಿನ ಬಾವಿ-ಕೆರೆಗಳಿಂದ ಸಂಗ್ರಹಿಸಿದ ನೀರು ರಾತ್ರಿ ಕಳೆದು ಬೆಳಗಾಗುವುದರೊಳಗೆ ನೊರೆಗಳಿಂದ ಕೂಡಿರುವುದು ಕಂಡು ಬಂದಿದೆ. ಈ ಭಾಗದ ನೀರಿನ ಸ್ವಾದವೂ ಬದಲಾವಣೆಯಾಗಿದೆ. ಬಣ್ಣವೂ ಬೇರೆಯಾಗಿದೆ.
ADVERTISEMENT
ಹೊಸಳ್ಳಿ ಕೆರೆಯ ನೀರು ಪಶುಗಳ ಸೇವನೆಗೆ ಸಹ ಯೋಗ್ಯವಾಗಿಲ್ಲ ಎಂದು ಸರ್ಕಾರಕ್ಕೆ ವರದಿಯೊಂದು ಸಲ್ಲಿಕೆಯಾಗಿದೆ. ಮೂರು ಕಿಮೀ ದೂರದಿಂದ ಜನ ನೀರು ತರುತ್ತಿದ್ದು, ಆ ನೀರು ಸಹ ಸರಿಯಾಗಿಲ್ಲ. ಅದಾಗಿಯೂ, ಅನಿವಾರ್ಯವಾಗಿ ಇಲ್ಲಿನ ಜನ ಗಡುಸು ನೀರನ್ನು ಕುಡಿಯುತ್ತಿದ್ದಾರೆ. ಶುದ್ಧ ಕುಡಿಯುವ ನೀರು ಸಿಗದ ಕಾರಣ ಈ ಭಾಗದಲ್ಲಿ ಅನೇಕರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಅರಿವಿದ್ದರೂ ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ಆಡಳಿತ ಸೋತಿದೆ.
ADVERTISEMENT
ಜನರಿಗೆ ನೀರು ಕುಡಿಸುವುದಕ್ಕಾಗಿ ಕಿರವತ್ತಿ ಗ್ರಾಮ ಪಂಚಾಯತದಿAದ ಮೂರು ಕಡೆ ಬೋರ್ ವೆಲ್ ತೆಗೆಸಲಾಗಿದೆ. ಆದರೆ, ಇಲ್ಲಿ ನಾಲ್ಕು ದಿನಕ್ಕೆ ಒಮ್ಮೆ ಜನರಿಗೆ ನೀರು ಪೂರೈಸಲಾಗುತ್ತದೆ. ಆ ನೀರು ಸಹ ಕುಡಿಯುವ ಹಾಗಿರುವುದಿಲ್ಲ ಎಂಬುದು ಜನರ ದೂರು. `ಮೂರು ಕಿಮೀ ದೂರದಿಂದ ಪೈಪ್ಲೈನ್ ಹಾಕಿಸಿಕೊಂಡು ಬಂದರೂ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ನೀರಿನ ಬಣ್ಣ ಹಾಗೂ ವಾಸನೆ ಬದಲಾಗಿದ್ದು, ಕೆಮಿಕಲ್ ಮಿಶ್ರಣದ ಹಾಗೇ ಭಾಸವಾಗುತ್ತದೆ’ ಎಂಬುದು ಜನರ ಅಳಲು.
ಕುಡಿಯಲು ಸಂಗ್ರಹಿಸಿದ ಬಾವಿ ನೀರಿನಲ್ಲಿ ನೊರೆ ಕಾಣಿಸಿಕೊಂಡಿರುವುದು
ಸಾರ್ವಜನಿಕ ದೂರಿನ ಹಿನ್ನಲೆ ಅಧಿಕಾರಿಗಳ ತಂಡದವರು ಒಂದೆರಡು ಬಾರಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಈ ವೇಳೆಯಲ್ಲಿಯೂ ಶುದ್ಧ ನೀರಿಗೆ ರಾಸಾಯನಿಕ ಸೇರಿರುವುದು ದೃಢವಾಗಿದೆ. ಈ ಕುರಿತಾದ ವರದಿ ಸರ್ಕಾರಿ ಕಡತ ಸೇರಿದ್ದರೂ ನಂತರ ಯಾವುದೇ ರೀತಿಯಲ್ಲಿಯೂ ದೊಡ್ಡ ಕ್ರಮವಾಗಿಲ್ಲ. ಪ್ರತಿ ವರ್ಷ ಇಲ್ಲಿನ ಜನ ಅನುಭವಿಸುವ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. `ಮೊದಲು ಒಂದು ದಿನ ಬಿಟ್ಟು ಒಂದು ದಿನ ನೀರು ಪೂರೈಕೆ ಮಾಡಲಾಗುತ್ತಿತ್ತು. ಬೇಸಿಗೆಯಲ್ಲಿ ನೀರಿನ ಅಭಾವದ ಹಿನ್ನಲೆ 3-4 ದಿನಗಳಿಗೆ ಒಮ್ಮೆ ನೀರು ಕೊಡುತ್ತಿದ್ದೇವೆ. ನೀರಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬರಬೇಕಿದೆ’ ಎಂದು ಕಿರವತ್ತಿ ಪಿಡಿಓ ಶಿವಕುಮಾರ ಅವರು ಪ್ರತಿಕ್ರಿಯಿಸಿದ್ದಾರೆ.