ಅಂಕೋಲಾದ ವೀರವಿಠ್ಠಲ ಮಠದ ಬಳಿ ಮನೆ ಮಾಡಿಕೊಂಡಿರುವ ರಾಮನಾಥ ಭಟ್ಟ ಅವರು ಅಪರಿಚಿತರ ಖಾತೆಗೆ 16.28 ಲಕ್ಷ ರೂ ವರ್ಗಾಯಿಸಿ ಮೋಸ ಹೋಗಿದ್ದಾರೆ. ದುಡ್ಡು ಡಬಲ್ ಮಾಡಿಕೊಡುವ ಆಮೀಷಕ್ಕೆ ಒಳಗಾಗಿ ಅವರು ಇದ್ದ ಹಣವನ್ನು ಕಳೆದುಕೊಂಡಿದ್ದಾರೆ.
ಅoಕೋಲಾದ ಮಠಾಕೇರಿಯ ವೀರವಿಠ್ಠಲ ಮಠದ ಬಳಿ ರಾಮನಾಥ ಪೂರ್ಣಾನಂದ ಭಟ್ (44) ಅವರು ವಾಸವಾಗಿದ್ದಾರೆ. ವಿವಿಧ ವ್ಯವಹಾರ ಮಾಡಿಕೊಂಡು ಅವರು ಬದುಕು ಕಟ್ಟಿಕೊಂಡಿದ್ದು, ಮಾರ್ಚ್ 28ರಂದು ಇನಸ್ಟಾಗ್ರಾಂ ಬಳಸುವಾಗ ಅವರಿಗೆ ದುಡ್ಡು ಡಬಲ್ ಮಾಡಿಕೊಡುವ ಜಾಹೀರಾತು ಕಾಣಿಸಿದೆ. `ತಾವು ಸೂಚಿಸಿದ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ’ ಎಂದವರಿಗೆ ಸೂಚನೆ ಬಂದಿದೆ. ಅವರನ್ನು ವಾಟ್ಸಪ್ ಗ್ರೂಪಿಗೆ ಸೇರಿಸಿಕೊಂಡ ವಂಚಕರು ನಯವಾಗಿ ನಂಬಿಸಿ ಹಣ ಕಿತ್ತುಕೊಂಡಿದ್ದಾರೆ.
ವoಚಕರು ಮೊದಲು ವಿವಿಧ ರೀತಿಯಲ್ಲಿ ತರಬೇತಿ ನೀಡಿದ ಹಾಗೇ ನಟಿಸಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಲು ಸೂಚಿಸಿದ್ದಾರೆ. ಅದರಂತೆ, ಮಾರ್ಚ್ 28ರಿಂದ ಮೇ 14ರವರೆಗೆ ಒಟ್ಟು 16,78,052 ರೂಪಾಯಿಯನ್ನು ರಾಮನಾಥ ಭಟ್ಟ ಅವರು ಜಮಾ ಮಾಡಿದ್ದಾರೆ. ಅದಾದ ನಂತರ ಲಾಭ ಸಿಗದೇ ಇದ್ದಾಗ ಮೋಸ ಹೋಗಿರುವುದು ಅವರಿಗೆ ಗೊತ್ತಾಗಿದೆ. `ನನ್ನ ಹಣ ನನಗೆ ಮರಳಿಸಿ’ ಎಂದವರು ಸದ್ಯ ಪೊಲೀಸರ ಮೊರೆ ಹೋಗಿದ್ದಾರೆ.