ಶೆಡ್ಡಿನೊಳಗೆ ನಾಯಿ ಕರೆತಂದ ವಿಚಾರವಾಗಿ ಭಟ್ಕಳದಲ್ಲಿ ಮಾರಾಮಾರಿ ನಡೆದಿದೆ. ಮೊದಲು ಮಾತಿನ ಚಕಮಕಿಯಲ್ಲಿ ಜಗಳ ಶುರುವಾಗಿದ್ದು, ಅದು ವಿಕೋಪಕ್ಕೆ ತೆರಳಿದೆ. ಪರಿಣಾಮ ಬಿಯರ್ ಬಾಟಲಿಯಿಂದ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆದಿದ್ದು, ಅವರು ಆಸ್ಪತ್ರೆ ಸೇರಿದ್ದಾರೆ.
ಬುಧವಾರ ಮಧ್ಯಾಹ್ನ 1ಗಂಟೆ ವೇಳೆಗೆ ಭಟ್ಕಳದ ಮೈನುದ್ದಿನ್ ಗೌಸ್ ಮೋಹಿದ್ದಿನ್ ಯಾದವಾಡ (44) ಅವರು 4 ಸೀಸನ್ ಬಾರ್ & ರೆಸ್ಟೋರೆಂಟ್ ಪಕ್ಕದ ಶೆಡ್ನಲ್ಲಿ ಮದ್ಯಪಾನ ಮಾಡುತ್ತಿದ್ದರು. ಇದೇ ವೇಳೆ ಸಾಗರ ತಾಲೂಕಿನ ನಾಗುವಳ್ಳಿ-ಕೋಗಾರ ನಿವಾಸಿ ದಿನೇಶ ಪರಶು ಮರಾಠ (28) ಅವರು ಅಲ್ಲಿಗೆ ನಾಯಿಯೊಂದನ್ನು ಕರೆತಂದರು. ಈ ವೇಳೆ ಆ ನಾಯಿಯನ್ನು ಹೊರಗೆ ಕರೆದೊಯ್ಯುವಂತೆ ಮೈನುದ್ದಿನ್ ಹೇಳಿದ್ದರಿಂದ ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ.
ಈ ವೇಳೆ ಆಕ್ರೋಶಗೊಂಡ ದಿನೇಶ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ತಮ್ಮ ಕೈಯಲ್ಲಿದ್ದ ಖಾಲಿ ಬಿಯರ್ ಬಾಟಲಿಯಿಂದ ಮೈನುದ್ದಿನ್ ಅವರ ತಲೆಗೆ ಹೊಡೆದಿದ್ದಾರೆ. ಬಳಿಕ ಒಡೆದ ಬಾಟಲಿಯಿಂದ ಎದೆ ಭಾಗಕ್ಕೆ ಚುಚ್ಚಲು ಯತ್ನಿಸಿದ್ದು, ಆತ್ಮರಕ್ಷಣೆಗಾಗಿ ಕೈ ಮುಂದಿಟ್ಟ ಮೈನುದ್ದಿನ್ ಅವರ ಎಡ ಮೊಣಕೈ ಸಮೀಪ ಗಂಭೀರ ಗಾಯವಾಗಿದೆ. ಅದಾದ ಮೇಲೆ ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಹಿತಿ ಪಡೆದ ಭಟ್ಕಳ ನಗರ ಠಾಣೆಯ ಪಿಎಸೈ ನವೀನ ನಾಯ್ಕ ಹಾಗೂ ಸಿಬ್ಬಂದಿ ಗಾಯಾಳುವನ್ನು ಹೆದ್ದಾರಿ ಗಸ್ತು ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳು ಮೈನುದ್ದಿನ್ ಗೌಸ್ ಮೋಹಿದ್ದಿನ್ ಯಾದವಾಡ ಅವರ ಪತ್ನಿ ಮುಬೀನಾ ಬಾನು ಮೈನುದ್ದಿನ್ ಯಾದವಾಡ ಅವರು ಈ ಘಟನಾವಳಿಗಳ ಬಗ್ಗೆ ದೂರಿದ್ದಾರೆ.