ಒಂದುವರೆ ವರ್ಷದ ಹಿಂದೆ ಕರಡಿ ದಾಳಿಗೆ ಒಳಗಾಗಿ ಅಂಗವಿಕಲರಾಗಿದ್ದ ಯಲ್ಲಾಪುರದ ಕಾಂಗ್ರೆಸ್ ಮುಖಂಡ ಆರ್ ಎಸ್ ಭಟ್ಟ ಅವರಿಗೆ ಸರ್ಕಾರದಿಂದ 10 ಲಕ್ಷ ರೂ ನೆರವು ಸಿಕ್ಕಿದೆ. ಇದರೊಂದಿಗೆ ಅವರಿಗೆ ಪ್ರತಿ ತಿಂಗಳು 4 ಸಾವಿರ ರೂ ಮಾಸಾಶನವೂ ದೊರೆಯಲಿದೆ.
ಯಲ್ಲಾಪುರದ ಚಂದ್ಗುಳಿ ಉಪಳೇಶ್ವರ ಹುತ್ಕಂಡ ಭಾಗದಲ್ಲಿ ಮೂರು ಕರಡಿಗಳು ಸಂಚರಿಸುತ್ತಿದ್ದು, ಆ ಕರಡಿಗಳು 2024ರ ಡಿಸೆಂಬರ್ 21ರಂದು ಆರ್ ಎಸ್ ಭಟ್ಟ ಅವರ ಮೇಲೆ ದಾಳಿ ನಡೆಸಿದ್ದವು. ದೇಸಾಯಿಮನೆಯ ರಾಮಕೃಷ್ಣ ಸುಬ್ರಾಯ ಭಟ್ ಅವರು ಆ ಅವಧಿಯಲ್ಲಿ ಚಂದಗುಳಿ ಗ್ರಾಮ ಪಂಚಾಯತ ಸದಸ್ಯರಾಗಿದ್ದು, ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷ ಹುದ್ದೆಯ ಸ್ಪರ್ಧೆಯಲ್ಲಿದ್ದರು. ಪಿಎಲ್ಡಿ ಬ್ಯಾಂಕಿನ ಚುನಾವಣಾ ಕೆಲಸಕ್ಕಾಗಿ ಓಡಾಡುತ್ತಿದ್ದರು. ನಸುಕಿನ ಅವಧಿಯಲ್ಲಿ ಅವರ ಮೇಲೆ ಮೂರು ಕರಡಿ ದಾಳಿ ನಡೆಸಿದ್ದರಿಂದ ಕೈ-ಕಾಲು, ಮೈ-ಮುಖಗಳಿಗೆ ಭಾರೀ ಪ್ರಮಾಣದಲ್ಲಿ ಗಾಯವಾಗಿತ್ತು. ನೆಲಕ್ಕೆ ಬಿದ್ದ ಅವರು ಸಾವರಿಸಿಕೊಂಡು ಮನೆ ಸೇರಿದ್ದು, ಕುಟುಂಬದವರು ಭಟ್ಟರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಹುಬ್ಬಳ್ಳಿಯಲ್ಲಿ ಚಿಕಿತ್ಸೆಪಡೆದ ನಂತರ ಅವರು ಗುಣಮುಖರಾಗಿದ್ದರು. ಆದರೆ, ಕರಡಿ ದಾಳಿಯ ಕುರುಹುಗಳು ಅವರಿಂದ ದೂರವಾಗಿರಲಿಲ್ಲ.
ಆರ್ ಎಸ್ ಭಟ್ಟ ಅವರ ಮೇಲೆ ಕರಡಿ ದಾಳಿ ನಡೆದ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿತು. ಅರಣ್ಯ ಅಧಿಕಾರಿಗಳು ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ, ಸೂಕ್ತ ಪರಿಹಾರಕ್ಕಾಗಿ ಮನವಿ ಮಾಡಿದ್ದರು. ಆ ದಿನ ಆರ್ ಎಸ್ ಭಟ್ಟ ಅವರು ಅನುಭವಿಸಿದ ನೋವಿಗಾಗಿ ಈ ದಿನ ಅವರಿಗೆ 10 ಲಕ್ಷ ರೂ ಪರಿಹಾರ ಸಿಕ್ಕಿದೆ. ಅದರೊಂದಿಗೆ ಪ್ರತಿ ತಿಂಗಳು ಅವರಿಗೆ 4 ಸಾವಿರ ರೂ ಮಾಸಾಶನ ದೊರೆಯಲಿದೆ. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರು ಶನಿವಾರ ಪರಿಹಾರ ಮೊತ್ತ ಹಾಗೂ ಮಾಸಾಶನದ ಆದೇಶ ಪ್ರತಿಯನ್ನು ಆರ್ ಎಸ್ ಭಟ್ಟ ಅವರಿಗೆ ನೀಡಿದ್ದಾರೆ.
ಇದರೊಂದಿಗೆ ಕಾಡು ಹಂದಿ ದಾಳಿಗೆ ಒಳಗಾಗಿದ್ದ ಕಿರವತ್ತಿಯ ಮಂಗ್ಯಾನತಾವರೆಯ ಬಾಬು ಗಂಗು ಕೊಕ್ಕರೆ ಅವರಿಗೆ 10 ಲಕ್ಷ ರೂ ಪರಿಹಾರ ಹಾಗೂ 4 ಸಾವಿರ ರೂ ಮಾಸಾಶನ, ಕರಡಿಯಿಂದ ಕಚ್ಚಿಸಿಕೊಂಡಿದ್ದ ಚಿಮಣಿಮಾಳ ನಿವಾಸಿ ಗೋದಿ ಜಾನು ಜಂಗಳೆ ಅವರಿಗೆ 5 ಲಕ್ಷ ರೂ ಪರಿಹಾರ, ಮುಂಡಗೋಡು ಅಂದಲಗಿಯ ದ್ಯಾಮಣ್ಣ ನಾಗಪ್ಪ ಬೆಂಡಿಗೇರಿ ಹಾಗೂ ಮುಂಡಗೋಡ ಚವಡಳ್ಳಿ ಗ್ರಾಮದ ನಿವಾಸಿ ನಾಗುಬಾಯಿ ಜಾನು ವರಕ ಅವರಿಗೆ ಕರಡಿ ಕಚ್ಚಿದ ಕಾರಣ 5 ಲಕ್ಷ ರೂ ಪರಿಹಾರ ನೀಡುವ ಆದೇಶವನ್ನು ಶಿವರಾಮ ಹೆಬ್ಬಾರ್ ಅವರು ಹಸ್ತಾಂತರಿಸಿದ್ದಾರೆ. ಯಲ್ಲಾಪುರದ ಇಡಗುಂದಿ ವಜ್ರಳ್ಳಿಯ ಜೂಜೆ ಲೂಯಿಸ್ ಸಿದ್ದಿ ಅವರು ಬೆಂಕಿ ಆರಿಸುವಾಗ ವಿದ್ಯುತ್ ಸ್ಪರ್ಶದಿಂದ ಸಾವನಪ್ಪಿದ್ದು, ಅವರ ಕುಟುಂಬದವರಿಗೆ ಸಹ ದಿನಗೂಲಿ ನೌಕರರ ವಿಶೇಷ ಅನುಕಂಪದ ಮೇಲೆ 5 ಲಕ್ಷ ರೂ ಪರಿಹಾರ ವಿತರಿಸಿದ್ದಾರೆ.