ಕೆಲ ದಿನಗಳಿಂದ ಮಾರುತಿ ದೇವಾಲಯಗಳನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಕಳ್ಳರು ಈ ಬಾರಿ ದೇವಿ ದೇಗುಲದಲ್ಲಿನ ಗಂಟೆ ಕದ್ದಿದ್ದು, ಅದಾಗಿ ಮೂರು ದಿನಗಳ ಒಳಗೆ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಕಳ್ಳತನದ ನಂತರ ಊರು ಬಿಟ್ಟು ಪರಾರಿಯಾಗಲು ಯತ್ನಿಸಿದ ಕಳ್ಳರನ್ನು ಕಾರವಾರ ಪೊಲೀಸರು ಹಿಡಿದು ಜೈಲಿಗೆ ಕಳುಹಿಸಿದ್ದಾರೆ.
ಕಾರವಾರದ ಹಬ್ಬುವಾಡ ರಸ್ತೆಯಲ್ಲಿರುವ ದಾಸಮಾರುತಿ ದೇವಾಲಯದಲ್ಲಿ ಮೇ 20ರಂದು ಕಳ್ಳತನ ನಡೆದಿತ್ತು. 50 ಕೆಜಿಯ ಹಿತ್ತಾಳೆ ಸಾಮಗ್ರಿಗಳನ್ನು ಕಳ್ಳರು ದೋಚಿದ್ದರು. ಈ ಬಗ್ಗೆ ಅಲ್ಲಿನ ಶಾಮಸುಂದರ ಅನಂತ ಬಸರೂರು ಅವರು ನೀಡಿದ ಮಾಹಿತಿ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಶುರು ಮಾಡಿದ್ದರು. ಮೇ 31ರಂದು ಚೆಂಡಿಯಾ ಗ್ರಾಮದ ಜಯಮಾರುತಿ ದೇವಸ್ಥಾನದ ಹುಂಡಿ ಒಡೆದ ಕಳ್ಳರು 21 ಸಾವಿರ ರೂ ಹಣ ದೋಚಿದ್ದರು. ಚೆಂಡಿಯಾದಲ್ಲಿ ಎರಡು ಹಿತ್ತಾಳೆ ಗಂಟೆಯನ್ನು ಸಹ ಕಳ್ಳರು ಅಪಹರಿಸಿದ್ದರು. ಚೆಂಡಿಯಾ ಐಸ್ ಪಾಕ್ಟರಿ ಬಳಿಯ ನರಸಿಂಹ ಸುಬ್ರಾಯ ಆಚಾರಿ ನೀಡಿದ ಮಾಹಿತಿ ಪ್ರಕಾರ ಪೊಲೀಸರು ಈ ಬಗ್ಗೆಯೂ ಪ್ರಕರಣ ದಾಖಲಿಸಿದ್ದರು.
ಅದಾದ ನಂತರ ಜೂನ್ 4ರಂದು ಮುಖೇರಿ ಸಾಸನವಾಡದಲ್ಲಿರುವ ರಾಮಸತಿ ದೇವಿ ದೇಗುಲಕ್ಕೆ ಕಳ್ಳರು ನುಗ್ಗಿದರು. ದೇವಿ ಆಲಯದಲ್ಲಿದ್ದ ಹಿತ್ತಾಳೆ ಸಾಮಗ್ರಿಗಳ ಜೊತೆ ಗಂಟೆಗಳನ್ನು ಸಹ ಕದ್ದರು. ದೇವಿ ಸನ್ನಿಧಿಯಲ್ಲಿನ ಕಳ್ಳತನದ ಬಗ್ಗೆ ಅಲ್ಲಿನ ವಿಘ್ನೇಶ್ವರ ರತ್ನಾಕರ್ ನಾಗೇಕರ್ ಅವರು ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದರು. ಈ ಮೂರು ದೇವಸ್ಥಾನಗಳ ಕಳ್ಳತನದ ಬಗ್ಗೆ ಸಮಗ್ರ ಶೋಧ ನಡೆಸಿದ ಪೊಲೀಸರಿಗೆ ಕಳ್ಳರ ಬಗ್ಗೆ ಸಣ್ಣ ಸುಳಿವು ಸಿಕ್ಕಿತು. ಅದೇ ಸುಳಿವಿನ ಆಧಾರದಲ್ಲಿ ಇನ್ನಷ್ಟು ತನಿಖೆ ಮಾಡಿದಾಗ ಊರು ಬಿಟ್ಟು ಪರಾರಿಯಾಗಲು ಯತ್ನಿಸಿದ ಕಳ್ಳರು ಸಿಕ್ಕಿ ಬಿದ್ದರು.
ಸದ್ಯ ಪೊಲೀಸರು ಕಳ್ಳರ ವಿಚಾರಣೆ ಮುಂದುವರೆಸಿದ್ದಾರೆ. ಕದ್ದ ಸಾಮಗ್ರಿಗಳನ್ನು ವಶಕ್ಕೆಪಡೆದಿದ್ದಾರೆ. ಆ ಡಕಾಯಿತರು ಇನ್ನು ಎಲ್ಲೆಲ್ಲಿ ಕಳ್ಳತನ ಮಾಡಿದ್ದಾರೆ? ಎನ್ನುವುದರ ಬಗ್ಗೆಯೂ ವಿಚಾರಣೆ ನಡೆಸುತ್ತಿದ್ದಾರೆ. ಸಿಕ್ಕಿಬಿದ್ದ ಕಳ್ಳರ ಹೆಸರು-ವಿವರ ಬಹಿರಂಗವಾಗಿಲ್ಲ. ಸದ್ಯದಲ್ಲಿಯೇ ಕಳ್ಳರ ಹೆಸರು-ವಿಳಾಸ ಗೊತ್ತಾಗುವ ಸಾಧ್ಯತೆಯಿದೆ.