ಕಂಠಪೂರ್ತಿ ಕುಡಿದ ಮತ್ತಿನಲ್ಲಿ ಪೊಲೀಸರ ಮೇಲೆ ದಾಳಿ ಮಾಡಿದ ರೌಡಿಯ ರಂಪಾಟಕ್ಕೆ ಪಿಸೈ ಬಸವರಾಜ ಮಬನೂರು ಅವರ ತಲೆತಂಡವಾಗಿದೆ. ಹಳಿಯಾಳ ಪಿಸೈ ಬಸವರಾಜ ಮಬನೂರು ಅವರು ಸೇವೆಯಿಂದ ಅಮಾನತು ಆಗಿದ್ದು, ಎಂಟು ಪೊಲೀಸ್ ಸಿಬ್ಬಂದಿ ವರ್ಗವಾಗಿದ್ದಾರೆ.
ಹಳಿಯಾಳ ನಿರಲಗಾದ ಮಂಜುನಾಥ ಸುಬ್ರಾಯ ಬೇಕನಿ (ಮಚ್ಚ್ ಮಂಜಾ) ದಾದಾಗಿರಿ ಮಾಡಿಯೇ ಎಲ್ಲರನ್ನು ಹೆದರಿಸುತ್ತಿದ್ದರು. ಜೂನ್ 14ರ ರಾತ್ರಿಯೂ ಅವರು ಮೌರ್ಯ ಬಾರ್ & ರೆಸ್ಟೋರೆಂಟ್ ಎದುರು ಗಲಾಟೆ ಮಾಡಿದ್ದರು. ಗಲಾಟೆ ತಡೆಯಲು ಬಂದ ಪಿಸೈ ಬಸವರಾಜ ಮಬನೂರು ಅವರ ಪೊಲೀಸ್ ಜೀಪಿಗೆ ಅಡ್ಡಗಟ್ಟಿ ರಂಪಾಟ ಮಾಡಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ನಂದೀಶ್ವರ ಗುಡ್ಡೋಡಗಿ, ಅಶೋಕ ಬಸಲಿಂಗಪ್ಪ ಹುಬ್ಬಳ್ಳಿ ಹಾಗೂ ಹನುಮಂತ ಓಂಕಾರಪ್ಪ ಬರಗಿ ಅವರ ಮೇಲೆಯೂ ಮಚ್ಚ್ ಮಂಜಾ ಆಕ್ರಮಣ ಮಾಡಿದ್ದರು. ಪೊಲೀಸರ ಮೇಲೆ ದಾಳಿ ಮಾಡಿದರೂ ಕ್ರಮವಾಗಿಲ್ಲ ಎಂಬ ಆಕ್ಷೇಪಣೆ ಸಾರ್ವಜನಿಕ ವಲಯದಿಂದ ಕೇಳಿ ಬಂದಿದ್ದು, ಅದಕ್ಕೆ ಪ್ರತ್ಯುತ್ತರವಾಗಿ ರೌಡಿಯ ವಿರುದ್ಧ ಪಿಸೈ ಬಸವರಾಜ ಮಬನೂರು ಅವರು ಪೊಲೀಸ್ ಪ್ರಕರಣ ದಾಖಲಿಸಿದ್ದರು.
ಈ ಗಲಾಟೆಯಲ್ಲಿ ಪಾನ್ ಅಂಗಡಿಯ ರಾಘವೇಂದ್ರ ದತ್ತಾ ಬಾಂದೇಕರ್, ಬಾರ್ ಸಿಬ್ಬಂದಿ ಬಸವರಾಜ ಹಾಗೂ ರಾಘವೇಂದ್ರ ಅವರ ಮೇಲೆಯೂ ದಾಳಿ ನಡೆದಿತ್ತು. ಹೊಟೇಲ್ ಮ್ಯಾನೇಜರ್ ಸದಾಶಿವ ಪೂಜಾರಿ ಅವರ ಮೇಲೆಯೂ ಮಂಜುನಾಥ ಬೇಕನಿ ಹಲ್ಲೆ ಮಾಡಿದ್ದರು. ಆ ಗಲಾಟೆ ತಡೆಗೆ ಹೋಗಿದ್ದ ಪೊಲೀಸರ ಮೇಲೆ ದಾಳಿ ನಡೆದ ವಿಡಿಯೋ ವೈರಲ್ ಆಗಿದ್ದು, ಅದಾದ ನಂತರ ಹೊಟೇಲ್ ಮ್ಯಾನೇಜರ್ ಸದಾಶಿವ ಪೂಜಾರಿ ಅವರು ನೀಡಿದ ದೂರಿನ ಅನ್ವಯ ಪೊಲೀಸರು ಮಂಜುನಾಥ ಸುಬ್ರಾಯ ಬೇಕನಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅದಾದ ನಂತರ ಇದೀಗ ಪೊಲೀಸರ ಮೇಲೆ ಆಕ್ರಮಣ ನಡೆಸಿದ ಬಗ್ಗೆ ಮತ್ತೊಂದು ಪ್ರಕರಣವನ್ನು ಸ್ವತಃ ಪಿಸೈ ಬಸವರಾಜ ಮಬನೂರು ಅವರು ದಾಖಲಿಸಿದ್ದು, ಸದ್ಯ ಅವರ ವಿರುದ್ಧವೇ ಇದೀಗ ಕಠಿಣ ಕ್ರಮವಾಗಿದೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಅವರು ಬಸವರಾಜ ಮಬನೂರು ಅವರ ವಿರುದ್ಧ ತನಿಖೆಗೆ ಆದೇಶಿಸಿ, ಅಮಾನತು ಮಡಿದ್ದಾರೆ. ಈ ಜೊತೆಗೆ ಹಳಿಯಾಳದ ಎಂಟು ಪೊಲೀಸ್ ಸಿಬ್ಬಂದಿಯನ್ನು ಬೇರೆ ಕಡೆ ವರ್ಗಾಯಿಸಲಾಗಿದೆ. ಆಂತರಿಕ ತನಿಖೆ ಆಧಾರದಲ್ಲಿ ಈ ಕ್ರಮ ಜರುಗಿಸಲಾದ ಮಾಹಿತಿಯಿದೆ. ಅದಾಗಿಯೂ, ರೌಡಿ ಮಾಡಿದ ತಪ್ಪಿಗೆ ಪೊಲೀಸರು ಶಿಕ್ಷೆ ಅನುಭವಿಸಿದ ಬಗ್ಗೆಯೂ ಇದೀಗ ಚರ್ಚೆ ಶುರುವಾಗಿದೆ. .