ಕಾರವಾರದ ಮನೆಯೊಂದರ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಅಲ್ಲಿ ಏನೂ ಕದಿಯದೇ ಮರಳಿದ್ದಾರೆ. ಕಳ್ಳರು ಮನೆಗೆ ನುಗ್ಗಿದ ಕಾರಣ ಅರಿವಾಗದಿದ್ದರೂ ದುಷ್ಕೃತ್ಯ ನಡೆಸಿದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾರವಾರದ ಸದಾಶಿವಗಡದ ನಾಗಫೋಂಡಾ ಸದಿಚ್ಚಾ ಹಾಲ್ ಬಳಿಯ ಹೆದ್ದಾರಿ ಪಕ್ಕದ `ಮುಕ್ತಾಯಿ’ ಎಂಬ ಮನೆಗೆ ಕಳ್ಳರು ಪ್ರವೇಶಿಸಿದ್ದಾರೆ. ಸುಭಾಶ್ ರಾಣೆ ಅವರ ಮಾಲಕತ್ವದ ಮನೆಗೆ ಅಕ್ಟೊಬರ್ 19ರಿಂದ ಅಕ್ಟೊಬರ್ 22ರವರೆಗಿನ ಅವಧಿಯಲ್ಲಿ ಕಳ್ಳರು ಬಂದಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮುಂದಿನ ಬಾಗಿಲಿನ ಬೀಗ ಒಡೆದಿದ್ದಾರೆ. ಇಂಟರ್ಲಾಕ್ ಸಹ ಮುರಿದು ಒಳಗೆ ನುಗ್ಗಿದ್ದಾರೆ.
ಅದಾದ ನಂತರ ಎಲ್ಲಾ ಬೆಡ್ ರೂಮುಗಳನ್ನು ಶೋಧಿಸಿದ್ದಾರೆ. ಮನೆ ನೆಲಮಹಡಿ ಪ್ರವೇಶಿಸಿ ಅಲ್ಲಿದ್ದ ಕಬ್ಬಿಣದ ಕಪಾಟಿನ ಲಾಕರ್ ಒಡೆದಿದ್ದಾರೆ. ಉಳಿದ ಮೂರು ಕಪಾಟಿನ ಒಳಗಿದ್ದ ಸಾಮಗ್ರಿಗಳನ್ನು ನೋಡಿ ಚಲ್ಲಾಪಿಲ್ಲಿ ಮಾಡಿದ್ದಾರೆ. ಇಷ್ಟೊಂದು ಸಾಹಸ ಮಾಡಿದ ಕಳ್ಳರು ಮನೆಯಿಂದ ಏನನ್ನು ಕದ್ದಿಲ್ಲ. ಅದಾಗಿಯೂ ಭಾವನ ಮನೆಯಲ್ಲಿ ಕಳ್ಳತನ ಪ್ರಯತ್ನ ನಡೆದಿರುವುದನ್ನು ಸಹಿಸದ ಸೂರಜ ಗಾಂವ್ಕರ್ ಅವರು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.