ಯಲ್ಲಾಪುರದ ಎಪಿಎಂಸಿ ತಿರುವಿನಲ್ಲಿ ಶನಿವಾರ ಪೊಲೀಸ್ ವಾಹನ ಅಪಘಾತಕ್ಕೀಡಾಗಿದೆ. ಅಪಘಾತದ ರಭಸಕ್ಕೆ ಅಪಘಾತಕ್ಕೀಡಾದ ಎರಡು ವಾಹನದಲ್ಲಿದ್ದ ಏರ್ಬ್ಯಾಗ್ ತೆರೆದಿದ್ದು, ವಾಹನದಲ್ಲಿದ್ದವರು ಅದರಿಂದಲೇ ಜೀವ ಉಳಿಸಿಕೊಂಡಿದ್ದಾರೆ.
ಶಿರಸಿಯಿoದ ಯಲ್ಲಾಪುರ ಮಾರ್ಗವಾಗಿ ನ್ಯಾಯಾಧೀಶರೊಬ್ಬರು ಕಾರಿನಲ್ಲಿ ಸಂಚರಿಸುತ್ತಿದ್ದರು. ನ್ಯಾಯಾಧೀಶರ ಭದ್ರತೆಗಾಗಿ ಪೊಲೀಸ್ ಜೀಪು ಮುಂದೆ ಸಂಚರಿಸುತ್ತಿತ್ತು. ಯಲ್ಲಾಪುರ ಪಟ್ಟಣದಿಂದ ಶಿರಸಿ ಮಾರ್ಗವಾಗಿ ಬಂದ ಕಾರೊಂದು ಎಪಿಎಂಸಿ ಕಡೆ ತಿರುಗಿದ್ದು, ವೇಗವಾಗಿದ್ದ ಪೊಲೀಸರ ಜೀಪು ಆ ಕಾರಿಗೆ ಡಿಕ್ಕಿ ಹೊಡೆಯಿತು.
ತಕ್ಷಣ ಆ ಕಾರು ಹಾಗೂ ಪೊಲೀಸ್ ಜೀಪಿನ ಏರ್ಬ್ಯಾಗ್ ತೆರೆದಿದ್ದರಿಂದ ಎರಡು ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾದರು. ಅದಾಗಿಯೂ ಆ ವಾಹನದಲ್ಲಿದ್ದವರು ಅಲ್ಲಲ್ಲಿ ಗಾಯವಾಯಿತು. ಎರಡು ವಾಹನ ಜಖಂ ಆಯಿತು. ಅದಾದ ನಂತರ ಗಾಯಗೊಂಡಿದ್ದ ಪೊಲೀಸರಿಗೆ ಸ್ಥಳೀಯರು ಉಪಚರಿಸಿದರು. ಅಲ್ಲಿದ್ದ ಜನರೇ 108 ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಫೋನ್ ಮಾಡಿದರು.
ನ್ಯಾಯಾಧೀಶರು ಸಹ ಕೆಲಕಾಲ ಅಪಘಾತದ ಸ್ಥಳದಲ್ಲಿದ್ದು, ವಾತಾವರಣ ತಿಳಿಯಾದ ನಂತರ ಮುಂದಿನ ಕೆಲಸಕ್ಕೆ ಹೋದರು. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.