ಮನೆಯಲ್ಲಿ ಬಾಂಬ್ ಸಂಗ್ರಹಿಸಿಕೊoಡಿದ್ದ ಹಳಿಯಾಳದ ವಸಂತ ಕೋರವರ್ ಅವರು ಬಾಂಬ್ ಸ್ಪೋಟದ ನಂತರ ಹುಬ್ಬಳ್ಳಿಗೆ ಪರಾರಿಯಾಗಿದ್ದು, ಪೊಲೀಸರು ಅವರನ್ನು ಹುಡುಕಿದ್ದಾರೆ. ದಾಂಡೇಲಿ, ಹಳಿಯಾಳ ಹಾಗೂ ರಾಮನಗರ ಪೊಲೀಸರ ಜಂಟಿ ಕಾರ್ಯಾಚರಣೆ ಪರಿಣಾಮ ವಸಂತ ಕೋರವರ್ ಅವರು ಸಿಕ್ಕಿ ಬಿದ್ದಿದ್ದಾರೆ.
ಜೂನ್ 22ರ ನಸುಕಿನಲ್ಲಿ ಹಳಿಯಾಳದ ಕಾಳಗಿನಕೊಪ್ಪ ಗ್ರಾಮದಲ್ಲಿ ಬಾಂಬ್ ಸ್ಪೋಟ ನಡೆದಿತ್ತು. ಅಲ್ಲಿನ ವಸಂತ ರಾಯಪ್ಪ ಕೊರವರ್ ಅವರು ಮನೆಯಲ್ಲಿ ಬಾಂಬ್ ಶೇಖರಿಸಿಕೊಂಡಿದ್ದು, ಅದು ಸ್ಪೋಟಿಸಿದ ಪರಿಣಾಮ ಇಡೀ ಮನೆ ಮುರಿದು ಬಿದ್ದಿತ್ತು. ಜೊತೆಗೆ ಅಕ್ಕ-ಪಕ್ಕದ ಮನೆಗಳು ಬಿರುಕು ಮೂಡಿದ್ದವು. ಶಂಕರ ನಿಂಗಪ್ಪ ಬೆಡದೋಳ್ಕರ್, ಅಪ್ಪಾರಾವ್ ನಿಂಗಪ್ಪ ಬೆಡದೋಳ್ಕರ್ ಅವರ ಜೊತೆ ಪೀಶಪ್ಪ ಲೋಕಪ್ಪ ದೊಡ್ಡ ಗೌಡ ಅವರ ಮನೆಗೆ ಬಾಂಬ್ ಸ್ಪೋಟದಿಂದ ಹಾನಿಯಾಗಿತ್ತು. ಬಾಂಬ್ ಸ್ಪೋಟದ ನಂತರ ಆರೋಪಿ ವಸಂತ ಕೋರವರ್ ಅವರು ಪರಾರಿಯಾಗಿದ್ದರು. ಮನೆಯಲ್ಲಿ ಉಳಿದ ಬಾಂಬ್’ನ್ನು ಅವರು ಸಮೀಪದ ಕೆರೆ ಬಳಿ ಎಸೆದು ಓಡಿ ಹೋಗಿದ್ದರು.
ಬಾಂಬ್ ಸ್ಪೋಟದ ಸುದ್ದಿ ಕೇಳಿ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಅಲ್ಲಿ ಭೇಟಿ ನೀಡಿದ್ದರು. ಹೆಚ್ಚುವರಿ ಅಧೀಕ್ಷಕ ಕೃಷ್ಣಮೂರ್ತಿ, ಡಿವೈಎಸ್ಪಿ ಶಿವಾನಂದ ಮದರಖಂಡಿ, ಪಿಐ ಜಯಪಾಲ ಪಾಟೀಲ, ದಾಂಡೇಲಿ ಪಿಸೈ ಕಿರಣ ಪಾಟೀಲ, ಹಳಿಯಾಳ ಪಿಸೈ ಕುಷ್ಣಗೌಡ ಅರಕೇರಿ, ರಾಮನಗರ ಪಿಸೈ ಮಹಂತೇಶ ನಾಯಕ, ರಾಮನಗರದ ಪೊಲೀಸ್ ಸಿಬ್ಬಂದಿ ಮಹಮದ್ ಶಫಿ, ದಾಂಡೇಲಿ ಪೊಲೀಸ್ ಸಿಬ್ಬಂದಿ ಎಂ ಎಂ ಮುಲ್ಲಾ, ಕೃಷ್ಣ ಬಿಳವರಿ, ಬಸವರಾಜ ತೆಲಸಂಗ, ಹಳಿಯಾಳ ಸಿಬ್ಬಂದಿ ಬಸವರಾಜ ತ್ಯಾಪಿ, ಶ್ರೀಶೈಲ, ಬಸವರಾಜ ಹಗೇರಿ, ಮಲ್ಲಿಕಾರ್ಜುನ ಕುದರಿ, ವಿನೋದ, ಲಕ್ಷಣ, ಅರವಿಂದ, ನಿಂಗಪ್ಪ, ತಾಂತ್ರಿಕ ಸಿಬ್ಬಂದಿ ಉದಯ ಗುನಗಾ, ಚಂದ್ರು ಪಾಟೀಲ ಸೇರಿ ಸಮಗ್ರ ತನಿಖೆ ಶುರು ಮಾಡಿದ್ದರು. ಅದರ ಪರಿಣಾಮ ಬಾಂಬ್ ಮನೆಯಲ್ಲಿರಿಸಿಕೊಂಡಿದ್ದ ವಸಂತ ಕೋರವರ್ ಸಿಕ್ಕಿ ಬಿದ್ದಿದ್ದಾರೆ.
ಜೂನ್ 24ರಂದು ಹುಬ್ಬಳ್ಳಿ ತಾರಿಹಾಳದ ಬಸ್ ನಿಲ್ದಾಣದ ಬಳಿ ಅಲೆದಾಡುತ್ತಿದ್ದ ವಸಂತ ಕೋರವರ್ ಅವರನ್ನು ಪೊಲೀಸರು ಹಿಡಿದಿದ್ದಾರೆ. ನಂತರ ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ನ್ಯಾಯಾಲಯವೂ ವಸಂತ ಕೋರವರ್ ಅವರಿಗೆ ನ್ಯಾಯಾಂಗ ಬಂಧನವಿಧಿಸಿದೆ. ಬಾಂಬ್ ದಾಸ್ತಾನಿಗೆ ಕಾರಣ, ಬಾಂಬ್ ತಯಾರಿಕೆ ಹಿಂದಿರುವ ವ್ಯಕ್ತಿಗಳ ಬಗ್ಗೆಯೂ ಪೊಲೀಸರು ತನಿಖೆ ಶುರು ಮಾಡಿದ್ದಾರೆ.