ಫೇಸ್ಬುಕ್ ಸೇರಿ ವಿವಿಧ ಸಾಮಾಜಿಕ ಜಲತಾಣದಲ್ಲಿ ನಕಲಿ ಖಾತೆ ಹೊಂದಿದ್ದ ಮುರ್ಡೇಶ್ವರದ ಪುರಂಧರ ನಾಯ್ಕ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಕಲಿ ಖಾತೆಗಳ ಮೂಲಕ ಸಚಿವ ಮಂಕಾಳು ವೈದ್ಯರ ತೇಜೋವಧೆ ಮಾಡಿದ ಆರೋಪದ ಅಡಿ ಮಂಜುನಾಥ ನಾಯ್ಕ ಅವರು ಜೈಲು ಸೇರಿದ್ದಾರೆ.
ಭಟ್ಕಳದ ಬೈಲೂರು ದೊಡ್ಡಬಲ್ಸೆಯ ಪುರಂದರ ಮಂಜುನಾಥ ನಾಯ್ಕ (37) ಅವರು ತಮ್ಮ ಹೆಸರಿನ ಜೊತೆ ಬೇರೆ ಬೇರೆ ಹೆಸರಿನಲ್ಲಿ ಫೇಸ್ಬುಕ್ ಖಾತೆ ಹೊಂದಿದ್ದರು. ಆ ಖಾತೆಗಳ ಮೂಲಕ ಅವರು ಅನೇಕರ ತೇಜೋವಧೆ ಮಾಡುತ್ತಿದ್ದರು. ಸಚಿವ ಮಂಕಾಳು ವೈದ್ಯ ಅವರ ಬೆನ್ನುಬಿದ್ದಿದ್ದ ಮಂಜುನಾಥ ನಾಯ್ಕ ಅವರು ಸಚಿವರ ಬಗ್ಗೆ ಅವಹೇಳನವಾಗಿ ಬರೆದಿದ್ದರು. ಜೊತೆಗೆ ವಿಡಿಯೋಗಳನ್ನು ಹರಿಬಿಟ್ಟಿದ್ದರು.
2025ರ ಮೇ 29ರಂದು ಮುರ್ಡೇಶ್ವರ ಠಾಣೆಯಲ್ಲಿ ನಕಲಿ ಫೇಸ್ಬುಕ್ ಖಾತೆ ಕುರಿತಾಗಿ ಪ್ರಕರಣ ದಾಖಲಾಗಿದ್ದು, `ತೇಜು ನಾಯ್ಕ ಹೊನ್ನಾವರ’ ಎಂಬ ಖಾತೆಯಿಂದ ಅಸಬ್ಯ ಬರಹ ಹಾಗೂ ವಿಡಿಯೋ ಪ್ರಸಾರವಾಗಿದನ್ನು ಉಲ್ಲೇಖಿಸಲಾಗಿತ್ತು. ಮುರ್ಡೇಶ್ವರ ಪೊಲೀಸರು ತನಿಖೆ ಶುರು ಮಾಡಿದ್ದರು. 2025ರ ಜೂನ್ 6ರಂದು ನಾಗಪ್ಪ ನಾಯ್ಕ ಅವರು ಮುರ್ಡೇಶ್ವರ ಠಾಣೆಯಲ್ಲಿ ಇನ್ನೊಂದು ದೂರನ್ನು ನಿಡಿ `ತೇಜು ನಾಯ್ಕ ಹೊನ್ನಾವರ’ ಮತ್ತು `ವಂದನಾ ಪೂಜಾರಿ’ ಎಂಬ ಖಾತೆ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ವಿರುದ್ಧ 1.29 ನಿಮಿಷಗಳ ಸುಳ್ಳು ಹಾಗೂ ಅವಹೇಳನಕಾರಿ ವಿಡಿಯೋ ಹಂಚಿದ ಬಗ್ಗೆ ದೂರು ನೀಡಿದ್ದರು.
ಸಚಿವರಿಗೆ ಮುಜುಗರ ಉಂಟಾದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದು, ಆ ಪ್ರಕರಣವನ್ನು ಪೊಲೀಸರು ತನಿಖೆ ಮಾಡಿದರು. ಕೊನೆಗೆ ಈ ದಿನ ನಕಲಿ ಖಾತೆಯ ರುವಾರಿ ಪುರಂಧರ ನಾಯ್ಕ ಸಿಕ್ಕಿ ಬಿದ್ದಿದ್ದಾರೆ. ಕೃತ್ಯಕ್ಕೆ ಬಳಸಲಾದ ಮೊಬೈಲನ್ನು ಪೊಲೀಸರು ಜಪ್ತು ಮಾಡಿದ್ದಾರೆ.