ಹಳಿಯಾಳದಲ್ಲಿ ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಹಿಮ್ಮುಖವಾಗಿ ಚಲಿಸಿ ಡಿಕ್ಕಿ ಹೊಡೆದಿದ್ದು, ಆ ಡಿಕ್ಕಿಯ ರಭಸಕ್ಕೆ ಮಂಜುನಾಥ ಮೆಣಸಿನಕಾಯಿ ಎಂಬಾತರು ಸಾವನಪ್ಪಿದ್ದಾರೆ.
ಹಳಿಯಾಳದ ಈಐಡಿ ಸಕ್ಕರೆ ಕಾರ್ಖಾನೆ ಎದುರಿನ ಸೇತುವೆ ಬಳಿ ಬುಧವಾರ ಈ ಅವಘಡ ನಡೆದಿದೆ. ಕಲಘಟಕಿ ದಾಸ್ತಿಕೊಪ್ಪದ ಮಂಜುನಾಥ ಮೆಣಸಿನಕಾಯಿ (24) ಅವರು ಬುಧವಾರ ತಮ್ಮ ಲಾರಿ ಮುಂದೆ ನಿಂತು ಬಂಪರ್ ಒರೆಸುತ್ತಿದ್ದರು. ಆ ಲಾರಿಯ ಮುಂದೆ ಇನ್ನೊಂದು ಲಾರಿ ನಿಂತಿದ್ದು, ಇನ್ನೊಂದು ಲಾರಿಯ ಚಾಲಕ ಶಿವಲಿಂಗಪ್ಪ ಎಮ್ಮಟ್ಟಿ ಅವರು ತಮ್ಮ ಲಾರಿಯನ್ನು ಹಿಮ್ಮುಖವಾಗಿ ಓಡಿಸಿದರು. ಆಗ, ಹಿಮ್ಮುಖವಾಗಿ ಚಲಿಸಿದ ಲಾರಿ ಮಂಜುನಾಥ ಮೆಣಸಿನಕಾಯಿ ಅವರಿಗೆ ಡಿಕ್ಕಿಯಾಯಿತು.
ಪರಿಣಾಮ ಮಂಜುನಾಥ ಮೆಣಸಿನಕಾಯಿ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಅವರನ್ನು ಚಿಕಿತ್ಸೆಗಾಗಿ ಹಳಿಯಾಳ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಗ ವೈದ್ಯರು ಮಂಜುನಾಥ ಮೆಣಸಿನಕಾಯಿ ಅವರು ಸಾವನಪ್ಪಿದ ವಿಷಯ ತಿಳಿಸಿದರು. ಯಡೋಗಾದ ವಿಠ್ಠಲ ತೇರಗಾಂವ್ಕರ್ ಅವರು ಈ ಎಲ್ಲಾ ವಿಷಯದ ಬಗ್ಗೆ ಪೊಲೀಸರಿಗೆ ತಿಳಿಸಿದ್ದು, ಹಿರೆಹೊನ್ನಾಳಿಯ ಶಿವಲಿಂಗಪ್ಪ ಎಮ್ಮೆಟ್ಟಿ ವಿರುದ್ಧ ಹಳಿಯಾಳ ಪೊಲೀಸರು ಪ್ರಕರಣ ದಾಖಲಿಸಿದರು.