ಜೊಯಿಡಾದ ಜಯಶ್ರೀ ವೇಳಿಪ್ ಅವರಿಗೆ ರಾಮನಗರದ ಸುನೀಲ ಮಿರಾಶಿ ಅವರು ಪ್ರೀತಿಸುವಂತೆ ಕಾಡಿಸುತ್ತಿದ್ದು, ಆ ಕಾಟ ಸಹಿಸಲಾಗದೇ ಜಯಶ್ರೀ ಅವರು ಬ್ಯಾಗಿನಲ್ಲಿದ್ದ ಗುಳುಗೆ ತಿಂದಿದ್ದಾರೆ. ಅದರ ಪರಿಣಾಮ ಅವರು ಹೊಟ್ಟೆನೋವಿನಿಂದ ಬಳಲಿ ವಾಂತಿ ಮಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ.
ಜೊಯಿಡಾದ ಕುಂಬಾರವಾಡ ಬಳಿಯ ಕಾತ್ರೋಳ್ಳಿಯಲ್ಲಿ ಜಯಶ್ರೀ ವೇಳಿಪ್ (23) ಅವರು ವಾಸವಾಗಿದ್ದಾರೆ. ಕಳೆದ ಮೂರು ವರ್ಷದ ಹಿಂದೆ ಅವರಿಗೆ ರಾಮನಗರದ ವರಾಂಡದ ಸುನೀಲ ತುಳಸಿದಾಸ ಮಿರಾಶಿ ಅವರ ಪರಿಚಯವಾಗಿದೆ. ಕಳೆದ ಒಂದು ವರ್ಷದಿಂದ ಸುನೀಲ ಮಿರಾಶಿ ಅವರು ಜಯಶ್ರೀ ಅವರಿಗೆ ಪ್ರೀತಿಸುವಂತೆ ಬೆನ್ನು ಬಿದ್ದಿದ್ದಾರೆ. ಜಯಶ್ರೀ ಅವರು ತಂದೆ ರಾಜಾ, ತಾಯಿ ರಾಜಶ್ರೀ, ಅಜ್ಜಿ ದ್ರೌಪದಿ, ಚಿಕ್ಕಪ್ಪ ದೀಪಕ ಜೊತೆ ವಾಸವಾಗಿದ್ದು ಪ್ರೀತಿ ಒಪ್ಪದೇ ಇದ್ದಲ್ಲಿ ಅವರೆಲ್ಲರಿಗೂ ಸಮಸ್ಯೆ ಮಾಡುವುದಾಗಿ ಸುನೀಲ್ ಮಿರಾಶಿ ಅವರು ಬೆದರಿಸುತ್ತಿದ್ದಾರೆ. ಸುನೀಲ ಮಿರಾಶಿ ಅವರ ಕಾಟ ಸಹಿಸಲಾಗದೇ ಜಯಶ್ರೀ ಅವರು ಬೆಂಗಳೂರಿಗೆ ಹೋಗಿ ಉದ್ಯೋಗ ಶುರು ಮಾಡಿದ್ದಾರೆ.
ಬೆಂಗಳೂರಿನ ಕೆಂಗೇರಿಯ ಲುಮೆಕ್ಸ್ ಕಂಪನಿಯಲ್ಲಿ ಜಯಶ್ರೀ ಅವರು 4 ತಿಂಗಳಿoದ ಫಿಲ್ಟರ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಊರು ಬಿಟ್ಟರೂ ಜಯಶ್ರೀ ಅವರಿಗೆ ಸುನೀಲ ಮಿರಾಶಿ ಅವರ ಕಾಟ ತಪ್ಪಿಲ್ಲ. ಪದೇ ಪದೇ ಫೋನ್ ಮಾಡುವ ಸುನೀಲ ಮಿರಾಶಿ ಅವರು ಪ್ರೀತಿಸುವಂತೆ ಒತ್ತಡ ಹಾಕುತ್ತಿದ್ದಾರೆ. `ಪ್ರೀತಿಸದೇ ಇದ್ದರೆ ನಿನ್ನ ಸಾಯಿಸುವೆ. ನಿನ್ನ ಅಪ್ಪ-ಅಮ್ಮನ ಮರ್ಯಾದೆ ತೆಗೆಯುವೆ’ ಎಂದು ಹೇಳಿಯೂ ಹೆದರಿಸುತ್ತಿದ್ದಾರೆ.
ಈ ಎಲ್ಲದರ ನಡುವೆ ಜೂನ್ 7ರಂದು ಜಯಶ್ರೀ ಅವರಿಗೆ ಮನೆಯಿಂದ ಫೋನ್ ಬಂದಿದೆ. `ಅರ್ಜಂಟ್ ಊರಿಗೆ ಬಾ’ ಎಂದು ಕುಟುಂಬದವರು ಕರೆದ ಕಾರಣ ಅವರು ಬಸ್ಸು ಹತ್ತಿದ್ದಾರೆ. ಬೆಂಗಳೂರಿನಿoದ ಹೊರಟು ಜೊಯಿಡಾ ತಲುಪಿ ಕಾರ್ಟೋಳಿಗೆ ಹೋಗುತ್ತಿದ್ದ ಜಯಶ್ರೀ ಅವರು ಕಿರವತ್ತಿ ಬಸ್ ನಿಲ್ದಾಣದ ಬಳಿ ಸುನೀಲ ಮಿರಾಶಿ ಅವರಿಗೆ ಫೋನ್ ಮಾಡಿದ್ದಾರೆ. ಆಗಲೂ, ಸುನೀಲ ಮಿರಾಶಿ ಅವರು ಗದರಿಸಿದ್ದು, ಆ ಭಯಕ್ಕೆ ಬ್ಯಾಗಿನಲ್ಲಿದ್ದ ಎರಡು ಮಾತ್ರೆ ತಿಂದಿದ್ದಾರೆ. ಆದರೆ, ಆ ಮಾತ್ರೆ ಯಾವುದು? ಎಂದು ಸಹ ಜಯಶ್ರೀ ಅವರಿಗೆ ಗೊತ್ತಾಗಿಲ್ಲ.
ಅದಾದ ನಂತರ ಜಯಶ್ರೀ ಅವರಿಗೆ ಹೊಟ್ಟೆ ನೋವು ಶುರುವಾಗಿದೆ. ಅದಾದ ನಂತರ ಅವರು ವಾಂತಿ ಮಾಡಿಕೊಂಡಿದ್ದಾರೆ. ಕುಟುಂಬದವರು ಜಯಶ್ರೀ ಅವರನ್ನು ಜೊಯಿಡಾ ಆಸ್ಪತ್ರೆಗೆ ಸೇರಿಸಿದ್ದಾರೆ. ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಾರವಾರ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿನ ವೈದ್ಯರು ಜಯಶ್ರೀ ಅವರನ್ನು ಉಳಿಸಿಕೊಂಡಿದ್ದು, ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. `ಪ್ರೀತಿಸು ಇಲ್ಲವಾದರೆ ಸಾಯಿಸುವೆ’ ಎಂದು ಹೆದರಿಸಿದ್ದ ಸುನೀಲ ಮಿರಾಶಿ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದಾರೆ.