ಬೈಕಿನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಕುಮಟಾದ ವ್ಯಕ್ತಿಯನ್ನು ಕುಟುಂಬದವರು ಆಂಬುಲೆನ್ಸ ಮೂಲಕ ಮಣಿಪಾಲಿಗೆ ಕರೆದೊಯ್ದಿದ್ದು, ಅಲ್ಲಿದ್ದ ಕಸ್ತೂರಿ ಬಾ ಆಸ್ಪತ್ರೆಯ ವೈದ್ಯರು `ಚಿಕಿತ್ಸೆ ನೀಡಿದರೂ ಆತ ಬದುಕುವುದು ಕಷ್ಟ’ ಎಂದಿದ್ದಾರೆ. ಆಂಬುಲೆನ್ಸ ಮೂಲಕ ಮರಳಿ ತರುವಾಗ ಹಂದಿಗೋಣದ ಬಳಿ ಗಾಯಾಳು ಸಾವನಪ್ಪಿದ್ದಾರೆ.
ಕುಮಟಾದ ಹೆಗಡೆ ಪಡುಗೇರಿಯ ರಾಮನಾಥ ವಿಠೋಬಾ ನಾಯಕ ಅವರು ಹೊಟೇಲ್ ಒಂದರಲ್ಲಿ ಸಪ್ಲಾಯರ್ ಕೆಲಸ ಮಾಡಿಕೊಂಡಿದ್ದರು. ನವೆಂಬರ್ 18ರಂದು ಅವರು ಎಂದಿನAತೆ ಹೊಟೇಲ್ ಕೆಲಸ ಮುಗಿಸಿದ್ದರು. ಸಂಜೆ 6ಗಂಟೆಗೆ ಬೈಕಿನಲ್ಲಿ ಮನೆಗೆ ಮರಳುವಾಗ ಆಕಳೊಂದು ಅಡ್ಡ ಬಂದಿತು. ಅಲ್ಲಿನ ಕೆಡಿಸಿಸಿ ಬ್ಯಾಂಕ್ ಎದುರು ಆ ಆಕಳಿಗೆ ಬೈಕ್ ಗುದ್ದುವುದನ್ನು ತಪ್ಪಿಸುವ ಬರದಲ್ಲಿ ರಾಮನಾಥ ನಾಯಕ ಅವರು ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು.
ರಾಮನಾಥ ನಾಯಕ ಅವರನ್ನು ಕುಮಟಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರ ಶಿಫಾರಸ್ಸಿನ ಮೇರೆಗೆ ತುರ್ತಾಗಿ ಮಣಿಪಾಲದ ಕಸ್ತೂರಿ ಬಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ರಾಮನಾಥ ನಾಯಕ ಅವರನ್ನು ನೋಡಿದ ಆಸ್ಪತ್ರೆಯ ವೈದ್ಯರು `ತಲೆಗೆ ಗಂಭೀರ ಗಾಯವಾಗಿದೆ’ ಎಂದರು.
`ತೀವ್ರ ಪ್ರಮಾಣದಲ್ಲಿ ರಕ್ತಸ್ರಾವ ಆಗಿದ್ದರಿಂದ ಚಿಕಿತ್ಸೆ ನೀಡಿದರೂ ಬದುಕುವುದು ಕಷ್ಟ’ ಎಂದು ವಿವರಿಸಿದರು. ಹೀಗಾಗಿ ರಾಮನಾಥ ನಾಯಕ ಅವರ ಮಗ ವಿಘ್ನೇಶ್ ನಾಯಕ ಅವರು ತಂದೆಯನ್ನು ಆಂಬುಲೆನ್ಸ ಮೂಲಕವೇ ಕರೆ ತರುವ ಕೆಲಸ ಮಾಡಿದರು. ನವೆಂಬರ್ 19ರಂದು ಹಂದಿಕೋಣದ ಬಳಿ ಬರುವಾಗ ರಾಮನಾಥ ನಾಯಕ ಅವರು ಕೊನೆಯುಸಿರೆಳೆದರು.
`ಹೆಲ್ಮೆಟ್ ಧರಿಸಿ.. ಬೈಕ್ ಓಡಿಸಿ’