ತೋಟದ ಮನೆಗೆ ತೆರಳಿದ್ದ ಮಹಿಳೆಯ ಮೈ ಮುಟ್ಟಿದ ರಾಮಾ ದೇಸಾಯಿ ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಸಂತ್ರಸ್ತ ಮಹಿಳೆಗೂ ಪರಿಹಾರ ಒದಗಿಸುವಂತೆ ಆದೇಶಿಸಿದೆ.
2013ರ ಅಕ್ಟೊಬರ್ 13ರಂದು ಜೊಯಿಡಾದ ಪಟೋಳಿ ಗ್ರಾಮದ ಸಾಂಗವೆ ಬಳಿ ಗಾಯತ್ರಿ (ಹೆಸರು ಬದಲಿಸಿದೆ) ಅವರು ತೋಟದ ಮನೆಗೆ ಹೋಗಿದ್ದರು. ಅಲ್ಲಿ ಅವರು ಪಂಪ್ ಸೆಟ್ ಚಾಲು ಮಾಡುವಾಗ ರಾಮಾ ಗೋಪಾಲ ದೇಸಾಯಿ ಪಂಪಿನ ಮನೆಯೊಳಗೆ ನುಗ್ಗಿದ್ದರು. ರಾಮಾ ದೇಸಾಯಿ ಅವರು ಗಾಯತ್ರಿ ಅವರನ್ನು ಈ ವೇಳೆ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಇದಕ್ಕೆ ಗಾಯತ್ರಿ ಅವರು ವಿರೋಧವ್ಯಕ್ತಪಡಿಸಿದರು. ಅದಾಗಿಯೂ ರಾಮಾ ದೇಸಾಯಿ ಅವರು ಗಾಯತ್ರಿ ಅವರನ್ನು ಬಿಡಲಿಲ್ಲ.
ರಾಮಾ ದೇಸಾಯಿ ಅವರು ಅಸಭ್ಯವಾಗಿ ವರ್ತಿಸಿದಾಗ ಗಾಯತ್ರಿ ಅವರು ಜೋರಾಗಿ ಬೊಬ್ಬೆ ಹೊಡೆದರು. ಆಗ, ರಾಮಾ ದೇಸಾಯಿ ಅವರು ಗಾಯತ್ರಿ ಅವರ ಎರಡು ಕಾಲುಗನ್ನು ಗಟ್ಟಿಯಾಗಿ ಹಿಡಿದು ನೆಲಕ್ಕೆ ಬೀಳಿಸಿದರು. ಮಹಿಳೆಯ ಕೈ, ಕುತ್ತಿಗೆ ಹಾಗೂ ಬಾಯಿಗೆ ಗಾಯಪಡಿಸಿದರು. ಅದಾದ ನಂತರ `ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವೆ’ ಎಂದು ಬೆದರಿಸಿ ಅಲ್ಲಿಂದ ಪರಾರಿಯಾದರು.
ಅದಾಗಿಯೂ ಗಾಯತ್ರಿ ಅವರು ತಮಗಾದ ಅನ್ಯಾಯದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ಸಾಕ್ಷಿ ಆಧಾರದ ಕೊರತೆಯಿಂದ 2024ರ ಅಗಸ್ಟ 30ರಂದು ದಾಂಡೇಲಿ ನ್ಯಾಯಾಲಯದಲ್ಲಿ ಆ ಪ್ರಕರಣ ಬಿದ್ದು ಹೋಯಿತು. ಆದರೆ, ಅನ್ಯಾಯ ಅನುಭವಿಸಿದ್ದ ಗಾಯತ್ರಿ ಅವರು ಸುಮ್ಮನಿರಲಿಲ್ಲ. ಸರ್ಕಾರಿ ವಕೀಲರ ನೆರವಿನಿಂದಲೇ ಮೇಲ್ಮನವಿ ಸಲ್ಲಿಸಿದರು. ಶಿರಸಿ ನ್ಯಾಯಾಲಯದ ಸರ್ಕಾರಿ ನ್ಯಾಯವಾದಿ ರಾಜೇಶ ಎಂ ಮಳಗಿಕರ್ ಅವರು ಮಹಿಳೆಗೆ ಆದ ಅನ್ಯಾಯದ ಬಗ್ಗೆ ಸಂಪೂರ್ಣ ಮಾಹಿತಿಪಡೆದರು. ವಿವಿಧ ದಾಖಲೆ ಹಾಗೂ ಸಾಕ್ಷಿಗಳನ್ನು ಅವರು ಗಮನಿಸಿದರು. `ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಲೇ ಬೇಕು’ ಎಂದು ಅವರು ಸಂತ್ರಸ್ತೆ ಪರವಾಗಿ ಹೋರಾಟ ನಡೆಸಿದರು.
ಶಿರಸಿ ನಗರದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ಶುರುವಾಯಿತು. ಕಾರವಾರ ನ್ಯಾಯಾಲಯದ ಪೀಠಾಸೀನ ಕಿರಣ ಕಿಣಿ ಅವರು ಶಿರಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಾಗ ನ್ಯಾಯವಾದಿ ರಾಜೇಶ ಎಂ ಮಳಗಿಕರ್ ಅವರು ಮಹಿಳೆ ಅನುಭವಿಸಿದ ಸಮಸ್ಯೆಗಳ ಬಗ್ಗೆ ವಿವರಿಸಿದರು. ಕೆಳ ನ್ಯಾಯಾಲಯದಲ್ಲಿ ಆದ ಆದೇಶದಲ್ಲಿನ ಲೋಪಗಳ ಬಗ್ಗೆ ಅವರು ವಿವರವಾದ ಮಾಹಿತಿ ನೀಡಿದರು. ಮಹಿಳೆಯರ ಮೈಮುಟ್ಟುವವರಿಗೆ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದರು.
ಈ ಎಲ್ಲಾ ವಾದ ಆಲಿಸಿದ ನ್ಯಾಯಾಧೀಶ ಕಿರಣ ಕಿಣಿ ಅವರು ದಾಂಡೇಲಿ ನ್ಯಾಯಾಲಯ ನೀಡಿದ ಆದೇಶವನ್ನು ತಿರಸ್ಕರಿಸಿದರು. ಆರೋಪಿಯನ್ನು ಬಿಡುಗಡೆಗೊಳಿಸಿ ಕೆಳ ನ್ಯಾಯಾಲಯ ನೀಡಿದ ತೀರ್ಫನ್ನು ಬದಿಗೊತ್ತಿ ರಾಮಾ ಗೋಪಾಲ ದೇಸಾಯಿ ಅವರು ತಪ್ಪಿತಸ್ಥ ಎಂದು ಘೋಷಿಸಿದರು. ರಾಮಾ ಗೋಪಾಲ ದೇಸಾಯಿ ಅವರಿಗೆ 8 ಸಾವಿರ ರೂ ದಂಡ ವಿಧಿಸಿದ ನ್ಯಾಯಾಧೀಶರು ಸಂತ್ರಸ್ತ ಮಹಿಳೆಗೆ 2 ಸಾವಿರ ರೂ ಪರಿಹಾರ ನೀಡುವಂತೆ ಆದೇಶಿಸಿದರು.