ಅರಣ್ಯ ಅತಿಕ್ರಮಣದಾರರ ಮೇಲೆ ಪದೇ ಪದೇ ದಬ್ಬಾಳಿಕೆ ನಡೆಯುವುದನ್ನ ಖಂಡಿಸಿ ಅರಣ್ಯವಾಸಿಗಳು ಶಿರಸಿಯಲ್ಲಿ ಮಂಗಳವಾರ ಭಾರೀ ಪ್ರಮಾಣದ ಪ್ರತಿಭಟನೆ ನಡೆಸಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಪ್ರತಿಭಟನಾಕಾರರ ಮೆರವಣಿಗೆ ನಡೆದಿದ್ದು, ಈ ಪ್ರತಿಭಟನೆಯಲ್ಲಿ ಸಾವಿರಾರು ಜನ `ನಮ್ಮ ಭೂಮಿ ನಮ್ಮ ಹಕ್ಕು’ ಎಂಬ ಘೋಷಣೆ ಕೂಗಿದ್ದಾರೆ.
`ಅರಣ್ಯವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರಿಯೆ ಸ್ಥಗಿತಗೊಳಿಸಿ’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮೂರು ತಾಸುಗಳ ಕಾಲ ಧರಣಿ ನಡೆಸಿ ಕೊನೆಗೆ ಜಯಘೋಷದ ಜೊತೆ ಪ್ರತಿಭಟನೆ ಹಿಂಪಡೆದರು. ಅರಣ್ಯ ಭೂಮಿ ಹಕ್ಕು ಹೊರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಪ್ರತಿಭಟನೆ ಮುಂದಾಳತ್ವವಹಿಸಿದ್ದು, ಸಿಸಿಎಫ್ ಕಾರ್ಯಾಲಯದ ಬಳಿ ಜನ ಜಮಾಯಿಸಿದರು. ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್, ಶಿರಸಿ ಉಪವಿಭಾಗ ಅಧಿಕಾರಿ ಕಾವ್ಯಾರಾಣಿ, ಉಪಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ಅವರು ಜನರ ಅಹವಾಲು ಆಲಿಸಿದರು. ಆದರೆ, ಇದರಿಂದ ಪ್ರತಿಭಟನಾಕಾರರು ಮಣಿಯಲಿಲ್ಲ. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟುಹಿಡಿದರು.
`ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯ ಅತಿಕ್ರಮಣದಾರರ ಒಕ್ಕಲೆಬ್ಬಿಸುವ ಪ್ರಕ್ರಿಯೆ ಕೂಡಲೇ ಸ್ಥಗಿತಗೊಳಿಸಬೇಕು’ ಎಂದು ಜನ ಒತ್ತಾಯಿಸಿದರು. `ಅರಣ್ಯವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರಿಯೆ ತುರ್ತು ಸ್ಥಗಿತಗೊಳಿಸಿ, ಒಕ್ಕಲೆಬ್ಬಿಸುವ ಸಮಸ್ಯೆಗಳ ಕುರಿತು ಸರ್ಕಾರದ ಗಮನಕ್ಕೆ ತರಲಾಗುತ್ತದೆ’ ಎಂದು ಸಿಸಿಎಫ್ ಟಿ ಹೀರಾಲಾಲ್ ಅವರು ಸಮಾಲೋಚನಾ ಸಭೆಯಲ್ಲಿ ಹೇಳಿದರು. `ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಮೇಲೆ ದೌಜನ್ಯ ಜರುಗಿಸದಂತೆ ಸೂಚನೆ ನೀಡುವೆ’ ಎಂದವರು ಭರವಸೆ ನೀಡಿದರು. `ಜೊಯಿಡಾದಲ್ಲಿ ಅತಿಕ್ರಮಣದಾರರ ಮೇಲೆ ಜರುಗುತ್ತಿರುವ ದೌಜನ್ಯದ ಕುರಿತು ಮುಂದಿನ 15 ದಿನಗಳ ಒಳಗೆ ಜೋಯಿಡಾದಲ್ಲಿ ವಿಶೇಷವಾದ ಸಭೆ ಸಂಘಟಿಸಲಾಗುತ್ತದೆ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ ಹೀರಾಲಾಲ ಅವರು ಪ್ರತಿಭಟನಾಕಾರರಲ್ಲಿ ಹೇಳಿದರು.
ಈ ಮಾತಿನಿಂದ ಸಂತಸಗೊAಡ ಅರಣ್ಯ ಅತಿಕ್ರಮಣದಾರರು ಹೋರಾಟಗಾರ ರವೀಂದ್ರ ನಾಯ್ಕ ಅವರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿಸಿದರು. ಹೋರಾಟಗಾರರ ಪ್ರಮುಖರಾದ ಇಬ್ರಾಹೀಂ ಗೌಡಳ್ಳಿ, ರಾಜು ನರೇಬೈಲ್, ಮಂಜುನಾಥ ಮರಾಠಿ, ಶಿವನಾಂದ ಜೋಗಿ, ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ರಾಮ ಮರಾಠಿ ಯಲಕೊಟಗಿ, ಸುರೇಶ ಮೇಸ್ತ ಹೊನ್ನಾವರ, ರಾಜೇಶ್ ಮಿತ್ರ ನಾಯ್ಕ ಅಂಕೋಲ, ಅಣ್ಣಪ್ಪ ನಾಯ್ಕ ಅಣ್ಣೀಗೇರಿ, ಚಂದ್ರ ಪೂಜಾರಿ ಮಂಚಿಕೇರಿ, ಗಣಪತಿ ನಾಯ್ಕ ಬೆಡಸಗಾಂವ, ಹರಿಹರ ನಾಯ್ಕ, ದೇವರಾಜ ಗೊಂಡ ಭಟ್ಕಳ, ಮಹೇಶ್ ಸಾಲ್ಕೋಡ, ನೆಹರು ನಾಯ್ಕ, ಎಮ್ ಆರ್ ನಾಯ್ಕ, ರಾಘು ಕವಂಚೂರು, ರಫೀಕ್, ಸುಭಾಷ್ ಗಾವಡಾ, ಅನಿತಾ ಲೋಫಿಸ್, ಮಲ್ಲೇಶಿ, ಸ್ವಾತಿ ಜೈನ್ ಮುಂತಾದವರು ಉಪಸ್ಥಿತರಿದ್ದರು.