ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಕುಮಟಾ-ಹೊನ್ನಾವರ ಭಾಗದ ಮರಳು ರಾತ್ರಿ ವೇಳೆ ಶಿರಸಿ-ಸಿದ್ದಾಪುರಕ್ಕೆ ಸಾಗಾಟವಾಗುತ್ತಿದೆ. ಅಕ್ರಮ ಮರಳುಗಾರಿಕೆ ತಡೆಯಲು ರಾತ್ರಿ ಕಾರ್ಯಾಚರಣೆಗಿಳಿದ ಭೂ ವಿಜ್ಞಾನಿ ಆಶಾ ಎಂ ಎಸ್ ಅವರೊಂದಿಗೆ ದಂಧೆಕೋರರು ಅನುಚಿತವಾಗಿ ವರ್ತಿಸಿದ್ದಾರೆ. ತಮ್ಮನ್ನು ಅಡ್ಡಗಟ್ಟಿದವರನ್ನು ಸಮರ್ಥವಾಗಿ ಎದುರುಸಿದ ಆಶಾ ಅವರು ಆರೋಪಿತರೆಲ್ಲರೂ ಕೋರ್ಟು-ಕಚೇರಿ ಅಲೆದಾಡುವ ಹಾಗೇ ಮಾಡಿದ್ದಾರೆ!
ಆಶಾ ಎಂ ಎಸ್ ಅವರು ಕಳೆದ 3 ವರ್ಷದಿಂದ ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಹಿರಿಯ ಭೂ ವಿಜ್ಞಾನಿಯಾಗಿದ್ದಾರೆ. ಖಡಕ್ ಅಧಿಕಾರಿಯಾಗಿ ಹೆಸರು ಮಾಡಿದ ಅವರು ಅಕ್ರಮ ದಂಧೆಕೋರರ ವಾಹನಗಳನ್ನು ವಶಕ್ಕೆಪಡೆದು ದಂಡ ವಿಧಿಸುತ್ತಿದ್ದಾರೆ. ಅಕ್ರಮ ಮರಳುಗಾರಿಕೆ ದೂರಿನ ಹಿನ್ನಲೆ ಆಶಾ ಅವರು ತಮ್ಮ ಸಿಬ್ಬಂದಿ ಜೊತೆ ವಿವಿಧ ಕಡೆ ದಿಢೀರ್ ದಾಳಿ ಮಾಡುತ್ತಿದ್ದಾರೆ. ಸರ್ಕಾರಕ್ಕೆ ವಂಚಿಸಿ, ಪರಿಸರಕ್ಕೂ ಹಾನಿ ಮಾಡುವವರ ಹೆಡೆಮುಡಿ ಕಟ್ಟುವ ಕೆಲಸದಲ್ಲಿ ಅವರು ನಿರತರಾಗಿದ್ದಾರೆ. ಹೀಗಾಗಿ ಮರಳುಗಾರಿಕೆ ನಡೆಸುವವರು ಈ ಮಹಿಳಾ ಅಧಿಕಾರಿಗೆ ಹೆದರುತ್ತಿದ್ದು, ಅವರ ಕಣ್ತಪ್ಪಿಸಿ ದಂಧೆ ನಡೆಸಲು ಹರಸಾಹಸ ಮಾಡುತ್ತಿದ್ದಾರೆ.
ನವೆಂಬರ್ 12ರಂದು ಅಕ್ರಮ ಮರಳುಗಾರಿಕೆ ನಡೆಸುವವರನ್ನು ಪತ್ತೆ ಮಾಡುವುದಕ್ಕಾಗಿ ಆಶಾ ಅವರು ರಾತ್ರಿ ಕಾರ್ಯಾಚರಣೆಗಿಳಿದಿದ್ದರು. ಆ ದಿನ ರಾತ್ರಿ 8 ಗಂಟೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಹರೀಶ ಕೆ, ಮಂಜುನಾಥ ದೇವಾಡಿಗ, ಕಚೇರಿ ಸಿಬ್ಬಂದಿ ಸಂತೋಷ ನಾಯ್ಕ, ವಾಹನ ಚಾಲಕ ಸಂಜಯ ನಾಯ್ಕ ಅವರ ಜೊತೆ ಅಂಕೋಲಾ-ಕುಮಟಾ ಮಾರ್ಗವಾಗಿ ಸರ್ಕಾರಿ ಜೀಪಿನಲ್ಲಿ ಹೊರಟಿದ್ದರು. ನಾಲ್ಕು ಲಾರಿಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿದ್ದ ಮಾಹಿತಿ ಆಧರಿಸಿ ಅವರು ಆ ಲಾರಿಗಳ ಬೆನ್ನತ್ತಿದ್ದರು.
ಭೂ ವಿಜ್ಞಾನಿ ಹಾಗೂ ಅಧಿಕಾರಿಗಳ ತಂಡದವರು ಹೊನ್ನಾವರ ತಾಲೂಕಿನ ಚಂದಾವರದ ಬಳಿ ನ 13ರ ನಸುಕಿನ 3 ಗಂಟೆಗೆ ಲಾರಿಗೆ ಅಡ್ಡಲಾಗಿ ಕೈ ಮಾಡುವ ಪ್ರಯತ್ನದಲ್ಲಿದ್ದು, ಆ ವೇಳೆ ಮೂರು ಕಾರಿನಲ್ಲಿ ಬಂದ ಐದು ಜನ ಸರ್ಕಾರಿ ವಾಹನವನ್ನು ಬಂದು ಅಡ್ಡಗಟ್ಟಿದರು. ಆ ಕಾರಿನಲ್ಲಿದ್ದ ಜನ ಗಣಿ ಇಲಾಖೆಯ ಸರ್ಕಾರಿ ಜೀಪನ್ನು ಹಿಂಬಾಲಿಸುವುದು, ಅಧಿಕಾರಿಗಳು ಹೋಗುವ ಮಾರ್ಗದ ಬಗ್ಗೆ ಅಕ್ರಮ ಮರಳು ಸಾಗಾಟಗಾರರಿಗೆ ಮಾಹಿತಿ ಕೊಡುವುದು ಹಾಗೂ ಮರಳು ಸಾಗಾಣಿಕಾ ವಾಹನ ಬೇರೆ ಮಾರ್ಗದ ಮೂಲಕ ಸಂಚರಿಸುವ ಸೂಚನೆ ನೀಡುವ ಕೆಲಸ ಮಾಡುತ್ತಿದ್ದರು.
ಸರ್ಕಾರಿ ಜೀಪಿನಲ್ಲಿದ್ದ ಅಧಿಕಾರಿ ಮಹಿಳೆ ಎಂಬುದನ್ನು ಸಹ ಗಮನಿಸದೇ ದಂಧೆಕೋರರು ಅನುಚಿತವಾಗಿ ವರ್ತಿಸಲು ಶುರು ಮಾಡಿದ್ದರು. ಇದರಿಂದ ಸಿಟ್ಟಾದ ಹಿರಿಯ ಭೂ ವಿಜ್ಞಾನಿ ಆಶಾ ಅವರು ತಮ್ಮ ವಾಹನದಿಂದ ಇಳಿದು ವ್ಯಕ್ತಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡರು. ಆ ವೇಳೆ ಕಾರಿನಲ್ಲಿ ಹಿಂಬಾಲಿಸುತ್ತಿದ್ದವ ಕೈ ಮುಗಿದು ಕ್ಷಮೆ ಕೇಳಿದರಾದರೂ ಹಿಂಬಾಲಿಸುವುದನ್ನು ಮಾತ್ರ ಬಿಡಲಿಲ್ಲ. ಆ ಮೂರು ಕಾರಿನಲ್ಲಿದ್ದವರು ಚಂದಾವರದಿoದ ಸಾಂತಗಲ್, ಬಡಾಳ, ಸಂತೆಗುಳಿ, ಕುಮಟಾ, ಅಂಕೋಲಾದವರೆಗೂ ಸರ್ಕಾರಿ ವಾಹನ ಹಿಂಬಾಲಿಸಿ ಸರ್ಕಾರಿ ಅಧಿಕಾರಿಗಳಿಗೆ ಸಮಸ್ಯೆ ಮಾಡಿದರು. ಅಕ್ರಮ ಮರಳು ಸಾಗಾಟಗಾರರು ಅಲ್ಲಿಂದ ತಪ್ಪಿಸಿಕೊಳ್ಳುವ ಹಾಗೇ ಸಹಾಯ ಮಾಡಿದರು.
ಬೆಳಗ್ಗೆ 8 ಗಂಟೆಯವರೆಗೂ ಮಹಿಳಾ ಅಧಿಕಾರಿ ಹಾಗೂ ಅವರ ವಾಹನವನ್ನು ದಂಧೆಕೋರರು ಸುತ್ತುವರೆದು ಹಿಂಬಾಲಿಸುತ್ತಲೇ ಇದ್ದರು. ಸರ್ಕಾರಿ ವಾಹನ ಅಂಕೋಲಾಗೆ ಬರುವ ವೇಳೆಗೆ ಅವರೆಲ್ಲರೂ ನಾಪತ್ತೆಯಾದರು. ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಹಿರಿಯ ಭೂ ವಿಜ್ಞಾನಿ ಆಶಾ ಅವರು ವಿಡಿಯೋ ಮಾಡಿಕೊಂಡಿದ್ದು, ಅದೇ ಆಧಾರದ ಮೇಲೆ ಪೊಲೀಸರ ಮೊರೆ ಹೋದರು. ಸರ್ಕಾರಿ ಕರ್ತವ್ಯ ನಿರ್ವಹಣೆಯಲ್ಲಿ ತಮಗಾದ ಸಮಸ್ಯೆ ಬಗ್ಗೆ ಪೊಲೀಸರಲ್ಲಿ ವಿವರಿಸಿದರು. ಸಮಸ್ಯೆ ಮಾಡಿದ ಐವರ ಕಾರಿನ ವಿವರ ಹಾಗೂ ಪರಿಚಯವಿದ್ದ ಅಕ್ರಮ ದಂಧೆಕೋರ ವಿನಾಯಕ ಮಾಣಿ ಎಂಬಾತರ ಹೆಸರನ್ನು ನಮೂದಿಸಿ ದೂರು ನೀಡಿದರು. ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ತುರ್ತು ಸನ್ನಿವೇಶದಲ್ಲಿ ರಕ್ಷಣೆಗಾಗಿ ಪೊಲೀಸರ ಸಹಾಯಪಡೆಯುವ ಅವಕಾಶವಿದ್ದರೂ ಗಣಿ ಇಲಾಖೆಯವರು ಆ ಕೆಲಸ ಮಾಡಿಲ್ಲ. 112ಗೆ ಫೋನ್ ಮಾಡಿದ ಕ್ಷಣಮಾತ್ರದಲ್ಲಿ ಪೊಲೀಸರು ಸ್ಥಳಕ್ಕೆ ಬರುವ ವ್ಯವಸ್ಥೆ ಇದ್ದರೂ ಅದನ್ನು ಬಳಸಿಕೊಂಡಿಲ್ಲ.
`ತುರ್ತು ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸಲು 112ಗೆ ಫೋನ್ ಮಾಡಿ’