ಸರ್ಕಾರಿ ಬಸ್ಸಿನಲ್ಲಿ ಮೊಬೈಲ್ ಚಾರ್ಜ ಹಾಕಿದ್ದ ಪ್ರಯಾಣಿಕರೊಬ್ಬರು ಮೊಬೈಲ್ ಚಾರ್ಜ ಆಗದ ಕಾರಣ ಬಸ್ ಕಂಡೆಕ್ಟರ್’ರನ್ನು ಥಳಿಸಿದ್ದಾರೆ. ಜೊತೆಗೆ ಬಸ್ಸಿನಲ್ಲಿದ್ದ ಚಾರ್ಜಿಂಗ್ ಬೋರ್ಡ ಕಿತ್ತು ಬಿಸಾಕಿದ್ದಾರೆ!
ಯಲ್ಲಾಪುರ ಬಸ್ ಡಿಪೋದ ವೀರಭದ್ರಯ್ಯ ಮಠದ್ ಅವರು ಯಲ್ಲಾಪುರ-ಹುಬ್ಬಳ್ಳಿ-ಮಂಗಳೂರು ಬಸ್ ಚಾಲಕರಾಗಿದ್ದರು. ಆ ಬಸ್ಸಿನ ನಿರ್ವಾಹಕರು ಅವರೇ ಆಗಿದ್ದರು. ಕುಂದಾಪುರದಲ್ಲಿ ಸವದತ್ತಿಯ ಚಂದ್ರಶೇಖರ ಕಿತ್ತಲಿ ಅವರು ಆ ಬಸ್ಸು ಹತ್ತಿದರು. ಹುಬ್ಬಳ್ಳಿಗೆ ಹೋಗಲು ಅವರು ಟಿಕೆಟ್ಪಡೆದರು. ಈ ವೇಳೆ ಚಂದ್ರಶೇಖರ ಕಿತ್ತಲಿ ಅವರ ಮೊಬೈಲ್ ಚಾರ್ಜ ಖಾಲಿಯಾಗಿತ್ತು. ಹೀಗಾಗಿ ಅವರು ಟಿಕೆಟ್ ತೆಗೆಯುವ ಇಟಿಎಂ ಮಿಶನ್ ಚಾರ್ಜ ಮಾಡುವ ಬಾಕ್ಸಿನೊಳಗೆ ಮೊಬೈಲ್ ಮಡಗಿ ಬಟನ್ ಒತ್ತಿದ್ದರು.
ತಾಸು ಕಳೆದರೂ ಚಂದ್ರಶೇಖರ ಕಿತ್ತಲಿ ಅವರ ಮೊಬೈಲ್ ಚಾರ್ಜ ಆಗಿರಲಿಲ್ಲ. ಹೀಗಾಗಿ ಬಸ್ಸಿನ ಅವ್ಯವಸ್ಥೆಯ ಬಗ್ಗೆ ಅವರು ಜೋರಾದರು. ಕಂಡೆಕ್ಟರ್ ಜೊತೆ ಜಗಳವಾಡಿದರು. ಆ ಬಸ್ಸು ಸಿದ್ದಾಪುರಕ್ಕೆ ಬಂದಾಗ ವೀರಭದ್ರಯ್ಯ ಮಠದ್ ಅವರ ಬಳಿಯಿದ್ದ ಇಟಿಎಂ ಮಿಶನ್ ಚಾರ್ಜ ಆಗುವುದನ್ನು ಚಂದ್ರಶೇಖರ ಕಿತ್ತಲಿ ಅವರು ನೋಡಿದರು. `ನನ್ನ ಮೊಬೈಲ್ ಚಾರ್ಜ ಆಗಿಲ್ಲ. ನಿಮ್ಮ ಮಿಶನ್ ಹೇಗೆ ಚಾರ್ಜ ಆಗುತ್ತಿದೆ?’ ಎಂದು ಪ್ರಶ್ನಿಸಿ ದಬಾಯಿಸಿದರು.
ಬಸ್ಸು ಸಿದ್ದಾಪುರದ ಭಗತ್ ಸಿಂಗ್ ಸರ್ಕಲ್ ಬಳಿ ತಲುಪಿದಾಗ ವೀರಭದ್ರಯ್ಯ ಮಠದ್ ಅವರ ಮೇಲೆ ಚಂದ್ರಶೇಖರ ಕಿತ್ತಲಿ ಅವರು ಹಲ್ಲೆ ಮಾಡಿದರು. ಬಸ್ಸಿನಲ್ಲಿದ್ದ ಚಾರ್ಜಿಂಗ್ ಬೋರ್ಡ ಕಿತ್ತು ಬಿಸಾಡಿದರು. ಈ ಎಲ್ಲಾ ವಿದ್ಯಮಾನದ ಬಗ್ಗೆ ವೀರಭದ್ರಯ್ಯ ಮಠದ್ ಅವರು ಸಿದ್ದಾಪುರದಲ್ಲಿ ಪೊಲೀಸ್ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು. ಪೊಲೀಸ್ ಸಿಬ್ಬಂದಿ ಸುರೇಶ ಕೋರವರ್ ಅವರು ತನಿಖೆ ಶುರು ಮಾಡಿದ್ದಾರೆ.