ಮಕ್ಕಳಾಗದವರ ಮನೆಗೆ ಬಂದು ಔಷಧಿ ಕೊಡುವ ನೆಪದಲ್ಲಿ ಹಣ ದೋಚಿ ಪರಾರಿಯಾಗುವ ಜಾಲ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಕ್ರಿಯವಾಗಿದೆ. ಅವರು ಕೊಟ್ಟ ಗುಳುಗೆ ತಿಂದವರು ದರೋಡೆಗೆ ಒಳಗಾಗುತ್ತಿದ್ದಾರೆ.
ಕಾರವಾರದ ಚಿತ್ತಾಕುಲದಲ್ಲಿ ತಿಂಗಳ ಹಿಂದೆ ಆರೋಗ್ಯ ಸಿಬ್ಬಂದಿ ಹೆಸರಿನಲ್ಲಿ ಮನೆ ಮನೆಗೆ ಭೇಟಿ ನೀಡಿದ ಅಪರಿಚಿತರು ಮಕ್ಕಳಾಗದ ಮಹಿಳೆಯೊಬ್ಬರಿಗೆ ಗುಳುಗೆ ಕೊಟ್ಟು 40 ಸಾವಿರ ರೂ ಎಗರಿಸಿದ್ದಾರೆ. ಭಟ್ಕಳದ ವಿವಿಧ ಗ್ರಾಮಗಳಲ್ಲಿಯೂ ಅಂಥವರು ಸಂಚರಿಸಿದ್ದಾರೆ. ಸದ್ಯ ಅಂಕೋಲಾದ ಹಳ್ಳಿ ಹಳ್ಳಿಗಳಿಗೂ ಅಪರಿಚಿತ ಔಷಧ ತಂಡದವರು ತಿರುಗಾಡುತ್ತಿದ್ದು, ಅವರು ಕೊಟ್ಟ ಗುಳುಗೆ ತಿಂದವರು ಮೂರ್ಚೆ ಹೋಗುತ್ತಿದ್ದಾರೆ.
ಕಾರವಾರದ ಪ್ರಮೋದ ನಾಯ್ಕ ಎಂಬಾತರ ಕುಟುಂಬಕ್ಕೆ ಈ ತಂಡದಿAದ ಮೋಸವಾದ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಗ್ಯ ಇಲಾಖೆ ಹೆಸರು ಹೇಳಿ ಉಚಿತ ಚಿಕಿತ್ಸೆ ಎಂದು ಪರಿಚಯಿಸಿಕೊಂಡ ವಂಚಕರು `ಮಕ್ಕಳಾಗದವರಿಗೆ ಔಷಧಿ ಕೊಡುತ್ತೇವೆ’ ಎಂದು ನಂಬಿಸಿ 40 ಸಾವಿರ ರೂ ವಂಚಿಸಿದ ಬಗ್ಗೆ ಪ್ರಮೋದ ನಾಯ್ಕ ಅವರೇ ದೂರಿದ್ದಾರೆ. ಅಕ್ಟೊಬರ್ 9ರಂದು ಕಾರವಾರದಲ್ಲಿ ಮೋಸ ಮಾಡಿದ ಈ ಜಾಲದವರು ಅಕ್ಟೊಬರ್ 14ರಂದು ಭಟ್ಕಳ ಪ್ರವೇಶಿಸಿದ್ದಾರೆ. ನವೆಂಬರ್ 5ರಂದು ಅಂಕೋಲಾದ ವಿವಿಧ ಹಳ್ಳಿಗಳಿಗೆ ಸುತ್ತಾಟ ಮಾಡಿದ್ದಾರೆ.
ಬಿಳಿ ಬಣ್ಣದ ಕಾರಿನಲ್ಲಿ ಬಂದಿದ್ದ ವಂಚಕರು ಚಿಕಿತ್ಸೆ ನೀಡುವ ಬಗ್ಗೆ ಹೇಳಿಕೊಳ್ಳುತ್ತಾರೆ. ಪಾರ್ಶ್ವವಾಯು ಪೀಡಿತರು, ಮಕ್ಕಳಾಗದ ದಂಪತಿಗಳು ಸೇರಿ ಅನೇಕರಿಗೆ ಒಂದೇ ಬಗೆಯ ಗುಳುಗೆ ಕೊಡುತ್ತಾರೆ. ಕೆಲವಡೆ `ಬೆಂಗಳೂರಿನ ಸಾಯಿಬಾಬಾ ಆಸ್ಪತ್ರೆಯಿಂದ ಪ್ರಚಾರಕ್ಕೆ ಬಂದಿದ್ದೇವೆ. ಉಚಿತ ಔಷಧಿ ಕೊಡುತ್ತೇವೆ’ ಎಂದು ಸಹ ಹೇಳಿಕೊಳ್ಳುತ್ತಿದ್ದು, ಕ್ಷಣಮಾತ್ರದಲ್ಲಿಯೇ ಮೋಸ ಮಾಡಿ ಪರಾರಿಯಾಗುತ್ತಿದ್ದಾರೆ.